ADVERTISEMENT

ಲಂಚ ಪಡೆದ ದೃಶ್ಯ ವೈರಲ್‌: ಎಎಸ್‌ಐ ಅಮಾನತು

ಸಂಚಾರಿ ಠಾಣೆಯ ಮತ್ತೊಬ್ಬ ಎಎಸ್‌ಐ ನಾಗಮ್ಮ ಡಿಸಿಆರ್‌ಬಿಗೆ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 9:39 IST
Last Updated 23 ಸೆಪ್ಟೆಂಬರ್ 2019, 9:39 IST

ಚಾಮರಾಜನಗರ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯಿಂದ ಲಂಚ ಪಡೆದ ಆರೋಪದಲ್ಲಿ ನಗರದ ಸಂಚಾರ ಠಾಣೆಯ ಎಎಸ್‌ಐ ನಂಜಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ನಂಜಪ್ಪ ಅವರು ಲಂಚ ಪಡೆಯುತ್ತಿದ್ದ ವಿಡಿಯೊ ತುಣುಕು ಗುರುವಾರ ಸಾಮಾಜಿಕ ಜಾಲ‌ತಾಣ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅಮಾನತು ಆದೇಶ ಹೊರಬಿದ್ದಿದೆ.

‘ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯಿಂದ ಹಣ ವಸೂಲಿ ಮಾಡಿ, ರಶೀದಿ ಕೊಡದೆ ಕರ್ತವ್ಯ ಲೋಪ ಎಸಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಇಲಾಖೆಯ ಘನತೆಗೆ ಧಕ್ಕೆ ತರುವಂತೆ ವರ್ತಿಸಿರುವುದರ ಜೊತೆಗೆ ಅಶಿಸ್ತು ಪ್ರದರ್ಶಿಸಿರುವುದರಿಂದ ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಮತ್ತೊಬ್ಬ ಎಎಸ್‌ಐ ಬೇರೆ ಕಡೆಗೆ ನಿಯೋಜನೆ: ಈ ಮಧ್ಯೆ, ಸಂಚಾರಿ ಠಾಣೆಯ ಮತ್ತೊಬ್ಬ ಎಎಸ್‌ಐ ನಾಗಮ್ಮ ಅವರನ್ನು ಒಒಡಿ ಆಧಾರದಲ್ಲಿ ಎಸ್‌ಪಿ ಕಚೇರಿಯಲ್ಲಿರುವ ಜಿಲ್ಲಾ ಅಪರಾಧ ಪ್ರಕರಣಗ ದಾಖಲೆ ದಳಕ್ಕೆ (ಡಿಸಿಆರ್‌ಬಿ) ನಿಯೋಜಿಸಲಾಗಿದೆ.

ಕೆಲವು ದಿನಗಳ ಹಿಂದೆ ನಾಗಮ್ಮ ನೇತೃತ್ವದ ಪೊಲೀಸರ ತಂಡ, ನಗರದಲ್ಲಿ ವಾಹನಗಳನ್ನು ತಪಾಸಣೆ ನಡೆಯುತ್ತಿದ್ದಾಗ ಲಂಚಪಡೆಯುತ್ತಿರುವ ದೃಶ್ಯ ವೈರಲ್‌ ವಾಗಿತ್ತು. ಸ್ಥಳೀಯ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಈಗ ನಾಗಮ್ಮ ಅವರ ಜಾಗಕ್ಕೆ ಅರಗ –ಮಾಂಬಳ್ಳಿ ಠಾಣೆಯ ಪಿಎಸ್‌ಐ ಪುಷ್ಪಲತಾ ಅವರನ್ನು ನಿಯೋಜಿಸಲಾಗಿದೆ.

ವ್ಯಾಪಕ ಚರ್ಚೆ: ಈ ಮಧ್ಯೆ, ಆರೋಪ ಕೇಳಿ ಬಂದ ಕೆಲವು ದಿನಗಳ ನಂತರ ನಾಗಮ್ಮ ಅವರನ್ನು ಬೇರೆ ಕಡೆ ನಿಯೋಜನೆ ಮಾಡಿ, ವಿಡಿಯೊ ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ನಂಜಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿರುವ ಕ್ರಮವು ಪೊಲೀಸ್‌ ಇಲಾಖೆಯಲ್ಲಿ ಆಂತರಿಕವಾಗಿ ಚರ್ಚೆ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.