ಚಾಮರಾಜನಗರ: ಸತತ ಎರಡು ದಿನಗಳ ಕಾಲ 100ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದ ಗಡಿ ಜಿಲ್ಲೆಯಲ್ಲಿ ಶುಕ್ರವಾರ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅದೇ ರೀತಿ ಗುಣಮುಖರಾದವರ ಸಂಖ್ಯೆಯೂ ಕುಸಿದಿದೆ. ಹೊಸ ಸಾವಿನ ಪ್ರಕರಣಗಳು ವರದಿಯಾಗಿಲ್ಲ.
59 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 25 ಮಂದಿ ಸೋಂಕು ಮುಕ್ತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈ ವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 1,964ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 1,428ಕ್ಕೆ ಹಿಗ್ಗಿದೆ. 503 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 203 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. ಶುಕ್ರವಾರ ಒಂದೇ ದಿನ 22 ಮಂದಿ ಹೋಂ ಐಸೊಲೇಷನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. 36 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದುವರೆಗೆ 33 ಸೋಂಕಿತರು ಮೃತಪಟ್ಟಿದ್ದಾರೆ. ಕೋವಿಡ್ ಕಾರಣದಿಂದ 21 ಮಂದಿ ಹಾಗೂ ಬೇರೆ ಕಾರಣಗಳಿಂದ 12 ಮಂದಿ ಸಾವಿಗೀಡಾಗಿದ್ದಾರೆ.
ಶುಕ್ರವಾರ, 827 ಜನರ ಗಂಟಲು ದ್ರವದ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಆರ್ಟಿಪಿಸಿಆರ್ ಪ್ರಯೋಗಾಲಯದಲ್ಲಿ 482, ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ 334 ಹಾಗೂ ಟ್ರು ನಾಟ್ ವಿಧಾನದಲ್ಲಿ 11 ಪರೀಕ್ಷೆಗಳನ್ನು ನಡೆಸಲಾಗಿದೆ. 770 ವರದಿಗಳು ನೆಗೆಟಿವ್ ಬಂದಿವೆ. 57 ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ದೃಢಪಟ್ಟರೆ, ಇನ್ನೆರಡು ಮೈಸೂರಿನಲ್ಲಿ ಖಚಿತವಾಗಿದೆ.
59 ಸೋಂಕಿತರ ಪೈಕಿ, ಚಾಮರಾಜನಗರ ತಾಲ್ಲೂಕಿನ 34, ಗುಂಡ್ಲುಪೇಟೆಯ 16, ಕೊಳ್ಳೇಗಾಲದ ಆರು ಮತ್ತು ಯಳಂದೂರು ತಾಲ್ಲೂಕಿನ ಮೂವರು ಇದ್ದಾರೆ.
ಗುಣಮುಖರಾದ 25 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ ಒಂಬತ್ತು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲ್ಲೂಕಿನ ತಲಾ ಏಳು, ಯಳಂದೂರು ಹಾಗೂ ಹನೂರು ತಾಲ್ಲೂಕುಗಳ ತಲಾ ಒಬ್ಬರು ಇದ್ದಾರೆ.
ಮೊದಲ ಸ್ಥಾನದಲ್ಲಿ ಚಾಮರಾಜನಗರ:ಸಕ್ರಿಯವಾಗಿರುವ 503 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 186, ಗುಂಡ್ಲುಪೇಟೆಯ 116, ಕೊಳ್ಳೇಗಾಲದ 94, ಹನೂರು ತಾಲ್ಲೂಕಿನ 57 ಮತ್ತು ಯಳಂದೂರು ತಾಲ್ಲೂಕಿನ 46 ಪ್ರಕರಣಗಳು ಸೇರಿವೆ. ಹೊರ ಜಿಲ್ಲೆಯ ನಾಲ್ವರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.