ADVERTISEMENT

ಲೋಕಾಯುಕ್ತ ಬಲೆಗೆ ಗ್ರಾಮ ಲೆಕ್ಕಿಗ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 10:17 IST
Last Updated 6 ಡಿಸೆಂಬರ್ 2012, 10:17 IST

ಗುಂಡ್ಲುಪೇಟೆ:  ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ರೊಬ್ಬರು ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ಜರುಗಿದೆ.

ತಾಲ್ಲೂಕಿನ ಹಂಗಳ ಹೋಬಳಿಯ ದೇವರಹಳ್ಳಿ ವೃತ್ತದಲ್ಲಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯರಾಂ ಎಂಬುವವರು ಸಂಧ್ಯಾಸುರಕ್ಷಾ ಯೋಜನೆಗೆ ಸೇರ್ಪಡೆಗೊಳಿಸಲು ಫಲಾನುಭವಿಯೊಬ್ಬರಿಂದ 1,000 ರೂ. ಲಂಚದ ಹಣ ಸ್ವೀಕರಿಸುತ್ತಿರುವಾಗ ಬಲೆಗೆ ಬಿದ್ದಿದ್ದು, ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಹೊನ್ನೇಗೌಡನಹಳ್ಳಿ ಗ್ರಾಮದ ಎಚ್.ಸಿ. ಮಹದೇವಪ್ಪ ಎಂಬುವವರ ತಂದೆ ಚನ್ನಬಸಪ್ಪ ಮತ್ತು ತಾಯಿ ರತ್ನಮ್ಮ ಎಂಬುವವರನ್ನು ಸಂಧ್ಯಾ ಸುರಕ್ಷಾ ಯೋಜನೆಗೆ ಸೇರ್ಪಡೆಗೊಳಿಸುವ ಸಲುವಾಗಿ ಅಕ್ಟೋಬರ್ 10 ರಂದು ಅರ್ಜಿ ಸಲ್ಲಿಸಿದ್ದರು.

ತಹಶೀಲ್ದಾರ್ ಕಚೇರಿಯಿಂದ ಪರಿಶೀಲನೆಗಾಗಿ ಜಯರಾಂ ನೇಮಕಗೊಂಡಿದ್ದು, ಪರಿಶೀಲನೆ ನಡೆಸಿ ಈ ಅರ್ಜಿಯನ್ನು ಸಂಧ್ಯಾ ಸುರಕ್ಷಾ ಯೋಜನೆಗೆ ಸೇರ್ಪಡೆಗೊಳಿಸಲು 1,000 ರೂ. ಹಣ ನೀಡಬೇಕೆಂದು ತಿಳಿಸಿದ್ದರು.

ಅದರಂತೆ ಬುಧವಾರ  1,000 ರೂ. ಲಂಚದ ಹಣ ನೀಡುವ ಸಂದರ್ಭದಲ್ಲಿ ಚಾಮರಾಜನಗರದ ಲೋಕಾಯುಕ್ತ  ಇಲಾಖೆಯ ವೃತ್ತ ನಿರೀಕ್ಷಕ  ಕೆ.ಟಿ. ಮ್ಯಾಥ್ಯೂ ಥಾಮಸ್ ದಾಳಿ ನಡೆಸಿ ಹಣ ವಶಪಡಿಸಿಕೊಂಡು ದೂರು ದಾಖಲಿಸಿಕೊಂಡರು.   ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.