ADVERTISEMENT

ದಿಕ್ಕು ತಪ್ಪಿದ ಬಾಲಕರ ಬದುಕಿಗೆ ಬೆಳಕು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 7:00 IST
Last Updated 1 ಮಾರ್ಚ್ 2012, 7:00 IST

ಚಾಮರಾಜನಗರ: ಮಲತಾಯಿಯ ಕೋಪಕ್ಕೆ ತುತ್ತಾಗಿ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ದಿಕ್ಕುತಪ್ಪಿ ಅಲೆದಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ತಾಲ್ಲೂಕಿನ ಘಟ್ಟಳ್ಳಿ ಗ್ರಾಮದ ಇಬ್ಬರು ಬಾಲಕರನ್ನು ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ರಕ್ಷಿಸಿದ್ದು, ಅವರಿಗೆ ನಗರದ ಬೆಳಕು ಬಾಲಕಾರ್ಮಿಕ ಪುನರ್ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ.

ಯಶವಂತ(13) ಹಾಗೂ ಮಧುಸೂದನ್(11) ದಿಕ್ಕುತಪ್ಪಿದ ಬಾಲಕರು. ಈ ಇಬ್ಬರು ಸಹೋದರರಾಗಿದ್ದಾರೆ. ಮಲತಾಯಿ ರೇಣುಕಾ ಎಂಬುವರು ಮಹದೇಶ್ವರಬೆಟ್ಟಕ್ಕೆ ಹೋಗೋಣವೆಂದು ಬೆಟ್ಟಕ್ಕೆ ತೆರಳುತ್ತಿದ್ದ ಟೆಂಪೊಕ್ಕೆ ಹತ್ತಿಸಿದ್ದಾರೆ. ಮತ್ತೊಂದು ಟೆಂಪೊದಲ್ಲಿ ತಾವು ಬರುವುದಾಗಿ ತಿಳಿಸಿದ್ದಾರೆ. ಆದರೆ, ಬೆಟ್ಟಕ್ಕೆ ಬಂದಿಳಿದ ಬಾಲಕರು ಇನ್ನೊಂದು ಟೆಂಪೊ ಬಾರದಿರುವ ಹಿನ್ನೆಲೆಯಲ್ಲಿ ಕಂಗಾಲಾಗಿದ್ದಾರೆ.

ದಾಸೋಹ ಭವನದ ಬಳಿಯಲ್ಲಿ ಮಂಗಳವಾರ ರಾತ್ರಿ ಮಲಗಿದ್ದಾರೆ. ಬುಧವಾರ ಬೆಳಿಗ್ಗೆ ಇಬ್ಬರು ಅಳುತ್ತಾ ಕುಳಿತಿರುವುದನ್ನು ಗಮನಿಸಿದ ಬಳೆ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ತಂದೆ ನಾಗರಾಜು ಇನ್ನೊಂದು ಮದುವೆಯಾದ ನಂತರ ಮಕ್ಕಳ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಶಾಲೆ ಬಿಡಿಸಿ ಮನೆ ಕೆಲಸಕ್ಕೆ ಕಳುಹಿಸುವ ಮೂಲಕ ಮಲತಾಯಿ ಕಿರುಕುಳ ನೀಡುತ್ತಿದ್ದರು ಎಂದು ಮಕ್ಕಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ನಂತರ, ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ದ್ರಾಕ್ಷಾಯಿಣಿ ಅವರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದಾರೆ. ಕೊನೆಗೆ, ಬೆಳಕು ಬಾಲಕಾರ್ಮಿಕ ಪುನರ್ವಸತಿ ಶಾಲೆಯಲ್ಲಿ ಮಕ್ಕಳಿಗೆ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಮಕ್ಕಳ ಎಲ್ಲ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಆದಿವಾಸಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಿ.ಎಸ್. ಬಸವರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.