ADVERTISEMENT

ಮಧ್ಯವರ್ತಿ ಅವಲಂಬಿಸದಿರಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:45 IST
Last Updated 20 ಸೆಪ್ಟೆಂಬರ್ 2013, 10:45 IST
ಕೊಳ್ಳೇಗಾಲ ತಾಲ್ಲೂಕಿನ ಹನೂರು ಲೋಕೋಪಯೋಗಿ ವಸತಿಗೃಹ ಆವರಣದಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪಿಂಜಣಿ ಅದಾಲತ್‌ ಕಾರ್ಯಕ್ರಮದಲ್ಲಿ ಶಾಸಕ ಆರ್‌. ನರೇಂದ್ರ ಮಾತನಾಡಿದರು. ಉಪವಿಭಾಗಾಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು ಇದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಹನೂರು ಲೋಕೋಪಯೋಗಿ ವಸತಿಗೃಹ ಆವರಣದಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪಿಂಜಣಿ ಅದಾಲತ್‌ ಕಾರ್ಯಕ್ರಮದಲ್ಲಿ ಶಾಸಕ ಆರ್‌. ನರೇಂದ್ರ ಮಾತನಾಡಿದರು. ಉಪವಿಭಾಗಾಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು ಇದ್ದಾರೆ.   

ಕೊಳ್ಳೇಗಾಲ: ಮಧ್ಯವರ್ತಿಗಳನ್ನು ದೂರ ಇಟ್ಟು ಸರ್ಕಾರದ ಯೋಜನೆಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಆರ್‌. ನರೇಂದ್ರ ತಿಳಿಸಿದರು.

ತಾಲ್ಲೂಕಿನ ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹ ಆವರಣದಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಪಡೆ­ಯು­ವಲ್ಲಿ ಗ್ರಾಮೀಣ ಜನತೆ ಮಧ್ಯವರ್ತಿ­ಗಳ ಹಾವಳಿಗೆ ಸಿಲುಕಿ ತೊಂದರೆ ಅನುಭವಿಸುವುದನ್ನು ಮನಗಂಡು ಮಧ್ಯ­ವರ್ತಿಗಳನ್ನು ದೂರವಿರಿಸಿ ಸರ್ಕಾರದ ಯೋಜನೆ ಲಾಭವನ್ನು  ಫಲಾನುಭವಿ­ಗಳಿಗೆ ನೇರವಾಗಿ, ಸಮರ್ಪಕವಾಗಿ ದೊರೆಯುವಂತೆ ಮಾಡಲು ಪಿಂಚಣಿ ಅದಾಲತ್‌ನ್ನು ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು ಅವರು ಕಾರ್ಯಕ್ರಮ ಉದ್ಘಾಟಿಸಿ ಹನೂರು ಹೋಬಳಿಯಲ್ಲಿ ಈಗಾಗಲೇ ಸರ್ಕಾರದ ವಿವಿಧ ಯೋಜನೆಗಳಡಿ 9,630 ಫಲಾನುಭವಿ­ಗಳಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುತ್ತಿದೆ. ಈ ಶಿಬಿರದಲ್ಲಿ 38 ಅರ್ಹ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಫಲಾನುಭವಿಗಳು ತಮಗೆ ದೊರೆಯ­ಬೇಕಾದ ಸೌಲಭ್ಯಗಳನ್ನು ಪಡೆಯಲು ಅಗತ್ಯ ದಾಖಲೆಗಳೊಡನೆ ನೇರವಾಗಿ ತಮ್ಮ ಕಚೇರಿಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಬಳಿ ನೀಡಬಾರದು. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷತೆ ತೋರಿದಲ್ಲಿ ಹಿರಿಯ ಅಧಿಕಾರಿ­ಗಳ ಗಮನಕ್ಕೆ ತರಬೇಕು ಎಂದರು.

ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಗೋಡೆಕುಸಿದು ಮೃತಪಟ್ಟ ಚಂಗವಾಡಿ ವಿದ್ಯಾರ್ಥಿನಿ ಅಮೃತಾ ತಂದೆ ಲಕ್ಷ್ಮಣಾಚಾರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಯೋಜನೆಯಡಿ. ` 1.5 ಲಕ್ಷ ಚೆಕ್‌ನ್ನು ಪ್ರಕೃತಿ ವಿಕೋಪ ಯೋಜನೆಯಡಿ ಗೋಡೆ ನಿರ್ಮಾಣಕ್ಕೆ ` 6,300 ಚೆಕ್‌ನ್ನು ಶಾಸಕ ಆರ್‌. ನರೇಂದ್ರ ವಿತರಿಸಿದರು.ತಹಶೀಲ್ದಾರ್‌ ಮಾಳಿಗಯ್ಯ, ಹನೂರು ವಿಶೇಷ ತಹಶೀಲ್ದಾರ್‌ ಎಂ. ನಂಜುಂಡಯ್ಯ, ಉಪ ತಹಶೀಲ್ದಾರ್‌ ಬೈರಯ್ಯ,  ರಾಜಸ್ವ ನಿರೀಕ್ಷಕ ಮಾದೇ­ಗೌಡ, ತಾ.ಪಂ. ಸದಸ್ಯ ಮುರಳಿ, ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.