ADVERTISEMENT

‘ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಕ್ರಮ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:20 IST
Last Updated 6 ಜನವರಿ 2014, 6:20 IST

ಕೊಳ್ಳೇಗಾಲ: ಶಿವನಸಮುದ್ರ ಸಮೂಹ ದೇವಾಲಯಗಳಲ್ಲಿ ಉತ್ತಮ ಆದಾಯ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ದೇವಾಲಯಗಳನ್ನು ಅಭಿವೃದ್ಧಿಪಡಿಸಿ, ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಆರ್‌. ನರೇಂದ್ರ ತಿಳಿಸಿದರು.

ತಾಲ್ಲೂಕಿನ ಶಿವನಸಮುದ್ರ ಮಧ್ಯ ರಂಗನಾಥ, ಪ್ರಸನ್ನ ಮೀನಾಕ್ಷಿ ದೇವಾಲಯಗಳಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯಾಗಶಾಲೆ ಮತ್ತು ಪಾಕಶಾಲೆ ಹಾಗೂ ಸಿದ್ದಪ್ಪಾಜಿ ದೇವಾಲಯ ಉದ್ಘಾಟನೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವನಸಮುದ್ರ ದೇವಾಲಯಗಳಲ್ಲಿ ಈ ಹಿಂದೆ ಆದಾಯ ಇರಲಿಲ್ಲ. ಈಗ 50ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಭಕ್ತರಿಗೆ ದೊರಕಿಸುವ ಮೂಲಕ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು ಮಾತನಾಡಿ, ಶಿವನಸಮುದ್ರದ ರಂಗನಾಥ ದೇವಾಲಯ, ಆಧಿಶಕ್ತಿ ಮಾರಮ್ಮ ಹಾಗೂ ಪ್ರಸನ್ನ ಮೀನಾಕ್ಷಿ ದೇವಾಲಯಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ ಭಕ್ತರಿಗೆ ಸುರಕ್ಷತೆ ಒದಗಿಸಲಾಗುವುದು. ರಂಗನಾಥಸ್ವಾಮಿ ದೇವಾಲಯದಲ್ಲಿ ₨ 8.5 ಲಕ್ಷ ಅಂದಾಜುವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ತಿಳಿಸಿದ ಅವರು ಭಕ್ತರಿಗೆ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಸುರೇಶ್‌, ರಾಮಚಂದ್ರ, ಮಹಾದೇವು, ಮಾದೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರ್‌, ಪ್ರಭುಸ್ವಾಮಿ, ಮುಕ್ಬಲ್‌, ಅರ್ಚಕರಾದ ಶ್ರೀಧರ್‌, ಮಾಧವ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.