ADVERTISEMENT

ದ್ರಾಕ್ಷಿ ಬೆಳೆ ಪ್ರೋತ್ಸಾಹಕ್ಕೆ ಕಾವೇರಿ ವ್ಯಾಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 11:50 IST
Last Updated 3 ಫೆಬ್ರುವರಿ 2012, 11:50 IST

ಚಾಮರಾಜನಗರ: ರಾಜ್ಯ ಸರ್ಕಾರ ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆ ಒಳಗೊಂಡ ಪ್ರದೇಶವನ್ನು `ಕಾವೇರಿ ವ್ಯಾಲಿ~ಯೆಂದು ಘೋಷಿಸಿ ದ್ರಾಕ್ಷಿ ಬೆಳೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯಲು ಉತ್ತಮವಾದ ಮಣ್ಣು ಹಾಗೂ ಹವಾಗುಣವಿದೆ. ದ್ರಾಕ್ಷಿ ಸಂಸ್ಕರಣೆ ಮತ್ತು ದ್ರಾಕ್ಷಾ ರಸ (ವೈನ್) ನೀತಿ ಅನ್ವಯ ಕಾವೇರಿ ವ್ಯಾಲಿಯೊಳಗೆ ಗಡಿ ಜಿಲ್ಲೆಯನ್ನು ಸೇರಿಸಿ ಆದೇಶ ಹೊರಡಿಸಿದೆ. ರೈತರ ಹಿತದೃಷ್ಟಿಯಿಂದ ದ್ರಾಕ್ಷಾ ರಸ ಉತ್ಪಾದನೆ ಮತ್ತು ಮಾರುಕಟ್ಟೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಲು 2007ರಲ್ಲಿ ಕರ್ನಾಟಕ ದ್ರಾಕ್ಷಿ ಸಂರಕ್ಷಣೆ ಮತ್ತು ದ್ರಾಕ್ಷಾ ರಸ(ವೈನ್) ನೀತಿಗೊಳಿಸಲಾಯಿತು.

ಈ ನೀತಿ ಅನ್ವಯ ದ್ರಾಕ್ಷಿ ತಳಿ ಬೆಳೆಯಲು ಸೂಕ್ತವಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆ ಒಳಗೊಂಡ ಪ್ರದೇಶವನ್ನು `ಕೃಷ್ಣಾ ವ್ಯಾಲಿ~ ಎಂದು ಘೋಷಿಸಿದೆ. ನಂತರ 2010ರಲ್ಲಿ `ನಂದಿ ವ್ಯಾಲಿ~ ವ್ಯಾಪ್ತಿಯಡಿ ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯನ್ನು ಸೇರ್ಪಡೆಗೊಳಿಸಲಾಗಿದೆ.
ಕೃಷ್ಣಾ ವ್ಯಾಲಿ ವ್ಯಾಪ್ತಿಯಲ್ಲಿಯೇ ಗುಲ್ಬರ್ಗ, ರಾಯಚೂರು, ಗದಗ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯನ್ನೂ ಸೇರ್ಪಡೆ ಮಾಡಿದೆ. ನಂದಿ ಮತ್ತು ಕೃಷ್ಣಾ ವ್ಯಾಲಿ ಪ್ರಾಂತ್ಯಗಳ ರೀತಿಯಲ್ಲಿಯೇ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳು ರೆಡ್‌ವೈನ್, ವೈಟ್‌ವೈನ್ ದ್ರಾಕ್ಷಿ ತಳಿ ಬೆಳೆಯಲು ಹಾಗೂ ಸಂಸ್ಕರಣ ಘಟಕ ಸ್ಥಾಪಿಸಲು ಸೂಕ್ತ ವಾತವರಣ ಹೊಂದಿವೆ. ಘೋಷಿತ ಕಾವೇರಿ ವ್ಯಾಲಿ ಪ್ರದೇಶದ ಭೌಗೋಳಿಕ ವಿಶೇಷತೆಗೆ ಮಾನ್ಯತೆ ದೊರೆತರೆ ದ್ರಾಕ್ಷಿ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತದೆ. ಉತ್ಪನ್ನಗಳ ರಫ್ತಿಗೂ ವಿಪುಲ ಅವಕಾಶ ಲಭಿಸಲಿದೆ.

ಕಾವೇರಿ ವ್ಯಾಲಿ ಪ್ರಾಂತ್ಯದಲ್ಲಿ ದ್ರಾಕ್ಷಿ ಬೆಳೆಯ ವಿಸ್ತ್ರೀರ್ಣವೂ ಹೆಚ್ಚಾಗಲಿದೆ. ಒಪ್ಪಂದ ಕೃಷಿ ಮೂಲಕ ರೈತರು ನಿಶ್ಚಿತ ಆದಾಯ ಪಡೆಯಲು ಸಾಧ್ಯವಾಗಲಿದೆ. ಉದ್ಯಮಿಗಳು ದ್ರಾಕ್ಷಿ ಬೆಳೆ ಬೆಳೆಯಲು ಮತ್ತು ಎಲ್ಲ ತಾಂತ್ರಿಕ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.
 
