ADVERTISEMENT

ರಾಜ್ಯ ಸರ್ಕಾರದಿಂದ ಜನಪರ ಯೋಜನೆ: ಸಂಸದ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:55 IST
Last Updated 23 ಸೆಪ್ಟೆಂಬರ್ 2013, 9:55 IST

ಯಳಂದೂರು: ರಾಜ್ಯ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಹಾಗೂ ಸಾಮಾಜಿಕ ಪಿಂಚಣಿ ಅದಾಲತ್‌ ಮುಂತಾದ ಯೋಜನೆ ಜಾರಿಗೊಳಿಸುವ ಮೂಲಕ ಬಡವರ ಹಾಗೂ ನಿರ್ಗತಿಕರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಸಂಸದ ಆರ್‌. ಧ್ರುವನಾರಾಯಣ ಹೇಳಿದರು.

ಅಗರ– ಮಾಂಬಳ್ಳಿ ಗ್ರಾಮದ ನಾಡಕಚೇರಿಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಗರ ಹೋಬಳಿ ಸಾಮಾಜಿಕ ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಪಿಂಚಣಿ ಅದಾಲತ್‌ ಮೂಲಕ ಅಧಿಕಾರಿಗಳು ಜನರ ಬಳಿಗೆ ಹೋಗಿ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಿ,  ಅವರ ಮನೆ ಬಾಗಿಲಿಗೇ ಸೇವೆ ಒದಗಿಸಲಾಗುತ್ತಿದೆ. ಇದರಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಶ್ರಮಿಸುತ್ತಿದ್ದಾರೆ. ಯಾವುದೇ ಯೋಜನೆಗಳಲ್ಲಿ ಅಧಿಕಾರಿಗಳು ಲೋಪಗಳನ್ನು ಎಸಗಿದ್ದಲ್ಲಿ ನೇರವಾಗಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುವ ಅವಕಾಶವಿದೆ ಎಂದು ತಿಳಿಸಿದರು.

ಶಾಸಕ ಎಸ್‌. ಜಯಣ್ಣ ಮಾತನಾಡಿ ಅಗರ–ಮಾಂಬಳ್ಳಿ ಗ್ರಾಮಗಳು ತಾಲ್ಲೂಕಿನ ಗೊಡ್ಡ ಗ್ರಾಮಗಳಾಗಿವೆ. ಇವುಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವುದರಿಂದ ಇಲ್ಲಿನ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಎರಡೂ ಗ್ರಾಮಗಳ ಜನಪ್ರತಿನಿಧಿಗಳು ಈ ಬಗ್ಗೆ ಚರ್ಚಿಸಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿದ್ದಲ್ಲಿ ಅದರ ಅನುಷ್ಠಾನಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಸತೀಶ್ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ, ಮಾಂಬಳ್ಳಿ ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಮ್ಮ, ಅಗರ ಗ್ರಾ.ಪಂ. ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಲಿಂಗರಾಜು, ತಹಶೀಲ್ದಾರ್‌ ಶಿವರಾಮು, ಗ್ರೇಡ್‌ 2 ತಹಶೀಲ್ದಾರ್‌ ಚಂದ್ರಪ್ಪ, ಉಪ ತಹಶೀಲ್ದಾರ್‌ ನಂಜಯ್ಯ, ಮಹದೇವಪ್ಪ, ಮಹಮ್ಮದ್‌ ಹಸೀಬ್‌, ನಂಜುಂಡಸ್ವಾಮಿ, ನಂಜುಂಡ, ತೋಟೇಶ್‌ ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಪ್ರಶಾಂತ್‌, ಮುಡಿಗುಂಡ ಶಾಂತರಾಜು, ಕಮಲ್‌, ಅಶ್ವಥ್‌, ಮಹದೇವಪ್ಪ, ವಿಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.