ಯಳಂದೂರು: ‘ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿ ಸ್ವಾರ್ಥ ಸಾಧನೆಗಾಗಿ ಮಾತ್ರ ಉಳಿದುಕೊಂಡಿದೆ. ನಮ್ಮನ್ನಾಳುವ ಪುರುಷ ಪ್ರಧಾನ ರಾಜಕೀಯ ರಾಷ್ಟ್ರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ಧೀಕರಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಬೇಕು’ ಎಂದು ಗುಂಡ್ಲುಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ. ಮಲ್ಲೇಶ್ ಅಭಿಪ್ರಾಯ ಪಟ್ಟರು.
ಪಟ್ಟಣದ ಜೆಎಸ್ಎಸ್ ಮಹಿಳಾ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸುವ ಪ್ರಜ್ಞಾವಂತಿಕೆಯನ್ನು ಸ್ತ್ರೀಯರು ಬೆಳೆಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಸರ್ಕಾರಕ್ಕೆ ಜೋತುಬೀಳುವ ದಾಸ್ಯವನ್ನು ಬಿಡಬೇಕು. ಅನೇಕರು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಗಳಿಗೆ ತೆರಳಿ ಅಲ್ಲೇ ವ್ಯಾಸ್ತವ್ಯ ಹೂಡುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆ ಮಾಡಿಕೊಂಡು ದೇಶಾಭಿವೃದ್ಧಿಗೆ ದುಡಿಯುವ ಪ್ರವೃತ್ತಿ ಹೆಚ್ಚಾಗಬೇಕು’ ಎಂದರು.
ಉಪನ್ಯಾಸಕಿ ಜಿ.ಆರ್.ಶ್ರುತಿ ಮಾತನಾಡಿದರು. ಲಯನ್ಸ್ ಶಾಲೆಯ ಅಧ್ಯಕ್ಷ ಎಂ.ಬಿ. ಮಹದೇವಪ್ಪ, ಕಾಲೇಜಿನ ಪ್ರಾಂಶುಪಾಲೆ ಅಕ್ಕಮಹಾದೇವಮ್ಮ, ದೈಹಿಕ ಶಿಕ್ಷಕ ಶಿವಕುಮಾರಸ್ವಾಮಿ, ಉಪನ್ಯಾಸಕರಾದ ಶಂಕರ್, ನಾಲಗಾಂಬಿಕೆ, ಚೈತ್ರಾ, ಬಿಂದು, ಶೀಲಾ, ಕಾವ್ಯ, ಚಂದ್ರು, ಸಂತೋಷ್, ಉಮೇಶ್, ಪಂಕಜಾ, ಎಸ್. ಪ್ರಕಾಶ್, ನಾಗೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.