ADVERTISEMENT

ಬಾಲಕಿ ಅಪಹರಣ ಯತ್ನ; ಕೇರಳದ ನಾಲ್ವರು ವಶಕ್ಕೆ

ಮಧುವನಹಳ್ಳಿ ಗ್ರಾಮಸ್ಥರಿಂದ ಬಾಲಕಿ ರಕ್ಷಣೆ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 19:50 IST
Last Updated 2 ಜನವರಿ 2024, 19:50 IST
<div class="paragraphs"><p>ಕೇರಳದ ನಾಲ್ವರು ವಶಕ್ಕೆ</p></div>

ಕೇರಳದ ನಾಲ್ವರು ವಶಕ್ಕೆ

   

ಕೊಳ್ಳೇಗಾಲ: ನಗರದಲ್ಲಿ ಮನೆ ಮನೆಗೆ ತೆರಳಿ ಕೂದಲು ಸಂಗ್ರಹಿಸುತ್ತಿದ್ದ 16 ವರ್ಷದ ಬಾಲಕಿಯನ್ನು ಮಂಗಳವಾರ ಸಂಜೆ ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಕೇರಳದ ನಾಲ್ವರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಲ್ಲಪ್ಪುರಂ ಜಿಲ್ಲೆಯ ಯಡಪಾಡ್ ಗ್ರಾಮದ ಇಸ್ಮಾಯಿಲ್, ಅಯೂಬ್, ಆಲಿ, ಉಮರ್ ಪೊಲೀಸ್ ವಶದಲ್ಲಿರುವವರು.

ADVERTISEMENT

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಹಾಗೂ ಕುಟುಂಬದ ಸದಸ್ಯರು ಕೂದಲು ಸಂಗ್ರಹ ಮತ್ತು ಮಾರಾಟಕ್ಕಾಗಿ ನಗರಕ್ಕೆ ಬಂದಿದ್ದರು.

ಮಂಗಳವಾರ ಸಂಜೆ ನಗರದ ವಾಸವಿ ವಿದ್ಯಾ ಕೇಂದ್ರದ ಮುಂಭಾಗದಲ್ಲಿ ಬಾಲಕಿ ಕೂದಲು ಸಂಗ್ರಹಿಸುತ್ತಿದ್ದಳು. ಈ ವೇಳೆ ಕುಡಿತ ಮತ್ತಿನಲ್ಲಿದ್ದ ನಾಲ್ವರು, ಬಾಲಕಿಗೆ ಚಾಕೊಲೆಟ್ ನೀಡಿ ‘ನಿನಗೆ ಊಟ ಕೊಡಿಸುತ್ತೇವೆ’ ಎಂದು ಹೇಳಿ ಕಾರಿನಲ್ಲಿ ಕೂರಿಸಿಕೊಂಡು ತಾಲ್ಲೂಕಿನ ಮಧುವನ ಹಳ್ಳಿ ಗ್ರಾಮದಲ್ಲಿ ಹೋಗುತ್ತಿದ್ದರು.

‘ಈ ಸಂದರ್ಭದಲ್ಲಿ ಕಾರು ಬೈಕ್ ಗೆ ಡಿಕ್ಕಿ ಹೊಡೆಯಿತು. ಗ್ರಾಮಸ್ಥರು ಕಾರನ್ನು ತಡೆದರು. ನಂತರ ಗ್ರಾಮಸ್ಥರು ಕಾರಿನಲ್ಲಿದ್ದವರನ್ನು ನೋಡಿದಾಗ ನಾಲ್ವರು ನಶೆಯಲ್ಲಿದ್ದರು. ಬಾಲಕಿಯ ಬಾಯಿಯನ್ನು ಮುಚ್ಚಿದ್ದರು. ಗ್ರಾಮಸ್ಥರನ್ನು ಕಂಡ ಬಾಲಕಿ ‘ನನ್ನನ್ನು ಅಪಹರಣ ಮಾಡಿದ್ದಾರೆ’ ಎಂದು ಕಿರುಚಿಕೊಂಡು ಅಳಲು ಆರಂಭಿಸಿದಳು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಗ್ರಾಮಸ್ಥರು ನಾಲ್ವರಿಗೆ ಥಳಿಸಿ ಗ್ರಾಮದ ಅಂಬೇಡ್ಕರ್ ಭವನದ ಮುಂದೆ ಕೊರಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

ಯಾವ ಉದ್ದೇಶಕ್ಕೆ ಆರೋಪಿಗಳು ಬಾಲಕಿಯನ್ನು ಅಪಹರಿಸಿದ್ದಾರೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.