ADVERTISEMENT

ಯಶಸ್ವಿನಿ: ದುರ್ಬಳಕೆ ತಡೆಗೆ ಸೂಚನೆ

ಜಿಲ್ಲೆಯಲ್ಲಿ 1,27,965 ಸದಸ್ಯರ ನೋಂದಣಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 8:30 IST
Last Updated 1 ಜನವರಿ 2014, 8:30 IST

ಚಾಮರಾಜನಗರ: ‘ರೈತರ ಆರೋಗ್ಯ ರಕ್ಷಣೆಗಾಗಿ ಜಾರಿಯಲ್ಲಿರುವ ಯಶಸ್ವಿನಿ ಯೋಜನೆ  ದುರ್ಬಳಕೆಯಾಗದಂತೆ ಸಹಕಾರ ಇಲಾಖೆಯ ಅಧಿಕಾರಿಗಳು ಎಚ್ಚರವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಯಶಸ್ವಿನಿ ಯೋಜನೆ ಕುರಿತ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೇವಲ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಯೋಜನೆ­ಯಡಿ ನೋಂದಾಯಿಸುವ ದೃಷ್ಟಿಯಿಂದ ಇಲಾಖೆಯು ಕಾರ್ಯ ನಿರ್ವಹಿಸಬಾರದು. ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಈ ಯೋಜನೆ­ಯಡಿ ನೋಂದಣಿಯಲ್ಲಿ ಚಾಮರಾಜನಗರ ಜಿಲ್ಲೆಯು ಶೇಕಡವಾರು ಹೆಚ್ಚಿನ ಪ್ರಗತಿ ಸಾಧಿಸಿರು­ವುದು ಶ್ಲಾಘನೀಯ. ಆದರೆ, ಯೋಜನೆಯ ಸದಸ್ಯತ್ವ ದುರುಪಯೋಗವಾಗದಂತೆ ಎಚ್ಚರಿಕೆ­ವಹಿಸಬೇಕು. ರೋಗಗಳ ಬಗ್ಗೆ ಸುಳ್ಳು ಮಾಹಿತಿ ನೀಡಿ ಪ್ರಯೋಜನ ಪಡೆಯದಂತೆಯೂ ನಿಗಾ­ವಹಿ­ಸ­­ಬೇಕು. ಅರ್ಹ ಫಲಾನುಭವಿಗಳಿಗೆ  ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದು.

ಯಶಸ್ವಿನಿ ಯೋಜನೆಯು ಸಹಕಾರಿ ಸದಸ್ಯರ ಆರೋಗ್ಯ ರಕ್ಷಣೆಗೆ ರೂಪಿಸಿರುವ ಬಹುಪಯೋಗಿ ಯೋಜನೆ. ವರ್ಷದಲ್ಲಿ ಒಂದು ಬಾರಿ ಇತರೇ ವರ್ಗದವರು ಸದಸ್ಯತ್ವ ವಂತಿಗೆ ಹಣ ಪಾವತಿಸಿರ­ಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಸದಸ್ಯತ್ವದ ವಂತಿಗೆ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಅನಾರೋಗ್ಯದ ಸಂದರ್ಭದಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.

ಪ್ರಸಕ್ತ ಸಾಲಿನಡಿ ಜಿಲ್ಲೆಯಲ್ಲಿ 1.10 ಲಕ್ಷ ಸದಸ್ಯರನ್ನು ಯಶಸ್ವಿನಿ ಯೋಜನೆಗೆ ನೋಂದಾ­ಯಿಸಲು ಗುರಿ ನೀಡಲಾಗಿತ್ತು. ಒಟ್ಟು 1,27,965 ಸದಸ್ಯರು ನೋಂದಣಿಯಾಗಿದ್ದಾರೆ. ಸದಸ್ಯರಿಂದ ₨ 120.87 ಲಕ್ಷ ವಂತಿಗೆ ಸಂಗ್ರಹಿಸಲಾಗಿದೆ. ಪರಿಶಿಷ್ಟ ಜಾತಿಯ 44,300 ಮತ್ತು ಪರಿಶಿಷ್ಟ ಪಂಗಡದ 18,183 ಸದಸ್ಯರನ್ನು ನೋಂದಣಿ ಮಾಡಲಾಗಿದೆ ಎಂದು ಹೇಳಿದರು. 

ಸಹಕಾರ ಸಂಘಗಳ ಉಪ ನಿಬಂಧಕಿ ವನಜಾಕ್ಷಿ ಮಾತನಾಡಿ, 2013-14ನೇ ಸಾಲಿನಡಿ ಯಶಸ್ವಿನಿ ನೆಟ್‌ವರ್ಕ್‌ ಆಸ್ಪತ್ರೆ ಸಮೂಹಕ್ಕೆ ಕೊಳ್ಳೇಗಾಲದ ಜನನಿ ಆಸ್ಪತ್ರೆಯನ್ನು ಸೇರ್ಪಡೆ­ಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಪತ್‌ಕುಮಾರ್, ಜಿಲ್ಲಾ ಪಂಚಾಯಿತಿಯ ಸಹಾಯಕ
ಯೋಜನಾ­ಧಿಕಾರಿ ಸಿದ್ದಲಿಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.