ಹೆಚ್ಚಿನ ಉದ್ಯೋಗಾವಕಾಶವನ್ನೂ ಸೃಷ್ಟಿಸಬಹುದು. ಗುಚ್ಚ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವುದರಿಂದ  ಅಗತ್ಯವಿರುವ ಸೌಲಭ್ಯ ಮತ್ತು ತಾಂತ್ರಿಕ ಮಾಹಿತಿ ನೀಡಲು ಅನುಕೂಲವಾಗಲಿದೆ. ಉದ್ಯಮಿಗಳು ಹೊಸದಾಗಿ ದ್ರಾಕ್ಷಾರಸ ಘಟಕ ಸ್ಥಾಪಿಸಲು ಸಾಧ್ಯವಾಗುತ್ತದೆ. ದ್ರಾಕ್ಷಾರಸ ಘಟಕಕ್ಕೆ ಬೇಕಾದ ಕಚ್ಚಾವಸ್ತುಗಳು ಲಭ್ಯವಾಗಲಿದೆ. ತಾಂತ್ರಿಕ ಮಾಹಿತಿಯೂ ಸಿಗಲಿದೆ. ಬೆಳೆದ ದ್ರಾಕ್ಷಿ ಹಾಳಾಗದಂತೆ ಸಂಸ್ಕೃರಣೆ ಘಟಕಗಳು ತಲೆಎತ್ತಲಿವೆ.

ದ್ರಾಕ್ಷಿ ಬೆಳೆ, ಸಂಸ್ಕರಣೆ ಘಟಕಗಳು ರೈತರು, ಉದ್ಯಮಿಗಳ ಆರ್ಥಿಕ ಬಲವರ್ಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾವೇರಿ ವ್ಯಾಲಿ ಘೋಷಣೆಯಾಗಿದೆ. ಜಿಲ್ಲೆಯ ರೈತರು, ಉದ್ಯಮಿಗಳಿಗೆ ದ್ರಾಕ್ಷಿ ಬೆಳೆಯಲು ಹಾಗೂ ಸಂಸ್ಕರಣೆ ಘಟಕ ಸ್ಥಾಪನೆಗೆ ಸಲಹೆ ನೆರವು ನೀಡಲು ಬೆಂಗಳೂರಿನ ದ್ರಾಕ್ಷಾ ಮಂಡಳಿ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ ಮುಂದಾಗಿದೆ. ಆಸಕ್ತರು ಬೆಂಗಳೂರಿನ ದ್ರಾಕ್ಷಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಮಾಹಿತಿ ಪಡೆಯಬಹುದು.
`ವೃತ್ತಿ ಉತ್ತೇಜನಕ್ಕೆ ತರಬೇತಿ~
ಸಂತೇಮರಹಳ್ಳಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮೊಬಿಲಿಟಿ ಇಂಡಿಯಾ ಸಹಯೋಗದೊಂದಿಗೆ ಹೋಬಳಿ ವ್ಯಾಪ್ತಿಯ ಸಹಭಾಗಿಗಳ ಜತೆಗಿನ ಕ್ರಿಯಾ ಯೋಜನಾ ಸಭೆ ನಡೆಯಿತು. ಸಂಯೋಜಕ ರಾಜಣ್ಣ ಮಾತನಾಡಿ, ಶಿಕ್ಷಣ ಚಟುವಟಿಕೆಗಳಲ್ಲಿ ಪ್ರಗತಿ ಕಾಣುವಂತೆಕ್ರಮಕೈಗೊಳ್ಳಲಾಗುವುದು.
 
ಅರೋಗ್ಯ ಕಾರ್ಯಕ್ರಮಗಳಲ್ಲಿ ಅರಿವು ಮೂಡಿಸಿ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಶಾಲಾ ದಾಖಲಾತಿ, ಸಮುದಾಯ ಶಿಕ್ಷಣ ಕೇಂದ್ರಗಳ ರಚನೆ, ಅಂಗವಿಕಲರಿಗೆ ಪೂರಕವಾಗುವಂತಹ ವೃತ್ತಿ ಕಸುಬುಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ತಾ.ಪಂ.ಸದಸ್ಯೆ ಪಾರ್ವತಮ್ಮ, ಮೊಬಿಲಿಟಿ ಸಂಸ್ಥೆಯ ಪ್ರೇರಕರಾದ ಪುಷ್ಪಲತಾ, ಎಸ್.ಆನಂದ್. ಮಹೇಶ್, ನಂದಿಶ್, ಕವಿತಾ, ಶಿವಕುಮಾರ್, ಜಾನ್‌ಫರ್ನಾಂಡಿಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.