ADVERTISEMENT

ಹದಗೆಟ್ಟ ರಸ್ತೆ, ಮಜ್ಜನದ ಬಾವಿ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 5:46 IST
Last Updated 13 ಅಕ್ಟೋಬರ್ 2017, 5:46 IST

ಮಲೆ ಮಹದೇಶ್ವರವ ಬೆಟ್ಟ: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಜಲಾವೃತವಾಗಿದ್ದ ಮಜ್ಜನದ ಬಾವಿಯ ನೀರನ್ನು ಹೊರತೆಗೆದು ಸ್ವಚ್ಛ ಮಾಡಲಾಯಿತು.
ಮಂಗಳವಾರ ರಾತ್ರಿ ಮಲೆ ಮಹದೇಶ್ವರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಗೆ ದೇವಾಲಯದ ಮುಂಭಾಗದಲ್ಲಿರುವ ಚಿಕ್ಕಕೆರೆ ಹಾಗೂ ನಂದಾವನದಲ್ಲಿರುವ ಮಜ್ಜನದ ಬಾವಿ ಸಂಪೂರ್ಣ ಜಲಾವೃತವಾಗಿದ್ದವು. ಇದರಿಂದಾಗಿ ಮಲೆ ಮಹದೇಶ್ವರ ಸ್ವಾಮಿಯ ಮಜ್ಜನಕ್ಕೆ ಎರಡು ದಿನ ಪರದಾಡುವ ಸ್ಥಿತಿ ಎದುರಾಗಿತ್ತು.

ಚಿಕ್ಕ ಕೆರೆಯಿಂದ ನೀರು ಹೊರ ಹೋಗಲು ಕಿರಿದಾದ ಕೊಳವೆ ಮಾರ್ಗ ಇರುವುದರಿಂದ ಭಾರಿ ಪ್ರಮಾಣದಲ್ಲಿ ಹರಿದು ಬಂದ ನೀರು ಹೊರ ಹೋಗಲು ಸಾಧ್ಯವಾಗಲಿಲ್ಲ. ಬುಧವಾರ ಮಳೆ ವಿರಾಮ ನೀಡಿದ್ದರಿಂದ ಜಲಾವೃತವಾಗಿದ್ದ ನೀರು ಹೊರತೆಗೆಯಲು ಅನುಕೂಲವಾಯಿತು. ನಂದಾವನದಲ್ಲಿರುವ ಹಳೆಯ ಬಾವಿಯ ಸುತ್ತು ಗೋಡೆ ನೆಲಕ್ಕುರುಳಿದ್ದು, ನಂದಾವನವೆಲ್ಲ ಕೆಸರುಮಯವಾಗಿದೆ.

ಹದಗೆಟ್ಟ ರಸ್ತೆ: ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ದಿ ಪ್ರಾಧಿಕಾರವು ಇತ್ತ ಕಡೆ ಗಮನ ಹರಿಸದಿರುವುದು ಶೋಚನೀಯವಾದ ವಿಷಯ ಎಂದು ಸಾರ್ವಜನಿಕರು ದೂರಿದ್ದಾರೆ ಪ್ರತಿ ಭಾರಿ ಮಳೆ ಬಂದ ಸಂದರ್ಭದಲ್ಲೂ ದೇವಾಲಯದ ಸಿಬ್ಬಂದಿ ರಸ್ತೆಯಲ್ಲಿ ಎದ್ದ ಕಲ್ಲುಗಳನ್ನು ತೆಗೆದುಹಾಕುವುದೇ ಕೆಲಸವಾಗುತ್ತದೆ.

ADVERTISEMENT

ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನವರಿಸಿ ರಸ್ತೆಯನ್ನು ದುರಸ್ತಿಪಡಿಸಿ, ದಾರಿ ದೀಪಗಳ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಳಚೆ ನೀರು, ಕಸ ಕಡ್ಡಿಯಿಂದ ತುಂಬಿಕೊಂಡಿದ್ದ ಮಜ್ಜನದ ಬಾವಿಯ ನೀರನ್ನು ಸಂಪೂರ್ಣವಾಗಿ ಹೊರ ಹಾಕಿದ ನಂತರ ಅದರಲ್ಲಿ ಬರುವ ಶುದ್ಧ ಜಲವನ್ನು ಮಲೆ ಮಹದೇಶ್ವರ ಸ್ವಾಮಿಯ ಮಜ್ಜನಕ್ಕೆ ತೆಗೆದುಕೊಳ್ಳಲಾಗುವುದು ಎಂದು ದೇವಾಲಯದ ಪ್ರಮುಖ ಆಗಮಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.