ADVERTISEMENT

ಮಲೆ ಮಹದೇಶ್ವರ ಬೆಟ್ಟದಲ್ಲಿ ಮರ ಕಳವಿಗೆ ಯತ್ನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 9:15 IST
Last Updated 20 ಮಾರ್ಚ್ 2012, 9:15 IST

ಕೊಳ್ಳೇಗಾಲ: ಬೆಲೆ ಬಾಳುವ ಮರ ಕಳವು ಮಾಡಲು ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟ ತಂಬಡಿಗೇರಿ ವಾಸಿ ಮಹಾದೇವಸ್ವಾಮಿ (36) ಸಿಕ್ಕಿಬಿದ್ದ ಆರೋಪಿ.
ಕಾಡಿನ ಒಂದು ಭಾಗಕ್ಕೆ ಬೆಂಕಿ ಹಚ್ಚಿ ಅದು ಉರಿಯತೊಡಗುವಂತೆ ಮಾಡಿ ಅರಣ್ಯಾಧಿಕಾರಿಗಳು ಬೆಂಕಿ ನಂದಿಸಲು ನಿರತರಾದ ವೇಳೆಯಲ್ಲಿ ಮತ್ತೊಂದು ಭಾಗದಲ್ಲಿ ಲೀಲಾ ಜಾಲವಾಗಿ ಮರವನ್ನು ಕಡಿದು ಸಾಗಿಸುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಖಚಿತ ವರ್ತಮಾನ ಲಭಿಸಿತ್ತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವಿದ್ ಮಮ್ತಾಜ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ನಾಗೇಂದ್ರ, ಆರ್‌ಎಫ್‌ಒ ನಂಜುಂಡಯ್ಯ ಮತ್ತು ಸಿಬ್ಬಂದಿ ಸೋಮವಾರ ಮಲೆ ಮಹದೇಶ್ವರ ಬೆಟ್ಟದ ಫಲಹಾರ ಬೆಟ್ಟದಲ್ಲಿ ಆರೋಪಿಗಳಿಗಾಗಿ ಹೊಂಚುಹಾಕುತ್ತಿದ್ದಾಗ ಆರೋಪಿ ಮಹಾದೇವಸ್ವಾಮಿ ಹಾಗೂ ಆತನ ಜೊತೆಗಾರರಾದ ಸೂರಪ್ಪ, ನಾಗ, ಕಾಳ ಕಾಡಿಗೆ ಬೆಂಕಿಹಾಕಲು ಯತ್ನಿಸುತ್ತಿದ್ದಾಗ ಅವರನ್ನು ಬೆನ್ನಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಹದೇವಸ್ವಾಮಿ ಅರಣ್ಯ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದು ಉಳಿದ ಆರೋಪಿಗಳು ಕಾಡಿನಲ್ಲಿ ಕಣ್ಮರೆಯಾಗಿದ್ದಾರೆ. ಬಂಧಿತನನ್ನು ವಿಚಾರಣೆಗೆ ಗುರಿಪಡಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ಜಲಾಶಯಕ್ಕೆ ಹಾರಿ ಮಹಿಳೆ ಆತ್ಮಹತ್ಯೆ
ಕೊಳ್ಳೇಗಾಲ: ಮಾನಸಿಕ ಅಸ್ವಸ್ಥ ಅವಿವಾಹಿತೆ ಯೊಬ್ಬಳು ಜಲಾಶಯಕ್ಕೆ ಹಾರಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಉಬ್ಬೆಹುಣಸೆ ಜಲಾಶಯದಲ್ಲಿ ಸೋಮವಾರ ನಡೆದಿದೆ.

ತಾಲ್ಲೂಕಿನ ಹನೂರು ಬಳಿಯ ಉದ್ದನೂರು ವಾಸಿ ಚೆನ್ನಮ್ಮ (36) ಜಲಾಶಯಕ್ಕೆ ಬಿದ್ದು ಸಾವನ್ನಪ್ಪಿರುವವರು.
ಜಲಾಶಯದಲ್ಲಿ ಮಹಿಳೆ ಬಿದ್ದು ಸಾವನ್ನಪ್ಪಿರುವ ವಿಚಾರ ತಿಳಿಯುತ್ತಿದ್ದಂತೆಯೇ ಹನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ನುರಿತ ಈಜುಗಾರರಿಂದ ಶವವನ್ನು ಮೇಲೆತ್ತಿ ಶವಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.