ADVERTISEMENT

‘ಗ್ರಾಮೀಣರ ಪ್ರೋತ್ಸಾಹದಿಂದ ನಾಟಕ ಕಲೆ ಜೀವಂತ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 10:20 IST
Last Updated 1 ಫೆಬ್ರುವರಿ 2018, 10:20 IST

ಚಾಮರಾಜನಗರ: ‘ಗ್ರಾಮೀಣ ಜನರ ಪ್ರೋತ್ಸಾಹದಿಂದಾಗಿ ನಾಟಕ ಕಲೆ ಇನ್ನೂ ಜೀವಂತವಾಗಿದೆ’ ಎಂದು ಜಾನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಹೇಳಿದರು. ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬುಧವಾರ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಮೈಸೂರಿನ ಅಭಿಯಂತರ ತಂಡದಿಂದ ನಡೆದ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ರಂಗ ತರಬೇತಿಯ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಟಕ ಕಲೆ ಪರಿಶಿಷ್ಟ ಪಂಗಡದ ಸ್ವತ್ತು. ತಲತಲಾಂತರದಿಂದ ಗ್ರಾಮೀಣ ಪ್ರದೇಶದಲ್ಲಿ ಕಾವ್ಯಗಳನ್ನು ಕಟ್ಟುವ ಮೂಲಕ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಅಧ್ಯಾತ್ಮ, ಭಕ್ತಿ ಹಾಗೂ ಮನರಂಜನೆಯನ್ನು ನೀಡುತ್ತಿದ್ದಾರೆ ಎಂದರು.

ನಾಟಕವೊಂದು ಅದ್ಭುತ ಜೀವಂತ ಕಲೆಯಾಗಿದ್ದು, ರಂಗದ ಮೇಲೆ ನಾಟಕದ ವ್ಯಾಕರಣವನ್ನು ಸ್ವಲ್ಪವೂ ವ್ಯತ್ಯಾಸವಾಗದಂತೆ ಎಚ್ಚರಿಕೆಯಿಂದ ಕಲಾವಿದ ಪ್ರದರ್ಶಿಸುತ್ತಾನೆ. ಇಂತಹ ಕಲೆಯ ತರಬೇತಿ ಶಿಬಿರವನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಿರುವುದು ಸಂತಸವಾಗಿದೆ ಎಂದು ತಿಳಿಸಿದರು.

ADVERTISEMENT

ಸಾಹಿತ್ಯ, ಸಂಗೀತ ಮತ್ತು ನಟನೆಯ ಸಮ್ಮಿಲನವೇ ನಾಟಕ. ಇದೊಂದು ಪರಂಪರಾಗತ ಪ್ರಭಾವಿ ಕಲೆಯಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಈ ಕಲೆಯನ್ನು ಕಲಾವಿದರು ಪ್ರೀತಿ, ಉತ್ಸಾಹದಿಂದ ಕೊನೆವರೆಗೂ ಉಳಿಸಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ ಶಿಬಿರಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಣೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಪ್ರಾಂಶು ಪಾಲರಾದ ಎ.ಜೆ. ಶಿವಕುಮಾರ್‌, ಕಲಾವಿದ ಸಿ.ಎಂ. ನರಸಿಂಹಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಣೇಶ ಅಮೀನಗಡ, ಉಪನ್ಯಾಸಕ ಭೈರಪ್ಪ ಕುಪ್ಪನ್ನಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.