ADVERTISEMENT

ಡಿಸೆಂಬರ್ ತಿಂಗಳ ಪಡಿತರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:59 IST
Last Updated 13 ಡಿಸೆಂಬರ್ 2012, 10:59 IST

ಚಾಮರಾಜನಗರ: ಜಿಲ್ಲೆಯಲ್ಲಿರುವ ವಿವಿಧ ವರ್ಗಗಳ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಲು 2012ರ ಡಿಸೆಂಬರ್ ತಿಂಗಳ ಆಹಾರ ಪಡಿತರವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದೆ.

ಅಕ್ಕಿ 40,720 ಕ್ವಿಂಟಲ್, ಗೋಧಿ 5,770 ಕ್ವಿಂಟಲ್ ಹಾಗೂ ಸಕ್ಕರೆ 1,346 ಕ್ವಿಂಟಲ್ ಆಹಾರ ಪದಾರ್ಥ ಬಂದಿದೆ. ಭಾವಚಿತ್ರ ತೆಗೆಸಿರುವ ವಿವಿಧ ವರ್ಗದ ಕಾರ್ಡುದಾರರಿಗೆ, ಯೂನಿಟ್‌ವಾರು ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ಪ್ರಮಾಣ ಮತ್ತು ದರ ವಿವರವನ್ನು ನಿಗದಿಪಡಿಸಲಾಗಿದೆ.

ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ 29 ಕೆ.ಜಿ ಅಕ್ಕಿ, 6 ಕೆ.ಜಿ ಗೋಧಿ, 1 ಕೆ.ಜಿ ಸಕ್ಕರೆ ನೀಡಲಾಗುತ್ತದೆ. ಅಕ್ಷಯ ಪಡಿತರ ಚೀಟಿ ಹೊಂದಿರುವ ಒಬ್ಬರು ಸದಸ್ಯರಿಗೆ 4 ಕೆ.ಜಿ ಅಕ್ಕಿ, 1 ಕೆ.ಜಿ ಗೋಧಿ, 1 ಕೆ.ಜಿ ಸಕ್ಕರೆ ವಿತರಿಸಲಾಗುತ್ತದೆ. ಇಬ್ಬರು ಸದಸ್ಯರಿಗೆ 8 ಕೆ.ಜಿ ಅಕ್ಕಿ, 1 ಕೆ.ಜಿ ಗೋಧಿ, 1 ಕೆ.ಜಿ ಸಕ್ಕರೆ ನೀಡಲಾಗುತ್ತದೆ.

ಮೂವರು ಸದಸ್ಯರಿಗೆ 12 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ, 1 ಕೆ.ಜಿ ಸಕ್ಕರೆ,  ನಾಲ್ವರು ಸದಸ್ಯರಿಗೆ 16 ಕೆ.ಜಿ ಅಕ್ಕಿ, 3 ಕೆ.ಜಿ ಗೋಧಿ, 1 ಕೆ.ಜಿ ಸಕ್ಕರೆ ಹಾಗೂ ಐದು ಮತ್ತು ಹೆಚ್ಚಿನ ಸದಸ್ಯರನ್ನೊಳಗೊಂಡ ಕುಟುಂಬಕ್ಕೆ 20 ಕೆ.ಜಿ ಅಕ್ಕಿ, 3 ಕೆ.ಜಿ ಗೋಧಿ, 1 ಕೆ.ಜಿ ಸಕ್ಕರೆ ನೀಡಲಾಗುತ್ತದೆ.

ಪ್ರತಿ ಕೆ.ಜಿ ಅಕ್ಕಿಗೆ ರೂ. 3, ಗೋಧಿ ರೂ. 3, ಸಕ್ಕರೆ ರೂ. 13.50 ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕೆ.ಜಿ ಗೋಧಿಗೆ ರೂ. 2 ದರ ನಿಗದಿ ಪಡಿಸಲಾಗಿದೆ. ಜಿಲ್ಲೆಯ ಎಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಕೆ.ಜಿ. ಅಕ್ಕಿಗೆ ರೂ. 10 ರಂತೆ 13 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ.

