ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರದ ಸಮೂಹ ದೇವಾಲಯಕ್ಕೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಭಾನುವಾರ ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷವೂ ಅವರು ಇಲ್ಲಿನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಡಿ.18ರಂದು ಚಿಕಿತ್ಸೆಗಾಗಿ ಶಿವರಾಜ್ಕುಮಾರ್ ವಿದೇಶಕ್ಕೆ ತೆರಳುತ್ತಿದ್ದು ಅದಕ್ಕೂ ಮುನ್ನ ಪೂಜೆ ನೆರವೇರಿಸಿದ್ದಾರೆ.
ಮೊದಲಿಗೆ ವೆಸ್ಲಿ ಸೇತುವೆಯ ಕೆಳಗೆ ಹರಿಯುವ ಕಾವೇರಿ ನದಿಯ ಬಳಿ ತೆರಳಿ ಕಾವೇರಿ ನೀರನ್ನು ದಂಪತಿ ಪ್ರೋಕ್ಷಣೆ ಮಾಡಿಕೊಂಡು ಬಾಗಿನ ಅರ್ಪಿಸಿದರು. ಬಳಿಕ ಪಕ್ಕದಲ್ಲಿರುವ ಗಣಪತಿ ದೇವಸ್ಥಾನ, ಮಧ್ಯರಂಗನಾಥಸ್ವಾಮಿ ದೇವಸ್ಥಾನ, ಮೀನಾಕ್ಷಿ ಸಮೇತ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ಚಕ್ರ ದರ್ಶನ ಮಾಡಿ ನಂತರ ಶ್ರೀ ಆದಿಶಕ್ತಿ ಮಾರಮ್ಮ ದೇವಸ್ಥಾನ ತೆರಳಿ ಮಾರಮ್ಮನಿಗೆ ಸೀರೆ ಕಾಣಿಕೆ ನೀಡಿದರು.
ಪ್ರತಿ ವರ್ಷವೂ ಶಿವರಾಜ್ ಕುಮಾರ್ ಹಾಗೂ ಅವರ ಕುಟುಂಬದವರು ಮಾರಮ್ಮ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ 10 ರಿಂದ 20 ಹೆಚ್ಚು ಕುರಿಗಳನ್ನು ಹರಕೆ ತೀರಿಸಿ ಅಭಿಮಾನಿಗಳಿಗೆ ಬಾಡೂಟ ಹಾಕಿಸುತ್ತಿದ್ದರು. ಆದರೆ ಈ ವರ್ಷ ಅನಾರೋಗ್ಯದ ಕಾರಣ ಪೂಜೆ ಮಾಡಿ ತಕ್ಷಣ ತೆರಳಿದರು. ಶಿವನಸಮುದ್ರ ದೇವಾಲಯಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ದಂಪತಿಯನ್ನು ಸಮೂಹ ದೇವಾಲಯದ ಆಡಳಿತಾಧಿಕಾರಿ ಬಿ.ಆರ್.ಮಹೇಶ್ ಮಾರ್ಗದರ್ಶನದಲ್ಲಿ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಅವರು ಹಾರ ಹಾಕುವ ಮೂಲಕ ಬರಮಾಡಿ ಕೊಂಡರು.
ಬಳಿಕ ಶಿವರಾಜ್ ಕುಮಾರ್ ಅವರು ಅಭಿಮಾನಿಗಳ ಜೊತೆ ಮಾತನಾಡಿದ್ದರು. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಲಾಡ್ಜ್ ಪ್ರಭು, ಉಮೇಶ್, ಹೊನ್ನೇಗೌಡ, ಮಲ್ಲ, ನಾರಾಯಣ್, ಸತ್ತೇಗಾಲ ದಿವ್ಯಕುಮಾರ್ ಹಾಗೂ ಅಭಿಮಾನಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.