ADVERTISEMENT

ವಿದ್ಯುತ್ ಅವಘಡ: ಭಸ್ಮವಾದ ಮನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 4:05 IST
Last Updated 18 ಜುಲೈ 2012, 4:05 IST

ಕೊಳ್ಳೇಗಾಲ: ವಿದ್ಯುತ್ ಅವಘಡದಿಂದ ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ಪಟ್ಟಣದ ಮಠದ ಬೀದಿಯಲ್ಲಿ ಸಂಭವಿಸಿದೆ.

ಮಠದ ಬೀದಿವಾಸಿ ಟೈಲರ್ ರಾಚಪ್ಪದೇವರು ಮತ್ತು ಅಂಗನವಾಡಿ ಕಾರ್ಯಕರ್ತೆ ಶಾಂತಿ ಅವರು ಮನೆ ಕಳೆದುಕೊಂಡು ಬೀದಿಪಾಲಾಗಿರುವ ದುರ್ದೈವಿಗಳು.

ಘಟನೆ ವಿವರ: ರಾಚಪ್ಪ ಟೈಲರ್ ಕೆಲಸಕ್ಕೆ ಹಾಗೂ ಪತ್ನಿ ಶಾಂತಿ ಅಂಗನವಾಡಿಗೆ ತೆರಳಿದ್ದರು. ಮಕ್ಕಳು ಶಾಲೆಗೆ ಹೋಗಿದ್ದ ವೇಳೆ ವಿದ್ಯುತ್ ಶಾಟ್‌ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆ. ಗ್ಯಾಸ್ ಸಿಲಿಂಡರ್ ಪೈಪ್‌ಗೆ ತಗುಲಿ ಗ್ಯಾಸ್‌ಲೀಕ್‌ನಿಂದಾಗಿ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಮನೆಯಲ್ಲಿದ್ದ ದವಸ-ಧಾನ್ಯ, ಬಟ್ಟೆಬರೆ, ಬೀರು, ಪೆಟ್ಟಿಗೆ, ಹೆಂಚಿನ ಮನೆಯ ಎಲ್ಲಾ ಸಮಾನುಗಳು ಸುಟ್ಟು ಕರಕಲಾಗಿದ್ದು, 2 ಲಕ್ಷ ರೂ. ನಷ್ಟ ಉಂಟಾಗಿದೆ.

ಬೆಂಕಿ ಶರವೇಗದಲ್ಲಿ ಆವರಿಸಿದ್ದರಿಂದ ಅಕ್ಕಪಕ್ಕದವರೂ ಸಹ ಈ ಬೆಂಕಿಯ ನಾಲಿಗೆಯಿಂದ ಮನೆಯನ್ನಾಗಲಿ ಮನೆಯಲ್ಲಿದ್ದ ವಸ್ತುಗಳನ್ನಾಗಲೀ ಉಳಿಸಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿದ್ದವು. ಸಿಲಿಂಡರ್ ಸ್ಫೋಟಗೊಳ್ಳದೇ ಇದ್ದರಿಂದ ಅದೃಷ್ಟವಶಾತ್ ಅಕ್ಕಪಕ್ಕದ ದುರ್ಘಟನೆಯಿಂದ ಪಾರಾಗಿವೆ.

ಶಾಸಕ ಜಿ.ಎನ್.ನಂಜುಂಡಸ್ವಾಮಿ ಬೆಂಕಿ ದುರ್ಘಟನೆಯಿಂದ ಬೀದಿಪಾಲಾ ಗಿರುವ ಕುಟುಂಬಕ್ಕೆ 10 ಸಾವಿರ ಹಣ ನೀಡಿದ್ದು, ನಗರಸಭೆ ವತಿಯಿಂದ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ಪತ್ನಿ ಮೇಲೆ ಹಲ್ಲೆ
ಬುದ್ಧಿಭ್ರಮಣೆಯಿಂದ ಬಳಲುತ್ತಿದ್ದ ಪತಿಯು ಪತ್ನಿಯ ಮೇಲೆ ಕುಡುಗೋಲಿನಿಂದ ಹಲ್ಲೆಗೈದ ಘಟನೆ ತಾಲ್ಲೂಕಿನ ಕೊಳ್ಳೇಗಾಲ ಮೋಳೆಯಲ್ಲಿ ಮಂಗಳವಾರ ನಡೆದಿದೆ.

ಕೊಳ್ಳೇಗಾಲ ಮೋಳೆ ವಾಸಿ ಮಹಾದೇವ ಪತ್ನಿಯ ಮೇಲೆ ಕುಡುಗೋಲಿನಿಂದ ಹಲ್ಲೆಗೈದ ಆರೋಪಿ. ಮಂಗಳವಾರ ಮನೆಯಲ್ಲಿ ಪತ್ನಿ ಬಟ್ಟೆ ಒಗೆಯುತ್ತಿದ್ದ ವೇಳೆ ಮಹದೇವ ಕುಡುಗೋಲಿನಿಂದ ನೀಲಮ್ಮಳ ಮೇಲೆ ಹಲ್ಲೆಗೈದಿದ್ದಾನೆ. ಕುಡುಗೋಲು ಹಲ್ಲೆಯಿಂದ ತೀವ್ರಗಾಯಗೊಂಡ ನೀಲಮ್ಮಳನ್ನು ತಕ್ಷಣ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.