ADVERTISEMENT

ಮಾಗಿ ಚಳಿಯಲ್ಲಿ ಸಡಗರದ ಜಾತ್ರೆ

ಚಿಕ್ಕಲ್ಲೂರು: ಜನವರಿ 2ರಿಂದ ಐದು ದಿನ ನಡೆಯಲಿರುವ ಸಿದ್ದಪ್ಪಾಜಿ ಜಾತ್ರೆ

ಬಿ.ಬಸವರಾಜು
Published 31 ಡಿಸೆಂಬರ್ 2017, 8:35 IST
Last Updated 31 ಡಿಸೆಂಬರ್ 2017, 8:35 IST
ಮಾಗಿ ಚಳಿಯಲ್ಲಿ ಸಡಗರದ ಜಾತ್ರೆ
ಮಾಗಿ ಚಳಿಯಲ್ಲಿ ಸಡಗರದ ಜಾತ್ರೆ   

ಹನೂರು: ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದ್ದರೂ ಇಲ್ಲಿನ ಪ್ರಾಕೃತಿಕ ಸಂಪತ್ತು, ವಿಶಿಷ್ಟ ಸಂಸ್ಕೃತಿ, ಪರಂಪರೆ, ಜಾನಪದ ಕಲೆಗಳಿಂದ ತನ್ನದೇ ವಿಶಿಷ್ಟ ಹಿನ್ನೆಲೆ ಹೊಂದಿದೆ. ಮಾದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ತಮ್ಮ ಆಚಾರ ವಿಚಾರಗಳ ಮೂಲಕ ಇಲ್ಲಿನ ಹಲವು ಸಮುದಾಯಗಳ ಆರಾಧ್ಯದೈವವಾಗಿದ್ದಾರೆ.

ಇಂತಹ ಸಾಧು ಸಂತರು ನೆಲೆಸಿರುವ ಸ್ಥಳಗಳು ಇಂದು ಪ್ರಸಿದ್ಧ ಪುಣ್ಯಕ್ಷೇತ್ರಗಳಾಗಿವೆ. ಇಲ್ಲಿ ನಡೆಯುವ ಜಾತ್ರೆ, ಉತ್ಸವಗಳು ದೇಸಿ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳಾಗಿವೆ. ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಿ ಬಡವ ಬಲ್ಲಿದರೆನ್ನದೆ ಎಲ್ಲರು ಒಗ್ಗೂಡಿ ಸಡಗರದಿಂದ ಆಚರಿಸುವ ಚಿಕ್ಕಲ್ಲೂರು ಜಾತ್ರೆ ಇದಕ್ಕೆ ಉತ್ತಮ ನಿದರ್ಶನ.

ಸಮೃದ್ಧಿಯ ಸಂಕೇತ: ಕಾವೇರಿ ನದಿಯ ಮಗ್ಗುಲಲ್ಲಿರುವ ಹಲಗೂರು ಪಟ್ಟಣದಲ್ಲಿ ಭಿಕ್ಷೆ ಪಡೆದ ಸಿದ್ದಪ್ಪಾಜಿ ಬಳಿಕ, ನದಿ ದಾಟಿ ಬಂದು ಚಿಕ್ಕಹಲಗೂರಿನಲ್ಲಿ ಸುತ್ತಲ ಏಳು ಊರಿನ ಜನರ ಒಕ್ಕಲು ಪಡೆದು ಚಿಕ್ಕಲ್ಲೂರು ಸ್ಥಾಪಿಸಿದರು.

ADVERTISEMENT

ಹೀಗಾಗಿ ಈ ಏಳು ಊರುಗಳ ಜನರು ಒಗ್ಗೂಡಿ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸುತ್ತಾರೆ. ಈ ಹಬ್ಬ ಸುಗ್ಗಿ ಮುಗಿದು ದವಸಧಾನ್ಯಗಳನ್ನು ತುಂಬಿಕೊಳ್ಳುವ ಕೃಷಿಕ ಸಮುದಾಯ ಸಮೃದ್ಧಿಯ ಸಂಕೇತ.

ಚಳಿಯ ನಡುವೆ ಸಡಗರ:
ಜನವರಿ ತಿಂಗಳ ಚುಮುಚುಮು ಚಳಿಯಲಿ, ಹಾಲ ಬೆಳದಿಂಗಳ ರಾತ್ರಿಯಲಿ, ಗಿಜಿಗುಡುವ ಜನಜಂಗುಳಿಯಲಿ, ಧೂಪ ಸಾಂಬ್ರಾಣಿ ಘಮಲಿನ ಜೊತೆ, ಜಾಗಟೆ ಶಬ್ದದ ನಡುವೆ ಕೊಂಬು ಕಹಳೆ ನಾದ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹರಡಿಕೊಳ್ಳುವ ಜನಜಾತ್ರೆ. ಇದು ಚಿಕ್ಕಲ್ಲೂರು ಜಾತ್ರೆಯ ಚಿತ್ರಣ.

ಐದು ದಿನವೂ ವಿಶಿಷ್ಟ: ಐದು ಹಗಲು, ಐದು ರಾತ್ರಿ ಅಪಾರ ಭಕ್ತರ ಹಾಜರಿಯಲ್ಲಿ ಜರುಗುವ ಈ ಜಾತ್ರೆಯಲ್ಲಿ ಒಂದೊಂದು ದಿನವೂ ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ.

