ADVERTISEMENT

ಶೇ 27 ರಷ್ಟು ಬಿತ್ತನೆ ಪೂರ್ಣ

ಪ್ರಸಕ್ತ ವರ್ಷ 1,65,431 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

ಪ್ರಜಾವಾಣಿ ವಿಶೇಷ
Published 3 ಜೂನ್ 2013, 9:10 IST
Last Updated 3 ಜೂನ್ 2013, 9:10 IST

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಡಿ 27,558 ಹೆಕ್ಟೇರ್ ನೀರಾವರಿ ಪ್ರದೇಶ ಹಾಗೂ 1,37,873 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 1,65,431 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

ಇದರಲ್ಲಿ 1,16,347 ಹೆಕ್ಟೇರ್ ಪ್ರದೇಶದಲ್ಲಿ 1,73,718 ಮೆಟ್ರಿಕ್ ಟನ್ ಆಹಾರಧಾನ್ಯ ಹಾಗೂ 35,113 ಹೆಕ್ಟೇರ್ ಕ್ಷೇತ್ರದಲ್ಲಿ 14,887 ಮೆಟ್ರಿಕ್ ಟನ್ ಎಣ್ಣೆಕಾಳು ಉತ್ಪಾದಿಸುವ ಗುರಿ ಹೊಂದಲಾಗಿದೆ. ಜತೆಗೆ, 8,000 ಹೆಕ್ಟೇರ್ ಪ್ರದೇಶದಲ್ಲಿ 7,455 ಬೇಲ್ಸ್ ಹತ್ತಿ, 5,871 ಹೆಕ್ಟೇರ್  ಕ್ಷೇತ್ರದಲ್ಲಿ 4.89 ಲಕ್ಷ ಮೆಟ್ರಿಕ್ ಟನ್ ಕಬ್ಬು ಹಾಗೂ 100 ಹೆಕ್ಟೇರ್ ಪ್ರದೇಶದಲ್ಲಿ 81 ಮೆಟ್ರಿಕ್ ಟನ್ ಹೊಗೆಸೊಪ್ಪು ಉತ್ಪಾದಿಸುವ ಗುರಿಯಿದೆ.

ಈಗಾಗಲೇ, ಜಿಲ್ಲೆಯಲ್ಲಿ ಒಟ್ಟು 44,974 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ  ಪೂರ್ಣಗೊಂಡಿದೆ. ಒಟ್ಟಾರೆ ಶೇ. 27ರಷ್ಟು ಬಿತ್ತನೆಯಾಗಿದೆ. ಇದರಲ್ಲಿ ಶೇ. 30ರಷ್ಟು (42,045 ಹೆಕ್ಟೇರ್) ಮಳೆಯಾಶ್ರಿತ ಪ್ರದೇಶ ಹಾಗೂ ಶೇ. 10ರಷ್ಟು (2,929 ಹೆಕ್ಟೇರ್) ನೀರಾವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಈ ಪೈಕಿ 14,535 ಹೆಕ್ಟೇರ್ ಪ್ರದೇಶದಲ್ಲಿ ತಣಧಾನ್ಯ (ಏಕದಳ ಧಾನ್ಯ), 7,940 ಹೆಕ್ಟೇರ್‌ನಲ್ಲಿ ಬೇಳೆಕಾಳು, 12,473 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬೆಳೆ, 7,650 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. 90 ಹೆಕ್ಟೇರ್‌ನಲ್ಲಿ ಹೊಗೆಸೊಪ್ಪಿನ ಬಿತ್ತನೆಯೂ ಆಗಿದೆ.

