ADVERTISEMENT

ಸೇನೆ ಸೇರ್ಪಡೆ: ಹೈ.ಕ ಹಿಂದೆ!

ನಾಗರಾಜ ಚಿನಗುಂಡಿ
Published 11 ಜೂನ್ 2013, 9:21 IST
Last Updated 11 ಜೂನ್ 2013, 9:21 IST

ಗುಲ್ಬರ್ಗ: ಭಾರತೀಯ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಯುವಕರು ಮೈದಾನದಲ್ಲಿ ಜಮಾಯಿಸುತ್ತಾರೆ. ಆದರೆ ಉತ್ತರ ಕರ್ನಾಟಕ  ಭಾಗವಾದ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಯುವಕರು ಮಾತ್ರ ಇದಕ್ಕೆ ವ್ಯತಿರಿಕ್ತ ವಾಗಿದ್ದಾರೆ!

ನಗರದಲ್ಲಿ ಜೂನ್ 6 ರಿಂದ 13ರ ವರೆಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯುತ್ತಿದೆ. ಮೊದಲ ಐದು ದಿನದಲ್ಲಿ ಬೆಳಗಾವಿ ಒಂದೇ ಜಿಲ್ಲೆಯಿಂದ 14 ಸಾವಿರ ಯುವಕರು ಸೇನಾ  ಭರ್ತಿಯಲ್ಲಿ ಪಾಲ್ಗೊಂಡಿದ್ದಾರೆ.

ಆದರೆ, ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಿಂದ ಕೇವಲ 1 ಸಾವಿರ ಯುವಕರು ಸೇನೆ ಸೇರಲು ಬಂದಿದ್ದರು.

`ಸೇನೆಯ ಬಗ್ಗೆ ಈ ಭಾಗದ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಕೊರತೆ ಇದೆ. ಸೇನೆಯಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವುದು ನಮ್ಮ ಗುರಿ. ಹೀಗಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈಗ 5ನೇ ಸೇನಾ ನೇಮಕಾತಿ ರ‍್ಯಾಲಿ ನಡೆಸಲಾಗುತ್ತಿದೆ.

ಮೊದಲಿಗಿಂತಲೂ ಈಗ ಸ್ವಲ್ಪ ತಿಳಿವಳಿಕೆ ಹೆಚ್ಚಾಗುತ್ತಿದೆ' ಎಂದು ಸೇನಾ ನೇಮಕಾತಿ ರ‍್ಯಾಲಿ ನಿರ್ದೇಶಕ ಕರ್ನಲ್ ವಿಧಾನ್‌ಶರಣ್ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಅ.2010 ರಾಯಚೂರು, ಫೆ. 2012 ಕೊಪ್ಪಳ, ಜೂ. 2012 ಬೀದರ್, ಜ.2013 ಬಳ್ಳಾರಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿಗಳಾಗಿವೆ. ಇವುಗಳಲ್ಲಿ ಬೆಳಗಾವಿ ಹಾಗೂ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಿದ್ದರು.

ಕೊಪ್ಪಳದಲ್ಲಿ ನಡೆದ ಸೇನಾ ರ‍್ಯಾಲಿವೊಂದಕ್ಕೆ ಮಾತ್ರ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಂದ ಸ್ವಲ್ಪ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನುವುದು ಸೇನಾ ನೇಮಕಾತಿ ರ‍್ಯಾಲಿ ಅಧಿಕಾರಿಯ ಮಾಹಿತಿ.

ಗುಲ್ಬರ್ಗದಲ್ಲಿ ನಡೆಯುತ್ತಿರುವ ಸೇನಾ ರ‍್ಯಾಲಿಯಲ್ಲಿ ಯುವಕರ ಸಂಖ್ಯೆ ಆಧರಿಸಿ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅಭ್ಯರ್ಥಿಗಳಿಗೆ ಒಂದು ದಿನ ನೀಡಲಾಗಿತ್ತು. ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳಿಗೆ ಒಟ್ಟು ನಾಲ್ಕು ದಿನಗಳನ್ನು ನಿಗದಿ ಮಾಡಲಾಗಿತ್ತು.

ಮೊದಲ ಐದು ದಿನ `ಜನರಲ್ ಡ್ಯುಟಿ'ಗೆ ನೇಮಕ ಪ್ರಕ್ರಿಯೆ ನಡೆಸಲಾಗಿದ್ದು, ಜೂ.11ರಿಂದ ಜೂ.13ರ ವರೆಗೂ ತಾಂತ್ರಿಕ, ಗುಮಾಸ್ತ, ಸ್ಟೋರ್ ಕೀಪರ್ ಹಾಗೂ ಸೊಲ್ಜರ್ ಟ್ರೇಡ್‌ಮನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ರಾಜ್ಯದಾದ್ಯಂತ ಯುವಕರು ಪಾಲ್ಗೊಳ್ಳಲು ಅವಕಾಶವಿದೆ.

