ADVERTISEMENT

ಉದ್ಯಮದಿಂದ ರಾಜಕೀಯಕ್ಕೆ ಹೊರಳಿ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿದ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2018, 9:05 IST
Last Updated 9 ಮೇ 2018, 9:05 IST

ಕೊಳ್ಳೇಗಾಲ: ಮೀಸಲು ವಿಧಾನಸಭಾ ಕ್ಷೇತ್ರವಾದ ಕೊಳ್ಳೇಗಾಲದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ರಂಗೇರುತ್ತಿದೆ. ಯಾವಾಗಲೂ ನೇರ ಹಣಾಹಣಿ ಏರ್ಪಡುತ್ತಿದ್ದು, ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ವಿಶೇಷ.

ಇದರಲ್ಲಿ ಎ.ಆರ್.ಕೃಷ್ಣಮೂರ್ತಿ ರಾಜಕೀಯ ಕುಟುಂಬದಿಂದ ಬಂದವರು ಮತ್ತು ಎನ್.ಮಹೇಶ್ ಹಾಗೂ ಜಿ.ಎನ್.ನಂಜುಂಡಸ್ವಾಮಿ ಅವರು ವೃತ್ತಿಗೆ ರಾಜೀನಾಮೆ ನೀಡಿ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವರಾಗಿದ್ದಾರೆ.

ಸಾಮ್ಯತೆ ಎಂದರೆ, ಮೂವರೂ ಶಿಕ್ಷಿತರೇ ಆಗಿದ್ದಾರೆ. ಎ.ಆರ್.ಕೃಷ್ಣಮೂರ್ತಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದಿದ್ದರೆ, ಜಿ.ಎನ್.ನಂಜುಂಡಸ್ವಾಮಿ ಎಂ.ಎ. ಎಲ್.ಎಲ್.ಬಿ ಪೂರೈಸಿದ್ದಾರೆ. ಎನ್.ಮಹೇಶ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ADVERTISEMENT

ಎನ್.ಮಹೇಶ್

ಬಡವರ ಕುಟುಂಬದಿಂದ ಬಂದವರು ಎಂದೇ ಇವರು ಇಲ್ಲಿ ಹೆಸರಾಗಿದ್ದಾರೆ. ‘ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಂಕನಪುರ ಗ್ರಾಮದಲ್ಲಿ ತಂದೆ ಜೀತ ಮಾಡುತ್ತಿದ್ದರು. ತೀರಾ ಕಷ್ಟದಲ್ಲೇ ಸ್ನಾತಕೋತ್ತರ ಪದವಿ ಮುಗಿಸಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದೆ. ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ನಂತರ, ಇವರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದಾಗ ತಮ್ಮ ಹತ್ತಿರ ಬಂದ ಬಡಕುಟುಂಬಗಳಿಗೆ ಸರ್ಕಾರಿ ಸವಲತ್ತು ಕಲ್ಪಿಸಿಕೊಡುವುದಕ್ಕೆ ಶ್ರಮಿಸುತ್ತಿದ್ದರು. ಆಗ ಇಲ್ಲಿಯ ಒಬ್ಬ ಸ್ಥಳೀಯ ಶಾಸಕರು ಇವರ ಮೇಲೆ ಸ್ವಜನಪಕ್ಷಪಾತದ ಆರೋಪ ಹೊರಿಸಿದಾಗ ಬೇಸರಗೊಂಡು ‘ಯಾವ ಜಾತಿಯ ಪರವೂ ಅಲ್ಲ ಯಾವ ಜಾತಿಯ ವಿರುದ್ಧವೂ ನಾನಿಲ್ಲ’ ಎಂದು ವೃತ್ತಿಗೆ ರಾಜೀನಾಮೆ ನೀಡಿದರು.

ಅಷ್ಟೊತ್ತಿಗೆ ದೇಶಾದ್ಯಂತ ಪಸರಿಸಿದ್ದ ಬಿಎಸ್‍ಪಿಯ ಕಾನ್ಸಿರಾಂ ಅವರ ಹೋರಾಟ ಮತ್ತು ವ್ಯಕ್ತಿತ್ವಕ್ಕೆ ಮಾರುಹೋಗಿ 2002ರಲ್ಲಿ ರಾಜ್ಯ ದಲ್ಲಿ ಬಿಎಸ್‍ಪಿ ಕಟ್ಟಿ 2004ರಲ್ಲಿ ಮೊದಲನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುತ್ತಾರೆ. ನಂತರ 2008 ಹಾಗೂ 2013ರಲ್ಲೂ ಸೋಲನ್ನು ಕಂಡು, ಇದೀಗ ಮತ್ತೆ ಚುನಾವಣಾ ಕಣದಲ್ಲಿದ್ದಾರೆ.

