ಕೊಳ್ಳೇಗಾಲ: ತುಂಬಿ ತುಳುಕಿ ದುರ್ನಾತ ಬೀರುತ್ತಿರುವ ಕಸದ ತೊಟ್ಟಿ, ಹೂಳು ತುಂಬಿದ ಚರಂಡಿ.. ಮುರಿದು ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ..
-ಇವು ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸಮಸ್ಯೆಗಳು. ಹೊಂಡರಬಾಳು ಗ್ರಾಮವು ಸ್ವಚ್ಛಗ್ರಾಮಕ್ಕೆ ಆಯ್ಕೆಯಾಗಿದ್ದು, ಗ್ರಾಮದಲ್ಲಿ ಸಿಮೆಂಟ್ ಹಾಗೂ ಕಾಂಕ್ರೀಟ್ನಿಂದ ರಸ್ತೆ ನಿರ್ಮಾಣ ಮಾಡಲಾಗಿದೆ.
ಸುವ್ಯವಸ್ಥಿತವಾಗಿ ಚರಂಡಿ ನಿರ್ಮಾಣ ಮಾಡಲಾಗಿದೆ. ಸ್ವಚ್ಛ ಗ್ರಾಮವಾದರೂ ರಸ್ತೆಯ ತುಂಬೆಲ್ಲಾ ಕಸ ರಾಚುತ್ತಿದೆ.
ತೊಟ್ಟಿಗಳಲ್ಲಿ ಕಸ ತುಂಬಿ ತುಳುಕುತ್ತಿದ್ದರೂ ಇದನ್ನು ಬೇರೆಡೆಗೆ ಸಾಗಿಸಲು ಗ್ರಾಮ ಪಂಚಾಯಿತಿ ಗಮನ ಹರಿಸಿಲ್ಲ. ಇದರಿಂದ ಕಸ ರಸ್ತೆಯಲ್ಲೆಲ್ಲಾ ಹೊರಚೆಲ್ಲಿ ದುರ್ನಾತ ಬೀರುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗಿದೆ.
ಗ್ರಾಮದ ಇಂದಿರಾ ಕಾಲೋನಿಯ ಜೈಭೀಮ್ ಅಂಬೇಡ್ಕರ್ ಯುವಕ ಸಂಘದ ನಾಮಫಲಕದ ಬಳಿಯ ವಿದ್ಯುತ್ ಕಂಬದ ಬುಡ ಸಂಪೂರ್ಣವಾಗಿ ಹಾಳಾಗಿದ್ದು, ಮುರಿದು ಬೀಳುವ ಸ್ಥಿತಿ ತಲುಪಿದೆ. ಈ ವಿದ್ಯುತ್ ಕಂಬ ಬದಲಿಸುವ ಬಗ್ಗೆ ಈವರೆಗೂ ಸೆಸ್ಕ್ ಗಮನಹರಿಸಿಲ್ಲ. ಯಾವುದೇ ಸಮಯದಲ್ಲಾದರೂ ಮುರಿದು ಬೀಳುವ ಸ್ಥಿತಿಯಲ್ಲಿದೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಂಬ ಬದಲಿಸಬೇಕು ಎಂಬುದು ಮುಖಂಡ ಸಿದ್ದರಾಜು ಅವರ ಒತ್ತಾಯ.
ಕೆಲವು ಚರಂಡಿಗಳಲ್ಲಿ ಕಸಕಡ್ಡಿಗಳಿಂದ ಹೂಳುತುಂಬಿ ದುರ್ನಾತ ಬೀರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ರೋಗರುಜಿನಗಳಿಗೆ ತುತ್ತಾಗುವ ಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.