ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 20 ಮಂದಿ ಕೋವಿಡ್–19ನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇದುವರೆಗೆ ಗುಣಮುಖರಾದವರ ಸಂಖ್ಯೆ 24ಕ್ಕೆ ಏರಿದೆ.
ಹೊಸದಾಗಿ 12 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 114 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 24 ಮಂದಿ ಗುಣಮುಖರಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 90ಕ್ಕೆ ಇಳಿದಿದೆ.
ಸೋಮವಾರ ದೃಢಪಟ್ಟ 12 ಪ್ರಕರಣಗಳಲ್ಲಿ ಒಂಬತ್ತು ಪ್ರಕರಣಗಳು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವರದಿಯಾಗಿದೆ. ಎರಡು ಪ್ರಕರಣ ಕೊಳ್ಳೇಗಾಲದಲ್ಲಿ ಮತ್ತು ಒಂದು ಪ್ರಕರಣ ಚಾಮರಾಜನಗರ ತಾಲ್ಲೂಕಿನ ಅಮ್ಮನಪುರದಲ್ಲಿ ದಾಖಲಾಗಿದೆ.
ಆರು ಮಂದಿ ಕೇರಳ, ಬೆಂಗಳೂರು, ಮೈಸೂರಿಗೆ ಪ್ರಯಾಣ ಮಾಡಿ ಬಂದವರಾಗಿದ್ದಾರೆ. ಐವರು ಸೋಂಕಿತರ ಸಂಪರ್ಕಿತರು. ಒಬ್ಬರ ಸೋಂಕಿನ ಮೂಲವನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಸೋಂಕಿತರ ಪಟ್ಟಿಯಲ್ಲಿ ಆರು ವರ್ಷದ ಬಾಲಕ (ಗುಂಡ್ಲುಪೇಟೆ), 13 ವರ್ಷದ ಬಾಲಕಿ (ಗುಂಡ್ಲುಪೇಟೆ), 64 ವರ್ಷದ ಒಬ್ಬರು ಹಿರಿಯ ನಾಗರಿಕರಿದ್ದಾರೆ.
1,236 ಮಂದಿಯ ವರದಿ ಬಾಕಿ
ಸೋಮವಾರ 412 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 399 ಮಂದಿಯ ವರದಿ ನೆಗೆಟಿವ್ ಬಂದಿದೆ. ಸೋಮವಾರ 444 ಮಂದಿಯ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಟ್ಟಾರೆ 1,236 ಮಂದಿಯ ವರದಿಯನ್ನು ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ.
ಸೋಮವಾರ ಹೊಸದಾಗಿ ಸೋಂಕಿತರ 54 ಪ್ರಾಥಮಿಕ ಸಂಪರ್ಕಿತರು ಹಾಗೂ 48 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 941 ಸಂಪರ್ಕಿತರನ್ನು ಪತ್ತೆಹಚ್ಚಲಾಗಿದ್ದು, ಅವರನ್ನೆಲ್ಲ ಮನೆ ಕ್ವಾರಂಟೈನ್ನಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.