ADVERTISEMENT

ಗ್ರಾಮೀಣಾಭಿವೃದ್ಧಿಗೆ ಎನ್‌ಎಸ್‌ಎಸ್ ಸಹಕಾರಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 8:35 IST
Last Updated 12 ಅಕ್ಟೋಬರ್ 2011, 8:35 IST

ಸಂತೇಮರಹಳ್ಳಿ: `ಗ್ರಾಮಗಳಲ್ಲಿ ಶ್ರಮದಾನ ಮೂಲಕ ಅಭಿವೃದ್ಧಿಗೆ ಒತ್ತು ನೀಡಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ~ ಎಂದು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಬಿ.ಪಿ. ಪುಟ್ಟಬುದ್ಧಿ ತಿಳಿಸಿದರು.

ಸಮೀಪದ ಮೂಡಲಅಗ್ರಹಾರ ಗ್ರಾಮದಲ್ಲಿ ಈಚೆಗೆ ಯಳಂದೂರು ಬಿಳಿಗಿರಿ ಪ್ರಥಮದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ಶಿಬಿರಾರ್ಥಿಗಳು ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ತಿಳಿವಳಿಕೆ ನೀಡಬೇಕು. ಕೋಮುಸೌಹಾರ್ದ ಮೂಡಿಸಲು ಶಿಬಿರಗಳು ಸಹಕಾರಿಯಾಗಬೇಕು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಭಾಗವಹಿಸಿದಾಗ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಜತೆಗೆ, ಗ್ರಾಮೀಣರ ಬದುಕು ಅರಿಯಲು ಸಹಕಾರಿಯಾಗಲಿದೆ ಎಂದರು.

ಜಾತಿಯತೆ, ಭ್ರಷ್ಟಾಚಾರದ ವಿರುದ್ಧ ಅರಿವು ಮೂಡಿಸಬೇಕಿದೆ. ಅಣ್ಣಾ ಹಜಾರೆ ಅವರನ್ನು ಯುವಕರು ಬೆಂಬಲಿದ್ದರಿಂದಲೇ ಕೇಂದ್ರ ಸರ್ಕಾರ ನಡುಗಿತು. ಆದ್ದರಿಂದ ಸಮಾಜ ಸುಧಾರಿಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು ಎಂದರು.

ಪ್ರಾಂಶುಪಾಲ ಪುಷ್ಪಕುಮಾರ್ ಮಾತನಾಡಿ, ಗಾಂಧೀಜಿ ಅವರ ಕನಸು ನನಸು ಮಾಡಲು ಯುವಕರು ಮುಂದಾಗಬೇಕು. ದೇಶದ ಸಮಸ್ಯೆ ಅರ್ಥಮಾಡಿಕೊಂಡು ಹೋರಾಟ ಮಾಡಬೇಕಿದೆ. ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಸಮಾಜದಲ್ಲಿರುವ ಅಸಮಾನತೆ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.

ಸರಳತೆ, ಸಮಾನತೆ, ಸ್ವಾತಂತ್ರ್ಯದ ಅರ್ಥವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸಮಾಜದ ಪ್ರತಿಯೊಂದು ಸಮಸ್ಯೆಗೂ ಶಿಕ್ಷಣದ ಕೊರತೆಯೇ ಕಾರಣ. ಈ ಹಿನ್ನೆಲೆಯಲ್ಲಿ ಗ್ರಾಮೀಣರಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಹೇಳಬೇಕು ಎಂದರು.

ಕಾರ್ಯಕ್ರಮದಲ್ಲಿ ದೇಮಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಮುಖ್ಯಶಿಕ್ಷಕಿ ಜಯಮ್ಮ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರಮೂರ್ತಿ, ಮುಖಂಡರಾದ ಟಿ.ಕೆ. ರಂಗಯ್ಯ, ಗುರುಸಿದ್ದಶೆಟ್ಟಿ, ಶಾಂತಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.