ADVERTISEMENT

ಸಚಿವರ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:42 IST
Last Updated 28 ನವೆಂಬರ್ 2017, 6:42 IST

ಚಾಮರಾಜನಗರ: ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಸಚಿವರಾದ ಕೆ.ಜೆ. ಜಾರ್ಜ್‌ ಮತ್ತು ವಿನಯ ಕುಲಕರ್ಣಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಪಟ್ಟಣ ಪೊಲೀಸ್ ಠಾಣೆ, ಭುವನೇಶ್ವರಿ ವೃತ್ತದ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಘೋಷಣೆಗಳನ್ನು ಕೂಗಿದರು.

ಡಿವೈಎಸ್‌ಪಿ ಗಣಪತಿ ಅವರ ಸಾವಿನ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಅವರ ಕೈವಾಡ ಇದೆ ಎಂಬ ಆರೋಪ ಪ್ರಮುಖವಾಗಿ ಕೇಳಿಬಂದಿದೆ. ಈ ಕುರಿತು ಸಿಬಿಐ ತನಿಖೆ ಸಹ ಆರಂಭವಾಗಿದೆ. ಆದರೂ ಅವರು ತಮ್ಮ ಸ್ಥಾನದಲ್ಲಿ ಮುಂದುವರಿದಿರುವುದು ದುರದೃಷ್ಟಕರ ಎಂದು ಹೇಳಿದರು.

ADVERTISEMENT

ಈಗ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ವಿನಯ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಹಂತಕರ ರಕ್ಷಣೆಗೆ ಅವರು ಮುಂದಾಗಿರುವುದಕ್ಕೆ ಸಾಕ್ಷ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಯೋಗೀಶ್‌ ಗೌಡರ ಕುಟುಂಬದ ಪರ ವಕೀಲ ಆನಂದ್‌ ಅವರಿಗೆ ಸಚಿವರು ಬೆದರಿಕೆ ಒಡ್ಡಿರುವ ಧ್ವನಿಸುರುಳಿ ಎಲ್ಲೆಡೆ ವ್ಯಾಪಕವಾಗಿ ಹರಡಿದೆ ಎಂದು ತಿಳಿಸಿದರು.

ಯೋಗೀಶ್‌ ಕುಟುಂಬದವರು ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದರೂ ಸರ್ಕಾರ ಅವರ ಅಹವಾಲು ಆಲಿಸುತ್ತಿಲ್ಲ. ಬದಲಿಗೆ ವಿನಯ ಕುಲಕರ್ಣಿ ಅವರ ರಕ್ಷಣೆಗೆ ನಿಂತಿದೆ. ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರು ಹುಬ್ಬಳ್ಳಿಯಲ್ಲಿಯೇ ಠಿಕಾಣಿ ಹೂಡಿ ಸಂಧಾನಕ್ಕಾಗಿ ಕುಟುಂಬದವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಜಾರ್ಜ್‌ ಅವರ ಮೇಲಿನ ಆರೋಪ ಇಡೀ ರಾಜ್ಯಕ್ಕೆ ತಿಳಿದಿದೆ. ಆದರೂ ಅವರು ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.

ವಿನಯ ಕುಲಕರ್ಣಿ ಅವರು ಸಚಿವ ಸ್ಥಾನಕ್ಕೆ ಅರ್ಹರಲ್ಲ. ಅವರು ಗೂಂಡಾ ಪ್ರವೃತ್ತಿಯನ್ನೇ ನಡೆಸಿಕೊಂಡು ಬಂದವರು. ಸಂವಿಧಾನಕ್ಕೆ ಅನುಗುಣವಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಸಚಿವರಾಗಿ ಅವರ ನಡೆ ಸರಿಯಲ್ಲ ಎಂದು ಹೇಳಿದರು.

ಆರೋಪ ಸ್ಥಾನದಲ್ಲಿರುವ ಸಚಿವರನ್ನು ರಕ್ಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಕೂಡಲೇ ಇಬ್ಬರಿಂದಲೂ ರಾಜೀನಾಮೆ ಪಡೆದು, ಮುಕ್ತ ವಿಚಾರಣೆಗೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದುಶೆಟ್ಟಿ, ಸುಂದರರಾಜ್‌, ನಾಗೇಂದ್ರ, ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ನಗರಸಭೆ ಸದಸ್ಯರಾದ ರಾಜೇಶ್‌, ಕುಮಾರ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಇ.ಬಿ. ದಾಕ್ಷಾಯಿಣಿ, ಮುಖಂಡರಾದ ಮಲ್ಲೇಶ್‌, ಪೃಥ್ವಿರಾಜ್, ಶಿವಮ್ಮ, ನಾಗಶ್ರೀ ಪ್ರತಾಪ್, ವನಜಾಕ್ಷಿ, ಮಂಗಳಮ್ಮ, ಕವಿತಾ, ಮಂಜುನಾಥ್‌, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.