ADVERTISEMENT

ಗುಂಡ್ಲುಪೇಟೆ | ಸಫಾರಿ ಆರಂಭವಾದರೆ ಮುತ್ತಿಗೆ ಎಚ್ಚರಿಕೆ: ಕರ್ನಾಟಕ ರಾಜ್ಯ ರೈತ ಸಂಘ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:04 IST
Last Updated 24 ನವೆಂಬರ್ 2025, 2:04 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಗುಂಡ್ಲುಪೇಟೆ: ‘ಬಂಡೀಪುರ ಸಫಾರಿ ಪುನರ್ ಆರಂಭಿಸಿದರೆ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಸಫಾರಿ ಕೇಂದ್ರಕ್ಕೆ ಮುತ್ತಿಗೆ ಹಾಕುವುದಾಗಿ’ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ‘ಅರಣ್ಯ ಸಚಿವ ಈಶ್ವರ್ ಖಂಡ್ರೆ ತಾತ್ಕಾಲಿಕವಾಗಿ ನಾಗರಹೊಳೆ ಮತ್ತು ಬಂಡೀಪುರ ಸಫಾರಿ ಬಂದ್ ಮಾಡಿದ ಆದೇಶ ಹೊರಡಿಸಿ ಇಪ್ಪತ್ತು ದಿನ ಕಳೆದಿದೆ. ಅಂದಿನಿಂದ ಈವರೆಗೂ ಕಾಡುಪ್ರಾಣಿಗಳ ಉಪಟಳ ಶೇಕಡವಾರು ಕಡಿಮೆಯಾಗಿದ್ದು, ಕಾಡಂಚಿನ ಗ್ರಾಮಗಳ ರೈತರು ನಿಟ್ಟುಸಿರು ಬಿಡುವಂತಾಗಿದೆ. ಈ ಮಧ್ಯೆ ಸಫಾರಿ ಪುನರ್ ಆರಂಭ ಮಾಡಬೇಕು ಎಂಬ ಕೂಗು ಎದ್ದಿರುವುದು ದುರದೃಷ್ಟಕರ’ ಎಂದು ತಿಳಿಸಿದರು.

ADVERTISEMENT

‘ಸಫಾರಿಯಿಂದ ಸ್ಥಳೀಯ ರೈತರಿಗೆ ಯಾವುದೇ ಅನುಕೂಲವಿಲ್ಲ. ಹಣವಂತರು ಐಷಾರಾಮಿ ವ್ಯಕ್ತಿಗಳು ಮೋಜು ಮಸ್ತಿ ಮಾಡಲು ರೇಸಾರ್ಟ್, ಹೋಂ ಸ್ಟೇಗಳಿಗೆ ಬಂದು ಹೋಗುತ್ತಿದ್ದಾರೆ. ಬಂಡೀಪುರ ಸಫಾರಿಯಲ್ಲಿ 2022-23ನೇ ಸಾಲಿನಲ್ಲಿ 1 ಲಕ್ಷ 23 ಸಾವಿರಕ್ಕೂ ಅಧಿಕ ಮಂದಿ, 2023-24ರಲ್ಲಿ 1 ಲಕ್ಷ 80 ಸಾವಿರಕ್ಕೂ ಹೆಚ್ಚು ಜನರು ಹಾಗೂ 2024-25ನೇ ಸಾಲಿನಲ್ಲಿ 1 ಲಕ್ಷ 89 ಸಾವಿರದ 675 ಮಂದಿ ಸಫಾರಿಯಲ್ಲಿ ಪ್ರವಾಸ ಮಾಡಿದ್ದಾರೆ. ಇಷ್ಟು ಮಂದಿ ವಾರ್ಷಿಕವಾಗಿ ಅರಣ್ಯದೊಳಗೆ ಹೋದರೆ ಅಲ್ಲಿನ ಪ್ರಾಣಿಗಳು ಕಾಡಿನಲ್ಲಿ ಉಳಿಯುವುದೇ ಎಂಬುದನ್ನು ಸರ್ಕಾರ ಹಾಗೂ ಅರಣ್ಯಾಧಿಕಾರಿಗಳು ಅಧಿಕಾರಿಗಳು ಯೋಚನೆ ಮಾಡಬೇಕು’ ಎಂದು ಹೇಳಿದರು.

