ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವಲ್ಲಿ ನಿಷ್ಠಾವಂತರನ್ನು ಕಡೆಗಣಿಸಿದೆ ಎಂದು ಟಿಕೆಟ್ ಕೈತಪ್ಪಿದ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಲಾಬಾಯಿ ಆರೋಪಿಸಿದರು.
ನಗರದ ಚಂದ್ರಕಲಾಬಾಯಿ ನಿವಾಸದಲ್ಲಿ ಮಂಗಳವಾರ ನಡೆದ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಜನಪರ ಸೇವೆ ಮಾಡುತ್ತಾ, ಪಕ್ಷ ಸಂಘಟಿಸಿರುವ ನನಗೆ ಟಿಕೆಟ್ ನೀಡದೆ ಪಕ್ಷವು ದ್ರೋಹ ಮಾಡಿದೆ ಎಂದು ಭಾವುಕರಾದರು.
ಬಿಜೆಪಿ ಪರಿವರ್ತಾನ ಯಾತ್ರೆ ವೇಳೆ ರಾಜ್ಯ ನಾಯಕರ ಜೊತೆಯಲ್ಲಿ ಹಾಕಿದ್ದ ನನ್ನ ಫ್ಲೆಕ್ಸ್ಗಳನ್ನು ಮಾಜಿ ಶಾಸಕ ನಂಜುಂಡಸ್ವಾಮಿ ಬೆಂಬಲಿಗರು ಕಿತ್ತು ಹಾಕಿದ್ದಾರೆ ಹಾಗೂ ನವಶಕ್ತಿ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಬಂದ ಸಂದರ್ಭದಲ್ಲಿ ನನಗೆ ವೇದಿಯಲ್ಲಿ ನಿಲ್ಲುವ ಅವಕಾಶವನ್ನು ನೀಡದೆ ಅವಮಾನಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎಂಬ ಮಾನವೀಯತೆಯನ್ನು ತೋರದೆ ಕಾರ್ಯಕ್ರಮದಲ್ಲಿ ಹೋರ ದಬ್ಬಿದ್ದರೂ ಪಕ್ಷಕ್ಕಾಗಿ ಸಹಿಸಿಕೊಂಡಿದ್ದೆ ಎಂದರು.
ಬೆಂಬಲಿಗರ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇನ್ನೂ ಎರಡು ದಿನಗಳಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕ್ಷೇತ್ರದ ನನ್ನ ಎಲ್ಲಾ ಬೆಂಬಲಿಗರ ಅಭಿಪ್ರಾಯವನ್ನು ಪಡೆಯುತ್ತೇನೆ ಎಂದು ತಿಳಿಸಿದರು.
ಬೆಂಬಲಿಗ ಪುಟ್ಟರಾಜೇಅರಸ್ ಮಾತನಾಡಿದರು. ಸಭೆಯಲ್ಲಿ ಅಶೋಕ್, ನಂಜಪ್ಪ, ಮಂಜು, ಕಾಂತರಾಜು, ಮಧು, ಸಿದ್ದರಾಜು, ಬಸವಣ್ಣ, ಫನೀಷ್, ರಾಜು, ಸುಭಾಷ್, ಶಿವಸ್ವಾಮಿ, ಶೇಖರ್ ಸೇರಿದಂತೆ ಅಭಿಮಾನಿಗಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.