ಕೊಳ್ಳೇಗಾಲ: ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದ 29 ಜನರೈತರು ಸುವರ್ಣಭೂಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು ಅವರಿಗೆ ಪ್ರೋತ್ಸಾಹ ಧನ ವಿತರಿಸುವಂತೆ ಒತ್ತಾಯಿಸಿ ರೈತ ಮುಖಂಡ ಪುಟ್ಟರಾಜೇ ಅರಸ್ ನೇತೃತ್ವದಲ್ಲಿ ಶನಿವಾರ ಕಚೇರಿಯಲ್ಲಿ ಧರಣಿಕುಳಿತು ಪ್ರತಿಭಟಿಸಿದರು.
ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮ ನೀರಾವರಿ ಪ್ರದೇಶವಾಗಿರುವುದರಿಂದ ಈ ವ್ಯಾಪ್ತಿಯ ರೈತರಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಗೆ ಚೆಕ್ ವಿತರಿಸಿರಲಿಲ್ಲ.
ಉತ್ತಂಬಳ್ಳಿ ಗ್ರಾಮ ವ್ಯಾಪ್ತಿಯ ಜಮೀನುಗಳು ಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡದೇ ಅರೆನೀರಾವರಿ ಪ್ರದೇಶವಾಗಿದ್ದರೂ ತಪ್ಪುಮಾಹಿತಿ ನೀಡಿ ರೈತರಿಗೆ ಈ ಯೋಜನೆಯಿಂದ ವಂಚಿತರನ್ನಾಗಿ ಮಾಡುವುದು ಸರಿಯಲ್ಲ ಎಂದು ರೈತರು ಶನಿವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ತಾಲ್ಲೂಕು ಕಚೇರಿಯಿಂದ ಸುವರ್ಣಭೂಮಿ ಯೋಜನೆಯಡಿ ಫಲಾನುಭವಿಗಳಿಗೆ ಅಗತ್ಯ ಪ್ರಮಾಣ ಪತ್ರ ನೀಡಲು ಒತ್ತಾಯಿಸಿದರು.
ರೈತರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹ ಧನ ವಿತರಣೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನೆಯನ್ನು ರೈತರು ಕೈಬಿಟ್ಟರು.
ರೈತರುಗಳಾದ ಮಹದೇವ, ಗುರುಸ್ವಾಮಿ, ನಾಗೇಂದ್ರಸ್ವಾಮಿ, ನಂದೀಶ್, ವಿ. ಮಹದೇವಪ್ಪ, ಕಾಮಶೆಟ್ಟಿ, ಸದಾಶಿವಮೂರ್ತಿ, ಸಿದ್ದರಾಜು, ಪುಟ್ಟಪ್ಪ, ಮಾದೇಶ, ಮಹೇ, ಟಿ. ಮಹಾದೇವಪ್ಪ ಇತರರು ಇದ್ದರು.
ಹುಂಡಿ ಹಣ ಎಣಿಕೆ
ಕೊಳ್ಳೇಗಾಲ: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಹುಂಡಿಯ ಹಣ ಎಣಿಕೆ ಶನಿವಾರ ನಡೆಯಿತು.
ಹುಂಡಿಯಲ್ಲಿ ಒಂದು ತಿಂಗಳಲ್ಲಿ 75,22,766 ರೂ. 91ಗ್ರಾಂ 400 ಮಿಲಿ ಚಿನ್ನ ಹಾಗೂ 520 ಗ್ರಾಂ ಬೆಳ್ಳಿ ದೊರೆತಿದೆ.
ಹುಂಡಿಯಲ್ಲಿ 1 ಮಾಂಗಲ್ಯ ಸಮೇತ ಚೈನ್ ಮತ್ತು 20 ಗ್ರಾಂ ಚಿನ್ನದ ಗಟ್ಟಿ ದೊರೆತಿರುವುದು ವಿಶೇಷ.
ಮಲೆ ಮಹದೇಶ್ವರ ಬೆಟ್ಟದ ವಿಶೇಷ ಆಡಳಿತಾಧಿಕಾರಿ ಜಯವಿಭವಸ್ವಾಮಿ, ಸಾಲೂರು ಬೃಹನ್ಮಠದ ಗುರುಸ್ವಾಮೀಜಿ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಸಿ ದವಣಗೇರಿ, ಕಪ್ಪಣ್ಣ, ಸುಬ್ಬಯ್ಯ, ಮಲ್ಲೇಶ್, ಮಹಾದೇವಸ್ವಾಮಿ ಪೊಲೀಸ್ ಮತ್ತು ಬ್ಯಾಂಕ್ ಅಧಿಕಾರಿಗಳು ಎಣಿಕೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.