‘ರೆಸಾರ್ಟ್ ಮಾಲೀಕರು ಒತ್ತಡಕ್ಕೆ ಮಣಿದು ಸ್ಥಳೀಯ ರೈತರು, ಗ್ರಾಮಸ್ಥರು ಹಾಗೂ ಕಾರ್ಮಿಕರನ್ನು ಎತ್ತಿ ಕಟ್ಟಿ ಸಫಾರಿ ಪುನರ್ ಆರಂಭಕ್ಕೆ ಅರಣ್ಯಾಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವಿದೆ. ಕನಿಷ್ಠ ಒಂದು ವರ್ಷ ಸಫಾರಿ ಬಂದ್ ಮಾಡಬೇಕು. ಹೋಟೆಲ್, ಹೋಂ ಸ್ಟೇ, ರೆಸಾರ್ಟ್, ಕಾರ್ಮಿಕರು ಸೇರಿದಂತೆ ಕೇವಲ 300 ಜನರಿಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ತಾಲ್ಲೂಕಿನ ಲಕ್ಷಾಂತರ ಮಂದಿ ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ. ಸ್ಥಳೀಯರು ಹಾಗೂ ಕಾರ್ಮಿಕರಿಗೆ ಅರಣ್ಯ ಇಲಾಖೆ ಮತ್ತು ಸರ್ಕಾರ ಬದಲಿ ಉದ್ಯೋಗ ನೀಡಲಿ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹಂಗಳ ದಿಲೀಪ್ ಮಾತನಾಡಿ, ‘ಸಫಾರಿಯನ್ನು ಸಂಪೂರ್ಣ ನಿಲ್ಲಿಸಬೇಕು. ರೆಸಾರ್ಟ್ ಮಾಲೀಕರ ಒತ್ತಡದಿಂದ ಪುನರ್ ಆರಂಭಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಸಫಾರಿ ಸಂಬಂಧ ಡಿ.1ರಂದು ಗುಂಡ್ಲುಪೇಟೆ ತಾಲೂಕು ಕಚೇರಿಯಿಂದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ರೈತ ಮುಖಂಡ ಮಲ್ಲಯ್ಯನಪುರ ಶಿವಣ್ಣ, ನಾಗರಾಜು ಇದ್ದರು.

‘ಅಧಿಕಾರಿಗಳು ಲೆಕ್ಕ ಕೊಡಿ’

ವರ್ಷಕ್ಕೆ ಸಫಾರಿಯಿಂದ ₹22 ಕೋಟಿಗೂ ಅಧಿಕ ಹಣ ಬರುತ್ತಿದೆ. ಈ ಹಣ ಎಲ್ಲಿ ಹೋಗುತ್ತದೆ ಎಂಬುದರ ಲೆಕ್ಕವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮುಂದಿಡಬೇಕು. ಹಸಿರು ಸುಂಕ ಹಾಗೂ ಗೋಪಾಲಸ್ವಾಮಿ ಬೆಟ್ಟದ ಪಾರ್ಕಿಂಗ್ ಶುಲ್ಕದ ಲೆಕ್ಕ ಪರಿಶೋಧನೆ ಮಂಡಿಸಬೇಕು ಎಂದು ಶಿವಪುರ ಮಹದೇವಪ್ಪ ಹೇಳಿದರು.

ಕಾಡು ಪ್ರಾಣಿಗಳ ಹಾವಳಿ, ಜಾನುವಾರು ಸಾವು ಸೇರಿದಂತೆ ಇನ್ನಿತರ ಪರಿಹಾರ ನೀಡಲು ಇಲಾಖೆಯು ಸರ್ಕಾರದಿಂದ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಕೋಟ್ಯಂತರ ಆದಾಯವಿದ್ದರು ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಂಗುದಾಣ, ಶೆಡ್, ಕುಡಿಯುವ ನೀರಿನ ವ್ಯವಸ್ಥೆ ಒದಗಿಸದಿರುವುದು ನಾಚಿಗೇಡಿನ ಸಂಗತಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.