ADVERTISEMENT

ಕೆಜೆಪಿ, ಬಿಎಸ್‌ಆರ್ ವಿಲೀನಕ್ಕೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 9:50 IST
Last Updated 25 ಜೂನ್ 2013, 9:50 IST

ಚಾಮರಾಜನಗರ:ಪ್ರತ್ಯೇಕಗೊಂಡಿರುವ ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಒಗ್ಗೂಡಿದರೆ  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ನಿಶ್ಚಿತ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಂದಕವಾಡಿಯಲ್ಲಿ ಈಚೆಗೆ ನಡೆದ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಮಟ್ಟದ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಪಕ್ಷದ ಆಂತರಿಕ ಗೊಂದಲದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಎದುರಾಯಿತು. ಜನರು ಬಿಜೆಪಿಯನ್ನು ತಿರಸ್ಕರಿಸಿಲ್ಲ ಎಂಬುದು ಸ್ಪಷ್ಟ. ಬಿಜೆಪಿಯಿಂದ ಇಬ್ಭಾಗವಾಗಿರುವ ಪಕ್ಷಗಳು ಪಡೆದಿರುವ ಮತ ಹಾಗೂ ಬಿಜೆಪಿ ಪಡೆದಿರುವ ಮತಗಳನ್ನು ಹೋಲಿಕೆ ಮಾಡಿದರೆ ಕಾಂಗ್ರೆಸ್ ಪಡೆದಿರುವ ಶೇಕಡವಾರು ಮತಗಳು ಕಡಿಮೆ ಎಂದು ಹೇಳಿದರು.

ಪಕ್ಷದ ವರಿಷ್ಠರು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಎಸ್‌ಆರ್ ಪಕ್ಷದೊಂದಿಗೆ ವಿಲೀನ ಸಂಬಂಧ ಸಮಾಲೋಚನೆ ನಡೆಸುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿ ಕೇಂದ್ರದಲ್ಲಿ ಸುಭದ್ರವಾದ ಸರ್ಕಾರ ನೀಡುವ ಸಾಮರ್ಥ್ಯ ಬಿಜೆಪಿಗೆ ಇದೆ. ಪಕ್ಷದಿಂದ ಹೊರ ಹೋಗಿರುವವರನ್ನು ಕರೆತರಲು ಎಲ್ಲ ಪ್ರಯತ್ನ ನಡೆಯುತ್ತಿದ್ದು, ಫಲಪ್ರದವಾಗುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಮುಂಬರುವ ಚುನಾವಣೆ ಎದುರಿಸಲು ಸಜ್ಜಾಗಬೇಕಿದೆ. ಗ್ರಾಮ ಪಂಚಾಯಿತಿಮಟ್ಟದಿಂದಲೂ ಸಮಿತಿ ರಚನೆ ಮಾಡಿ ಸಕ್ರಿಯಗೊಳಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಜನಜಾಗೃತಿ ಮೂಡಿಸಲು ಸಂಘಟಿತರಾಗಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಎಸ್. ನಿತ್ಯಾ, ಚುನಾವಣಾ ವೀಕ್ಷಕರಾದ ಯು.ಎಂ. ಮಲ್ಲೇಶ್, ಕಮರವಾಡಿ ರೇವಣ್ಣ, ಸುಧಾ ಮಲ್ಲಣ್ಣ, ಪಕ್ಷದ ಜಿಲ್ಲಾ ಸಂಚಾಲಕ ಶೈಲೇಶ್, ಬಿ. ಬಾಲಸುಬ್ರಮಣ್ಯ, ಆರ್. ಮಹದೇವು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಪುಟ್ಟಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.