`ನಗರೀಕರಣದ ಪ್ರಭಾವ ಇರುವ ಪ್ರದೇಶದಲ್ಲಿ ಸೇನೆ ಸೇರುವುದಕ್ಕೆ ಯುವಕರು ಹೆಚ್ಚು ಮುಂದೆ ಬರುವುದಿಲ್ಲ. ಹೀಗಾಗಿ ಸೇನಾ ನೇಮಕಾತಿ ರ‍್ಯಾಲಿಗಳನ್ನು ಬಡತನ ಹಿನ್ನೆಲೆ ಇರುವ ಪ್ರದೇಶಗಳಲ್ಲೆ ಹೆಚ್ಚಾಗಿ ಸಂಘಟಿಸಲಾಗುತ್ತಿದೆ.

ಉದ್ಯೋಗಾಕಾಶ ಎಲ್ಲರಿಗೂ ದೊರೆಯಲಿ ಎನ್ನುವುದು ನಮ್ಮ ಚಿಂತನೆ. ಹೈದರಾಬಾದ್ ಕರ್ನಾಟಕ ಯುವ ಸಮುದಾಯದ ಪ್ರತಿಕ್ರಿಯೆ ಬೇಸರ ಮೂಡಿಸುವಂತಿದೆ' ಎಂದು ಕರ್ನಲ್ ವಿಧಾನ್‌ಶರಣ್ ಹೇಳಿದರು.

ಕೇರಳ, ಹೈದರಾಬಾದ್‌ನಲ್ಲಿ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಸೇನೆ ಸೇರುವುದಕ್ಕೆ ಅಧಿಕ ಸಂಖ್ಯೆಯಲ್ಲಿ ಧಾವಿಸುತ್ತಾರೆ. ಆದರೆ ಹೈದರಾಬಾದ್ ಕರ್ನಾಟಕದಲ್ಲಿ ಆ ರೀತಿಯ ವಾತಾವರಣವಿಲ್ಲ.

ಈ ಭಾಗದ ಯುವಕರು ಸೈನಿಕರನ್ನು ಹತ್ತಿರದಿಂದ ಗಮನಿಸುವ ಅವಕಾಶ ಇಲ್ಲದಿರುವುದಿರುವುದು ಒಂದು ಕಾರಣ ಇರಬಹುದು. ಸೈನಿಕರು ಕೂಡ ಉತ್ತಮ ಸಂಬಳ ಪಡೆಯುವ ನೌಕರರು; ಜತೆಗೆ ದೇಶಭಕ್ತಿ ಕೂಡಾ ಇರುತ್ತದೆ. ಈ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ' ಎನ್ನುವುದು ಇವರ ಸಲಹೆ.

`ಹೈದರಾಬಾದ್ ಕರ್ನಾಟಕದಿಂದ ಸೈನ್ಯ ಸೇರ್ಪಡೆ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಉಚಿತ ತರಬೇತಿ ಕಾರ್ಯಾಗಾರ ನಡೆಸಿದ್ದೇವೆ. ಬೆಳಗಾವಿ ಹಾಗೂ ವಿಜಾಪುರಗಳಲ್ಲಿ ಖಾಸಗಿಯವರೆ ತರಬೇತಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಭಾಗದಲ್ಲೂ ಅಂತಹ ವಾತಾವರಣವನ್ನು ಸೃಷ್ಟಿಸಬೇಕು' ಎನ್ನುತ್ತಾರೆ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಿ.ಎಚ್. ಹೂಗಾರ್.

ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ಸೇನೆ ಸೇರ್ಪಡೆಯಾಗುವವರ ಪ್ರಮಾಣ ಮೊದಲಿನಿಂದಲೂ ಕಡಿಮೆ ಎನ್ನುವುದಕ್ಕೆ ಮಾಜಿ ಸೈನಿಕರ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಮಾಜಿ ಸೈನಿಕರ ಸಂಖ್ಯೆಯೇ ಸಾಕ್ಷಿ. ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಕೇವಲ 10 ಮಾಜಿ ಸೈನಿಕರು  ನೋಂದಾಯಿಸಿ ಕೊಂಡಿದ್ದಾರೆ.

ಈ ಭಾಗದ ಮಾಜಿ ಸೈನಿಕರು ಬಹುತೇಕ ಮುಂಬೈ, ಹೈದರಾಬಾದ್ ಹಾಗೂ ಪುಣೆಗಳಲ್ಲಿ ವಾಸ ಮಾಡಿರುವುದು ಈ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನುವುದು ಉಪ ನಿರ್ದೇಶಕರ ಸ್ಪಷ್ಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.