ಸಮೀಪದ ಕಾಮಗೆರೆ ಗ್ರಾಮದಲ್ಲಿ ಡಿಸೆಂಬರ್‌ ತಿಂಗಳ ಹುಣ್ಣಿಮೆಯಂದು ಜರುಗುವ ಚಂದ್ರಮಂಡಲ ಉತ್ಸವದ ಬಳಿಕ ಜನವರಿಯ ಹುಣ್ಣಿಮೆ ದಿನದಿಂದು ನಡೆಯುವ ಚಂದ್ರಮಂಡಲ ಉತ್ಸವದೊಂದಿಗೆ ಚಿಕ್ಕಲ್ಲೂರಿನ ಐದು ದಿನಗಳ ಜಾತ್ರೆಗೆ ಚಾಲನೆ ನೀಡಲಾಗುತ್ತದೆ.

ಮೊದಲ ದಿನ ನಡೆಯುವ ಚಂದ್ರಮಂಡಲ ಒಂದು ಬೆಳಕಿನ ಆಚರಣೆಯಾಗಿದ್ದು, ನೀಲಗಾರರು ಇದನ್ನು ಪರಂಜ್ಯೋತಿ ಎನ್ನುತ್ತಾರೆ. ಎರಡನೇ ದಿನ ನಡೆಯುವ ದೊಡ್ಡವರ ಸೇವೆ ಧರಗೆ ದೊಡ್ಡವರು ಎನ್ನಲಾಗುವ ದೊಡ್ಡಮ್ಮತಾಯಿ ಹಾಗೂ ರಾಚಪ್ಪಾಜಿ ಅವರಿಗೆ ಸಲ್ಲಿಸುವ ಸೇವೆಯಾಗಿದೆ. ಮೂರನೇ ದಿನ ಮುಡಿಸೇವೆ ಅಥವಾ ನೀಲಗಾರರ ದೀಕ್ಷೆ, ನಾಲ್ಕನೇ ದಿನ ಸಿದ್ಧರ ಸೇವೆ ಅಥವಾ ಪಂಕ್ತಿಸೇವೆ ನಡೆಯುತ್ತವೆ. ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆಬಾಗಿಲಿನ ಸೇವೆಯೊಂದಿಗೆ ಐದು ದಿನಗಳ ಜಾತ್ರೆಗೆ ತೆರೆಬೀಳುತ್ತದೆ.

ಒಟ್ಟಾರೆ ಬಹುಜನರ ಸಂಸ್ಕೃತಿಯ ನೆಲೆಗಟ್ಟನ್ನು ತನ್ನ ಗರ್ಭದಲ್ಲಿರಿಸಿಕೊಂಡಿರುವ ನೀಲಗಾರ ಮಂಟೇಸ್ವಾಮಿ ಪರಂಪರೆ ಇಂದಿಗೂ ಜಾತ್ಯತೀತವಾಗಿ ಯಾವುದೇ ಧರ್ಮ ಸಂಸ್ಕೃತಿಯ ಸೀಮಿತಕ್ಕೆ ಒಳಗಾಗದೆ ವೈಶಿಷ್ಟ್ಯವನ್ನು ಕಾಪಾಡಿಕೊಂಡಿದೆ. ಆಚರಣೆ, ಆಹಾರ ಪದ್ಧತಿಗಳು ಈ ಭಾಗದ ಹಿಂದುಳಿದ ಸಮುದಾಯಗಳ ಅಭಿವ್ಯಕ್ತಿಯಾಗಿದೆ.ಆದರೆ, ಆಹಾರ ಸಂಸ್ಕೃತಿಗೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ನಡೆದಿರುವ ಬೆಳವಣಿಗೆಗಳು ಭಕ್ತರಲ್ಲಿ ಗೊಂದಲ ಉಂಟುಮಾಡಿವೆ.

‘ಇಂದು ಅವೈದಿಕ ದೇಸಿ ಸಮುದಾಯಗಳ ಜಾತ್ರೆ, ಆಚರಣೆ, ಆಹಾರ ಪದ್ಧತಿಗಳು ಸವಾಲು ಮತ್ತು ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಾಹಿತಿ ಹಾಗೂ ಜಾನಪದ ಸಂಶೋಧಕ ಮಹಾದೇವ ಶಂಕನಪುರ.

‘ಹಿಂದೂ ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ತಳ ಸಮುದಾಯಗಳ ಆಹಾರ ಸಂಸ್ಕೃತಿ, ದೇಸಿ ಪರಂಪರೆ ಗಳನ್ನು ಹತ್ತಿಕ್ಕುವ ಶಕ್ತಿಗಳ ಬಗ್ಗೆ ನೀಲಗಾರ ಪರಂಪರೆ ಎಚ್ಚೆತ್ತುಕೊಳ್ಳ ಬೇಕಿದೆ. ಅಧಿಕಾರಿ ವರ್ಗಗಳು ಕೂಡ ಕಾನೂನು ಪಾಲನೆ ನೆಪದಲ್ಲಿ ನೆಲಮೂಲ ಜನಸಂಸ್ಕೃತಿಗೆ ಧಕ್ಕೆ ತರದಂತೆ ಜವಾಬ್ದಾರಿಯಿಂದ ನಡೆದುಕೊಳ್ಳ ಬೇಕಿದೆ’ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.