ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ನಿತ್ಯ ಪ್ರಯಾಣಿಸುವ ಪ್ರವಾಸಿಗರಿಗೂ ಪ್ರಾಣಿಗಳ ದರ್ಶನ ಭಾಗ್ಯ ಸಿಗುತ್ತಿದೆ.
ಕಳೆದ ವರ್ಷ ಮಳೆಯಿಲ್ಲದೆ ಕಾಡುಗಳು ಒಣಗಿ, ಕಾಳ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿ ಇಲ್ಲಿನ ಪ್ರಾಣಿಗಳೆಲ್ಲ ತಮಿಳುನಾಡಿನ ಮುದುಮಲೈ ಮತ್ತು ಕೇರಳದ ನೀರಿರುವ ಪ್ರದೇಶಗಳಿಗೆ ವಲಸೆ ಹೋಗಿದ್ದವು. ಕೆಲ ಪ್ರಾಣಿಗಳು ಬಾಯಾರಿಕೆಯಿಂದ ಮೃತಪಟ್ಟಿರುವುದಾಗಿ ವರದಿ ಯಾಗಿತ್ತು. ಹಾಗಾಗಿ ಜಿಂಕೆ ಸೇರಿದಂತೆ ಯಾವುದೇ ಪ್ರಾಣಿಗಳು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಅಷ್ಟಾಗಿ ಕಂಡು ಬರುತ್ತಿರಲಿಲ್ಲ. ಕೆಲ ಪ್ರಾಣಿಗಳು ನೀರನ್ನು ಅರಸಿ ಗ್ರಾಮಗಳಿಗೂ ದಾಳಿ ಮಾಡುತ್ತಿದ್ದವು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕಾಡು ಪ್ರಾಣಿಗಳಿಗೆ ನೀರು ಮತ್ತು ಆಹಾರ ಎಲ್ಲೆಂದರಲ್ಲಿ ಸಿಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬಂಡೀಪುರದಿಂದ ಕರ್ನಾಟಕದ ಗಡಿ ಭಾಗದವರೆಗೆ ಪ್ರಯಾಣ ಮಾಡಿದರೆ ಅನೇಕ ಕಾಡುಪ್ರಾಣಿಗಳು ಕಂಡುಬರುತ್ತವೆ. ಇದರಿಂದ ಪ್ರವಾಸಿಗರು ರಸ್ತೆಯ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿ, ಪ್ರಾಣಿಗಳ ವೀಕ್ಷಣೆ ಮಾಡಬಹುದು.
ಬಂಡೀಪುರ ರಸ್ತೆಯಲ್ಲಿ ಈಚೆಗೆ ಆನೆ, ಕರಡಿ, ಸಾರಂಗ ಮತ್ತು ಕಾಡೆಮ್ಮೆ ಹಾಗೂ ಜಿಂಕೆಗಳು ಕಾಣಿಸಿಕೊಂಡಿದ್ದವು. ಅನೇಕ ದಿನಗಳ ಹಿಂದೆ ಇಂಥ ಅಪರೂಪದ ದೃಶ್ಯ ಕಂಡುಬಂದಿತ್ತು. ಇತ್ತೀಚಿಗೆ ಮಳೆಯಾಗುತ್ತಿರುವ ಕಾರಣ ಪ್ರಾಣಿಗಳು ರಸ್ತೆಯಲ್ಲಿ ಸುಲಭವಾಗಿ ಕಾಣಸಿಗುತ್ತಿವೆ ಎಂದು ಹೇಳುತ್ತಾರೆ ಹವ್ಯಾಸಿ ಛಾಯಾಗ್ರಾಹಕ ರಾಬಿನ್ಸನ್.
ಏಪ್ರಿಲ್–ಮೇ ತಿಂಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಬಂಡೀಪುರಕ್ಕೆ ಬರುತ್ತಿದ್ದಾರೆ. ವಾರಾಂತ್ಯದಲ್ಲಿ ಹೆಚ್ಚಿನವರಿಗೆ ಸಫಾರಿಗೆ ಟಿಕೆಟ್ ಸಿಗದಿದ್ದ ಸಮಯದಲ್ಲಿ ಬೇಸರದಿಂದ ಹಿಂದಿರುಗುವಾಗ ಪ್ರಾಣಿಗಳ ದರ್ಶನವಾಗಿ ಸಂತಸಪಟ್ಟಿದ್ದಾರೆ.
ತಿಂಗಳಿನಿಂದ ಸಫಾರಿ ಹೋದವರಿಗೆ ಹೆಚ್ಚು ಪ್ರಾಣಿಗಳ ದರ್ಶನವಾಗುತ್ತಿದೆ. ಅನೇಕ ಬಾರಿ ಹುಲಿ, ಚಿರತೆಗಳು ಕಾಡಿಸಿಕೊಂಡಿವೆ. ಕಳೆದ ವಾರ ಬಂಡೀಪುರ ಅರಣ್ಯದೊಳಗಿನ ಕೆರೆಯೊಂದರಲ್ಲಿ ಐದು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿವೆ. ಆನೆಗಳಂತೂ ದಿನನಿತ್ಯ ರಸ್ತೆಯ ಬದಿಯಲ್ಲೆ ದರ್ಶನ ನೀಡುತ್ತಿವೆ ಎಂದು ಸಫಾರಿ ವಾಹನ ಚಾಲಕ ಮಾಹಿತಿ ನೀಡಿದರು.
**
ಬಂಡೀಪುರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಸಿರು ಹೆಚ್ಚಾಗಿ, ಪ್ರಾಣಿಗಳು ಕಾಣಸಿಗುತ್ತಿವೆ
– ಅಂಭಾಡಿ ಮಾಧವ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಎಂ.ಮಲ್ಲೇಶ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.