ADVERTISEMENT

ಚಾಮರಾಜನಗರ: ಕರ್ನಾಟಕ ಬಂದ್‌ಗೆ ಎಪಿಎಂಸಿ ಬೆಂಬಲ

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಕಾನೂನು ಹೋರಾಟ: ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 16:40 IST
Last Updated 26 ಸೆಪ್ಟೆಂಬರ್ 2020, 16:40 IST
ನಾಗೇಂದ್ರ
ನಾಗೇಂದ್ರ   

ಚಾಮರಾಜನಗರ: ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಎಪಿಎಂಸಿಗಳು ಬೆಂಬಲ ಸೂಚಿಸಿವೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಡಿ.ನಾಗೇಂದ್ರ ಅವರು, ‘ಎಪಿಎಂಸಿ ತಿದ್ದುಪಡಿ ಕಾಯ್ದೆಯು ಎಪಿಎಂಸಿಗೆ ಮಾರಕವಾಗಿದ್ದು, ಮಾರುಕಟ್ಟೆ ವ್ಯವಸ್ಥೆಯನ್ನು ನಾಶ ಮಾಡುವ ಮೊದಲ ಹಂತವಾಗಿದೆ. ಇತ್ತೀಚೆಗೆ ದಾವಣೆಗೆರೆಯಲ್ಲಿ ವಿವಿಧ ಎಪಿಎಂಸಿ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಸಭೆ ನಡೆಸಿದ್ದು, ಕಾಯ್ದೆಯನ್ನು ವಿರೋಧಿಸಲು ಹಾಗೂ ಇದರ ವಿರುದ್ಧ ಕಾನೂನು ಹೋರಾಟ ಮಾಡಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ದೊಡ್ಡ ದೊಡ್ಡ ಕಂಪನಿಗಳು, ಬಂಡವಾಳಶಾಹಿಗಳನ್ನು ಗುರಿಯಾಗಿಸಿಕೊಂಡು ಈ ಕಾಯ್ದೆಯನ್ನು ರೂಪಿಸಲಾಗಿದೆ. ಖಾಸಗಿ ವರ್ತಕರು ಮಾರುಕಟ್ಟೆಯ ಪ್ರಾಂಗಣದ ಹೊರಗೆ ಯಾವುದೇ ಟೆಂಡರ್‌, ಹರಾಜುಗಳಿಲ್ಲದೇ ಅವರ ಇಷ್ಟ ಬಂದ ಹಾಗೆ ರೈತರಿಂದ ಖರೀದಿಸಲು ಅವಕಾಶ ನೀಡಲಾಗಿದೆ. ಇವರ ಮೇಲೆ ದರ ನಿಗದಿ, ತೂಕ ವ್ಯತ್ಯಾಸ ಇನ್ನಿತರ ಯಾವುದೇ ವಿಷಯಗಳಲ್ಲಿ ರೈತರಿಗೆ ಆಗುವ ಅನ್ಯಾಯ, ಮೋಸಗಳ ಮೇಲೆ ಮೇಲ್ವಿಚಾರಣೆ ನಡೆಸುವ ಅಧಿಕಾರ ಎಪಿಎಂಸಿಗಳಿಗೆ ಇಲ್ಲದಂತೆ ಮಾಡಲಾಗಿದೆ’ ಎಂದು ಅವರು ದೂರಿದರು.

ADVERTISEMENT

‘ಪ್ರಸ್ತುತ ಮಾರುಕಟ್ಟೆ ಶುಲ್ಕ ಶೆ 1.5ರಷ್ಟಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಶೇ 0.35ಕ್ಕೆ ಇಳಿಸಲಾಗಿದೆ. ಈ ಪೈಕಿ ಶೇ 0.14ರಷ್ಟನ್ನು ಸಮಿತಿಯ ನಿರ್ವಹಣೆಗೆ ಉಪಯೋಗಿಸಲು ಸೂಚಿಸಲಾಗಿದೆ. ಆದರೆ, ಶೇ 0.14ರಷ್ಟು ಹಣದಲ್ಲಿ ನಿರ್ವಹಣೆ ಮಾಡಲು ಸಾಧ್ಯವೇ ಇಲ್ಲ. ಇದರಿಂದ ಕಾಲ ಕ್ರಮೇಣ ಎಪಿಎಂಸಿಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದರು.

‘ಸೋಮವಾರ ನಡೆಯಲಿರುವ ಕರ್ನಾಟಕ ಬಂದ್‌ ಅನ್ನು ನಾವು ಬೆಂಬಲಿಸುತ್ತೇವೆ. ಇಡೀ ದಿನ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲಿದ್ದೇವೆ’ ಎಂದು ಅವರು ಹೇಳಿದರು.

ಎಪಿಎಂಸಿ ಸದಸ್ಯ ಬಿ.ಕೆ.ರವಿಕುಮಾರ್ ಅವರು ಮಾತನಾಡಿ, ‘ ಬಿಜೆಪಿ ಸರ್ಕಾರವು ಎಪಿಎಂಸಿಗಳೊಂದಿಗೆ, ಅದರ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ಮಾಡದೇ, ಸದನದಲ್ಲೂ ಸರಿಯಾಗಿ ಚರ್ಚಿಸದೇ ಬಲವಂತವಾಗಿ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳಿಗೆ ಹಾಗೂ ರೈತರಿಗೆ ತೊಂದರೆಯಾಗಲಿದೆ. ಲಾಭದಾಯಕವಾಗಿ ನಡೆಯುತ್ತಿರುವ ಎಪಿಎಂಸಿಗಳು ನಷ್ಟ ಅನುಭವಿಸಲಿವೆ’ ಎಂದರು.

ಗುಂಡ್ಲುಪೇಟೆ ಎಪಿಎಂಸಿ ಅಧ್ಯಕ್ಷ ಶಿವಮಾದಪ್ಪ, ಉಪಾಧ್ಯಕ್ಷೆ ನಾಗಮ್ಮ, ಚಾಮರಾಜನಗರ ಎಪಿಎಂಸಿ ಸದಸ್ಯ ಶಂಕರಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.