ಯಳಂದೂರು: ‘ರೈತರು ನೀರಿನ ಮಿತ ಬಳಕೆ ಮಾಡುವ ಬಗ್ಗೆ ಹೆಚ್ಚಿನ ಗಮನಹರಿಸುತ್ತಿಲ್ಲ. ಅವರಿಗೆ ಮನವರಿಕೆ ಆಗುವಂತೆ ಕೃಷಿ ಇಲಾಖೆ ಮಾರ್ಗದರ್ಶನ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ. ಯೋಗೇಶ್ ಸಲಹೆ ನೀಡಿದರು.
ಅವರು ಸೋಮವಾರ ಪಟ್ಟಣದ ಕೃಷಿ ಇಲಾಖೆಯ ವತಿಯಿಂದ 2018ರ ‘ಕೃಷಿ ಅಭಿಯಾನ’ದ ನಿಮಿತ್ತ ಹಮ್ಮಿಕೊಂಡಿದ್ದ ಕೃಷಿ ಅಭಿಯಾನದ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಬೇಸಾಯ ಅನ್ನದಾತರಿಗೆ ಖುಷಿ ಕೊಡಬೇಕು. ಬದಲಾದ ಕಾಲ ಘಟ್ಟದಲ್ಲಿ ಸಾಂಪ್ರದಾಯಿಕ ಕೃಷಿ ಪರಿಕರಗಳನ್ನು ಬದಲಾಗಿ ಆಧುನಿಕ ಯಂತ್ರೋಪಕ ರಣಗಳ ಬಳಕೆ ಮಾಡಬೇಕು. ಕನಿಷ್ಠ ಭೂಮಿಯಲ್ಲೂ ಗರಿಷ್ಠ ಬೆಳೆ ಬೆಳೆಯುವ ತಳಿಗಳನ್ನು ಬಳಕೆ ಮಾಡಿಕೊಳ್ಳಬೇಕು. ಜೀವನಾಧಾರ ಉಪಕಸುಬುಗಳನ್ನು ಮಾಡುವ ಮೂಲಕ ಆರ್ಥಿಕ ಭದ್ರತೆ ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೊಡ್ಡೇಗೌಡ ಮಾತನಾಡಿ, ‘ವ್ಯವಸಾಯದಿಂದ ಉತ್ಪಾದನೆ ಪ್ರಮಾಣ ಹೆಚ್ಚಬೇಕಿದೆ. ಈ ಉದ್ದೇಶದಿಂದ ಕೃಷಿ ಮಾಹಿತಿಯನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಬೆಸೆಯಲಾಗಿದೆ. ವಿಜ್ಞಾನಿಗಳೊಡನೆ ರೈತರ ಸಂವಾದ ನಡೆಸುವುದು ಇದರ ಭಾಗವಾಗಿದೆ. ಜೂನ್ 20ರಂದು ಕಚೇರಿಯ ಆವರಣದಲ್ಲಿ ಕೃಷಿ ವಸ್ತುಪ್ರದರ್ಶನ, ರೈತರೊಂದಿಗೆ ಸಂವಾದ ಕಾರ್ಯಕ್ರಮ ಇರುತ್ತದೆ’ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಮಲ್ಲಾಜಮ್ಮ, ನಂಜಯ್ಯ, ಸದಸ್ಯ ವೈ.ಕೆ.ಮೋಳೆ ನಾಗರಾಜು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ, ಪಶು ಸಂಗೋಪನಾ ಇಲಾಖೆಯ ಡಾ. ನಾಗರಾಜು, ರೇಷ್ಮೆ ಇಲಾಖೆಯ ಸೋಮಣ್ಣ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಕೃಷಿಕ ಸಮಾಜದ ಅಧ್ಯಕ್ಷ ಮಾದೇಶ್, ಮಹೇಂದರ್, ತ್ರಿವೇಣಿ, ಮಹಾದೇವಮ್ಮ, ನಾಗರಾಜು, ರಂಗನಾಥ, ರಾಜೇಶ್, ಸಿದ್ದರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.