ADVERTISEMENT

ಬಂಡೀಪುರ: ಕಾಡಂಚಿನ ಸರ್ಕಾರಿ ಭೂಮಿ ಇನ್ನು ಮೀಸಲು ಅರಣ್ಯ

ಅರಣ್ಯ ಹಕ್ಕು ಕಾಯ್ದೆ 1963ರ ಸೆಕ್ಷನ್ 4ರ ಅಡಿ ಆದೇಶ, ಆಕ್ಷೇಪಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:45 IST
Last Updated 25 ಆಗಸ್ಟ್ 2019, 19:45 IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಬರುವ 18 ಹಳ್ಳಿಗಳ ಕಂದಾಯ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಮತ್ತು ತೆರಕಣಾಂಬಿ ಹೋಬಳಿ ವ್ಯಾಪ್ತಿಯಲ್ಲಿ ಈ ಗ್ರಾಮಗಳಿದ್ದು, ಕರ್ನಾಟಕ ಅರಣ್ಯ ಹಕ್ಕು ಕಾಯ್ದೆ 1963ರ ಸೆಕ್ಷನ್‌ 4ರ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ.

ಯಾವುದೆಲ್ಲ ಗ್ರಾಮ:ಹಂಗಳ ಹೋಬಳಿಯ ಮಗುವಿನಹಳ್ಳಿ, ಮೇಲುಕಾಮನಹಳ್ಳಿ, ಸಿದ್ಧಾಪುರ, ಶಿವಪುರ, ಹುಂಡಿಪುರ, ಬೆಳಕವಾಡಿ, ಶೆಟ್ಟಹಳ್ಳಿ, ಯಲಚೆಟ್ಟಿ, ಲೊಕ್ಕೆರೆ, ಜಕ್ಕಳ್ಳಿ, ಬಾಚಹಳ್ಳಿ, ಮಂಗಲ, ಕೆಬ್ಬೇಪುರ, ಕಣಿಯನಪುರ ಮತ್ತು ತೆರಕಣಾಂಬಿ ಹೋಬಳಿಯ ಯರಿಯೂರು, ಹೆಗ್ಗವಾಡಿ, ಕುಂದಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯ ಸರ್ಕಾರಿ ಸರ್ವೆ ನಂಬರ್‌ಗಳ ಭೂಮಿ ಅರಣ್ಯದ ಗಡಿಭಾಗಕ್ಕೆ ಹೊಂದಿಕೊಂಡಂತಿರುವುದರಿಂದ ಸರ್ಕಾರ ಮೀಸಲು ಅರಣ್ಯ ಎಂದು ಘೋಷಿಸಿದೆ.

ADVERTISEMENT

ಈ ಆದೇಶದಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಹುಲಿ ಹಾಗೂ ಇತರ ವನ್ಯಪ್ರಾಣಿಗಳ ಸಂರಕ್ಷಣೆಗಾಗಿ ಕಾಡನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ವನ್ಯಜೀವಿ ತಜ್ಞರು, ಪರಿಸರವಾದಿಗಳು ಆಗ್ರಹಿಸುತ್ತಲೇ ಬಂದಿದ್ದಾರೆ.

ಆಕ್ಷೇಪಣೆಗೆ ಅವಕಾಶ

ಮೀಸಲು ಅರಣ್ಯ ಎಂದು ಗುರುತಿಸಲಾಗಿರುವ ಸರ್ವೆ ನಂಬರ್‌ಗಳ ಹಕ್ಕು ಬಾಧ್ಯತೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಗ್ರಾಮಸ್ಥರು ಸಲ್ಲಿಸಬಹುದಾಗಿದೆ. ಇದಕ್ಕಾಗಿ 90 ದಿನಗಳ ಕಾಲವಕಾಶ ನೀಡಲಾಗಿದೆ.

ಅಗತ್ಯ ದಾಖಲಾತಿ ಮತ್ತು ಲಿಖಿತ ಸಮಜಾಯಿಷಿಯೊಂದಿಗೆ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳ ಕಚೇರಿ ಅಥವಾ ಬಂಡೀಪುರ ಮತ್ತು ಗುಂಡ್ಲುಪೇಟೆಯ ಉಪವಿಭಾಗ ಕಚೇರಿ ಅಥವಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.