ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮೂರು ತಿಂಗಳ ಬಳಿಕ ಭಾನುವಾರ ಎಲ್ಲ ರೀತಿಯ ಸೇವೆ, ಉತ್ಸವಗಳು ಆರಂಭವಾದವು.
ಕೋವಿಡ್ ಕಾರಣಕ್ಕೆ ಏಪ್ರಿಲ್ 22ರಿಂದ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಜುಲೈ 6ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ದಾಸೋಹ, ಸೇವೆಗಳು ಆರಂಭವಾಗಿರಲಿಲ್ಲ. ಶುಕ್ರವಾರದಿಂದ ದಾಸೋಹ ಆರಂಭವಾಗಿದ್ದು, ಎಲ್ಲ ರೀತಿಯ ಸೇವೆಗಳಿಗೆ ಭಾನುವಾರದಿಂದ ಅವಕಾಶ ಕಲ್ಪಿಸಲಾಗಿದೆ.
ಮೂರು ತಿಂಗಳ ಬಳಿಕ ಭಕ್ತರು, ಚಿನ್ನದ ರಥ, ಬಸವ ವಾಹನ, ಹುಲಿವಾಹನ, ರುದ್ರಾಕ್ಷಿ ವಾಹನ ಸೇವೆ ಸೇರಿದಂತೆ ಇತರೆ ಸೇವೆಗಳನ್ನು ಮಾದಪ್ಪನಿಗೆ ಸಲ್ಲಿಸಿ ಪುಳಕಿತರಾದರು.
ಭಾನುವಾರ 54 ಮಂದಿ ಚಿನ್ನದ ತೇರಿನ ಉತ್ಸವ ಮಾಡಿಸಿದ್ದು, ₹1,62,054 ಸಂಗ್ರಹವಾಗಿದೆ. 38 ಮಂದಿ ಬಸವ ವಾಹನ ಉತ್ಸವ ಸೇವೆ ಮಾಡಿಸಿದ್ದಾರೆ. ಇದರಲ್ಲಿ ₹11,400 ಸಂಗ್ರಹವಾಗಿದೆ. ₹74,700 ಪಾವತಿಸಿ 249 ಭಕ್ತರು ಹುಲಿ ವಾಹನ ಸೇವೆ ಸಲ್ಲಿಸಿದ್ದಾರೆ. ಏಳು ಮಂದಿ ರುದ್ರಾಕ್ಷಿ ವಾಹನ ಉತ್ಸವ ಮಾಡಿಸಿದ್ದು, ₹2,100 ಸಂಗ್ರಹವಾಗಿದೆ. ಈ ನಾಲ್ಕೂ ಉತ್ಸವಗಳಿಂದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದೇ ದಿನ ₹2,50,254 ಆದಾಯ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.