ಸೀಮೆಎಣ್ಣೆ ಹಂಚಿಕೆ ಇಲ್ಲ
ಜಿಲ್ಲೆಯ ಪಡಿತರದಾರರಿಗೆ ಹಂಚಿಕೆ ಮಾಡಲು 1,164 ಕೆ.ಎಲ್ ಸೀಮೆಎಣ್ಣೆ ಬಿಡುಗಡೆಯಾಗಿದೆ. ಅನಿಲ ರಹಿತ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆ ನೀಡಲಾಗುತ್ತದೆ. ಅಡುಗೆ ಅನಿಲ ಸಂಪರ್ಕ ಹೊಂದಿರುವವರಿಗೆ ಸೀಮೆ ಎಣ್ಣೆ ಹಂಚಿಕೆ ಮಾಡಲಾಗುವುದಿಲ್ಲ.

ಚಾಮರಾಜನಗರ, ಕೊಳ್ಳೇಗಾಲ ನಗರ ಪ್ರದೇಶಕ್ಕೆ 6 ಲೀ, ಹನೂರು, ಗುಂಡ್ಲುಪೇಟೆ, ಯಳಂದೂರು ಪಟ್ಟಣ ಪಡಿತರದಾರರಿಗೆ 5 ಲೀ, ಮತ್ತು ಹನೂರು ಹೊರತು ಪಡಿಸಿ ಜಿಲ್ಲೆಯ ಉಳಿದ ನಾಲ್ಕು ತಾಲ್ಲೂಕುಗಳ ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ 4 ಲೀ. ಸೀಮೆ ಎಣ್ಣೆ ವಿತರಿಸಲಾಗುತ್ತದೆ.

ಸೀಮೆಎಣ್ಣೆ ದರ ವಿವರ
ಚಾಮರಾಜನಗರದ ಪಡಿತರದಾರರಿಗೆ ಪ್ರತಿ ಲೀಟರ್‌ಗೆ ರೂ. 15 ರಿಂದ 90, ಗ್ರಾಮಾಂತರಕ್ಕೆ 16 ರಿಂದ 30ರೂ., ಕೊಳ್ಳೇಗಾಲ ಪಟ್ಟಣಕ್ಕೆ 15 ರಿಂದ 80 ರೂ., ಗ್ರಾಮಾಂತರಕ್ಕೆ 16 ರಿಂದ 20 ರೂ., ಹನೂರು ಪಟ್ಟಣಕ್ಕೆ ಪ್ರತಿ ಲೀಟರ್‌ಗೆ 15 ರಿಂದ 80 ರೂ., ಗ್ರಾಮಾಂತರಕ್ಕೆ 16 ರಿಂದ 20 ರೂ., ಗುಂಡ್ಲುಪೇಟೆ ಪಟ್ಟಣಕ್ಕೆ 16 ರೂ. ನಂತೆ, ಗ್ರಾಮಾಂತರಕ್ಕೆ 16 ರಿಂದ 40 ರೂ., ಯಳಂದೂರು ಪಟ್ಟಣಕ್ಕೆ 15 ರಿಂದ 90 ರೂ., ಗ್ರಾಮಾಂತರಕ್ಕೆ 16 ರಿಂದ 30 ರೂ.ನಂತೆ ದರ ನಿಗದಿಪಡಿಸಲಾಗಿದೆ. ವಿತರಣೆಯಾಗದೇ ಬಾಕಿ ಉಳಿದಿರುವ ಕಾಯಂ ಗಣಕೀಕೃತ ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಹಾಗೂ ಸೀಮೆಎಣ್ಣೆ ಹಂಚಿಕೆ ಮಾಡಲಾಗುವುದಿಲ್ಲ.  ಪ್ರಸಕ್ತ ತಿಂಗಳ ಪಡಿತರ ವನ್ನು ಡಿ. 25 ರೊಳಗೆ ಚೀಟಿದಾರರಿಗೆ ವಿತರಿಸುವಂತೆ ಎಲ್ಲಾ ನ್ಯಾಯಬೆಲೆ, ಸೀಮೆಎಣ್ಣೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ.

ನಿಗದಿ ದರಕ್ಕಿಂತ ಹೆಚ್ಚಿನ ದರದಲ್ಲಿ ಪಡಿತರ ಮಾರಾಟ ಮಾಡುವುದು ಕಂಡುಬಂದರೆ ದೂ. 08226- 224660ಗೆ ದೂರು ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಡಾ.ಎಸ್.ಇ.ಮಹದೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.