ಜಿಲ್ಲೆಯ 4 ತಾಲ್ಲೂಕಿನಲ್ಲಿಯೂ ಮುಂಗಾರು ಹಂಗಾಮಿನ ಕ್ಷೇತ್ರ ವ್ಯಾಪಿಸಿದೆ. ಬತ್ತ, ರಾಗಿ, ಮುಸುಕಿನಜೋಳ, ಹುರುಳಿ, ಅಲಸಂದೆ, ಅವರೆ, ತೊಗರಿ, ಹೆಸರು, ಉದ್ದು, ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹತ್ತಿ, ಕಬ್ಬು ಬೆಳೆಯಲಾಗುತ್ತಿದೆ. ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ಕೊಳ್ಳೇಗಾಲ, ಯಳಂದೂರು ಮತ್ತು ಚಾಮರಾಜನಗರ ತಾಲ್ಲೂಕಿನ ರೈತರು ಬತ್ತ, ರಾಗಿ, ಮುಸುಕಿನಜೋಳ, ಹತ್ತಿ, ಸೂರ್ಯಕಾಂತಿ, ನೆಲಗಡಲೆ ಬಿತ್ತನೆಗೆ ಭೂಮಿ ಹದಗೊಳಿಸುವಲ್ಲಿ ನಿರತರಾಗಿದ್ದಾರೆ.

ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನ ಖುಷ್ಕಿ ಪ್ರದೇಶದಲ್ಲಿ ಬೆಳೆಯಲಾಗುವ ಹೈಬ್ರಿಡ್‌ಜೋಳ, ಹೆಸರು, ಅಲಸಂದೆ, ಉದ್ದು, ತೊಗರಿ, ಎಳ್ಳು, ಸೂರ್ಯಕಾಂತಿ, ನೆಲಗಡಲೆ, ಹತ್ತಿ, ತಂಬಾಕು ಬಿತ್ತನೆ ಪೂರ್ಣಗೊಳ್ಳುವ ಹಂತದಲ್ಲಿದೆ.
ರಸಗೊಬ್ಬರ ಮತ್ತು ಬಿತ್ತನೆಬೀಜ

ಶ್ರಿಮುಂಗಾರು ಹಂಗಾಮಿಗಾಗಿ ಒಟ್ಟು 38,560 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಲಾಗಿದೆ. ಮೇ ಅಂತ್ಯಕ್ಕೆ ಒಟ್ಟು 10,450 ಮೆಟ್ರಿಕ್ ಟನ್ ಗೊಬ್ಬರದ ದಾಸ್ತಾನು ಇದೆ. ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ರಿಯಾಯಿತಿ ದರದಡಿ 16,661 ಕ್ವಿಂಟಲ್ ಬಿತ್ತನೆಬೀಜ ವಿತರಿಸುವ ಗುರಿಯಿದೆ. ಈವರೆಗೆ 2,025 ಕ್ವಿಂಟಲ್ ದೃಢೀಕೃತ ಹೈಬ್ರಿಡ್ ಜೋಳ, ದ್ವಿದಳಧಾನ್ಯ ಪೂರೈಕೆಯಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ 1,308 ಕ್ವಿಂಟಲ್ ಬಿತ್ತನೆಬೀಜ ವಿತರಿಸಲಾಗಿದೆ.

ಕೆಎಸ್‌ಎಸ್‌ಸಿ, ಎನ್‌ಎಸ್‌ಸಿ, ಕೆಓಎಫ್ ಮತ್ತು ಖಾಸಗಿಯವರಲ್ಲಿ ಒಟ್ಟು 717 ಕ್ವಿಂಟಲ್ ಬಿತ್ತನೆಬೀಜದ ಲಭ್ಯತೆ ಇದೆ. ಇಲ್ಲಿಯವರೆಗೆ 3,200 ರೈತ ಫಲಾನುಭವಿಗಳು ರೂ 10 ಲಕ್ಷ ಸಹಾಯಧನದ ಸೌಲಭ್ಯ ಪಡೆದಿದ್ದಾರೆ.

`ವಿವಿಧ ಬೆಳೆಯ ಬಿತ್ತನೆಬೀಜಗಳನ್ನು ಸಂಸ್ಥೆಗಳಿಂದ ಸರಬರಾಜು ಮಾಡಿಸಿಕೊಂಡು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿ ರೈತರಿಗೆ ವಿತರಿಸಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಎಣ್ಣೆಕಾಳು, ಬೇಳೆಕಾಳು ಮತ್ತು ಮಿನಿಕಿಟ್ಸ್ ಕಾರ್ಯಕ್ರಮದಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬಿತ್ತನೆಬೀಜ ವಿತರಿಸಲು ಕ್ರಮಕೈಗೊಳ್ಳಲಾಗಿದೆ' ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.