ಉದ್ಯಮಿಯಾಗಿದ್ದವರು ರಾಜಕಾರಣ ದತ್ತ ಹೊರಳಿದಾಗ

ಬಹುದೊಡ್ಡ ರಾಜಕಾರಣಿ ಎಂದೇ ಹೆಸರಾಗಿದ್ದ ಎನ್.ರಾಚಯ್ಯ ಅವರ ಕುಟುಂಬದಲ್ಲಿ ಜನಿಸಿದರೂ ಎ.ಆರ್.ಕೃಷ್ಣಮೂರ್ತಿಗೆ ರಾಜ ಕಾರಣದತ್ತ ಆಸಕ್ತಿ ಇರಲಿಲ್ಲ. ಪೆಟ್ರೋಲ್ ಬಂಕ್‌ವೊಂದನ್ನು ನೋಡಿಕೊಂಡು ಆರಾಮ ವಾಗಿ ಜೀವನ ನಡೆಸುತ್ತಿದ್ದರು. ಆದರೆ, 1989ರಲ್ಲಿ ಇವರ ತಂದೆ ರಾಚಯ್ಯ ಅವರು ಹಾಸಿಗೆ ಹಿಡಿದಾಗ ರಾಮಕೃಷ್ಣ ಹೆಗಡೆ ಹಾಗೂ ಗುರುಪಾದಸ್ವಾಮಿ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇವರನ್ನು ರಾಜಕಾರಣದತ್ತ ಬರಲು ಪ್ರೇರೇಪಿಸಿದರು. ಆಗ ಇವರಿಗೆ ಕೇವಲ 27 ವರ್ಷ ವಯಸ್ಸು. ಮೊದಲ ಚುನಾವಣೆಯಲ್ಲಿಯೇ ಇವರು 12 ಸಾವಿರ ಅಂತರದಿಂದ ಜಯ ಸಾಧಿಸಿದರು. ನಂತರ, ಇವರು ಬಿಡುತ್ತೇನೆ ಎಂದರೂ ರಾಜಕಾರಣ ಇವರನ್ನು ಬಿಡಲಿಲ್ಲ. ನಂತರ, ಗೆಲುವು ಸಾಧಿಸಿದರೂ, 2004ರಲ್ಲಿ ಒಂದು ಮತದ ಅಂತರದಿಂದ ಸೋಲು ಅನುಭವಿಸಿದರು. ನಂತರದ ಎಲ್ಲ ಚುನಾವಣೆಯಲ್ಲಿ ನಿರಾಸೆ ಅನುಭವಿಸಿರುವ ಇವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಜಿ.ಎನ್.ನಂಜುಂಡಸ್ವಾಮಿ

ರೈತ ಕುಟುಂಬದಿಂದ ಬಂದವರು ಇವರು. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬಣವೆ ಎಂಬ ಗ್ರಾಮದವರು. ಎಂ.ಎ. ಎಲ್.ಎಲ್.ಬಿ ಮುಗಿಸಿ ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಇವರು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರೂ ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿದ್ದರು. ಫುಟ್‍ಬಾಲ್ ಎಂದರೆ ಇವರಿಗೆ ಪಂಚಪ್ರಾಣ. ಇವರ ಚಿಂತನೆ, ಭಾಷೆಯ ಶೈಲಿ ನೋಡಿದ ಒಬ್ಬರು, ರಾಜಕಾರಣದಲ್ಲಿ ಉತ್ತಮ ಹೆಸರು ಮಾಡಬಹುದು ಎಂಬ ಸಲಹೆ ನೀಡಿದರು. ಈ ಸಲಹೆಯಂತೆ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದರು.

ಇವರು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದಾರೆ. 1999ರಂದು ಕಾಂಗ್ರೆಸ್ ಪಕ್ಷದಿಂದ, 2009ರಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಒಟ್ಟು 5 ಬಾರಿ ಸ್ಪರ್ಧಿಸಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

– ಅವಿನ್‌ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.