
ಗುಂಡ್ಲುಪೇಟೆ: ಬಂಡೀಪುರ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವಂತೆ ಒತ್ತಾಯಿಸಿ ಹೋಟೆಲ್ ಮತ್ತು ರೆಸಾರ್ಟ್ ಸಿಬ್ಬಂದಿ ಹಾಗೂ ಸಣ್ಣ ವ್ಯಾಪಾರಸ್ಥರು ಶಾಸಕ ಎಚ್.ಎಂ.ಗಣೇಶಪ್ರಸಾದ್ ಮನವಿ ಸಲ್ಲಿಸಿದರು.
‘ಬಂಡೀಪುರ ಎಲ್ಲರಿಗೂ ಚಿರಪರಿಚಿತ. ದೇಶ ಹಾಗೂ ವಿದೇಶದಿಂದ ಜನರು ಅರಣ್ಯ ನೋಡಲು ಹಾಗೂ ಸಫಾರಿ ಅನುಭವಿಸಲು ಬರುತ್ತಾರೆ. ಇವರಿಗೆ ನಾಡಿನ ಭವ್ಯ ಅರಣ್ಯ ಸಂಪತ್ತಿನ ಪರಿಚಯ ಆಗುವ ಜೊತೆಗೆ ಆರ್ಥಿಕತೆಯು ಪ್ರವಾಸೋದ್ಯಮದ ಮೂಲಕ ಉತ್ತಮವಾಗುತ್ತಿದೆ. ಪ್ರಸ್ತುತ ಸಫಾರಿ ಸ್ಥಗಿತಗೊಂಡಿರುವ ಪರಿಣಾಮ ಇದನ್ನೆ ನಂಬಿ ಕೆಲಸ ಮಾಡುವ ಸಾವಿರಾರು ಜನರ ಕುಟುಂಬಗಳಿಗೆ ಬೇರೆ ದಿಕ್ಕು ಇಲದಂತಾಗುತ್ತದೆ. ಈಗಾಗಲೇ ಸಫಾರಿ ಸ್ಥಗಿತದಿಂದ ಸಾಕಷ್ಟು ಸಮಸ್ಯೆಗಳಾಗಿವೆ’ ಎಂದು ಮನವಿಯಲ್ಲಿ ತಿಳಿಸಿದರು.
ಸಫಾರಿ ಜಾಗದಲ್ಲಿ ಹಾಗೂ ಸುತ್ತಮುತ್ತಲಿನ ರೆಸಾರ್ಟ್, ಹೋಟೆಲ್ಗಳಲ್ಲಿ ಕೆಲಸ ಮಾಡುವವರು ಸ್ಥಳೀಯರು ಮತ್ತು ಕಡು ಬಡವ ಕುಟುಂಬ ವರ್ಗದವರಾಗಿದ್ದೇವೆ. ಸಫಾರಿ ಸ್ಥಗಿತವಾಗಿರುವುದರಿಂದ ವಾಹನ ಚಾಲಕರು, ಗೈಡ್ಗಳು, ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಜೀವನದ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಈವರೆಗೂ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಫಾರಿ ನಡೆಯುತ್ತಿದ್ದು, ಇದುವರೆಗೂ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ರೈತರ ಮೇಲೆ ಹುಲಿ ದಾಳಿ ಮಾಡಿರುವ ಪ್ರದೇಶಕ್ಕೂ ಹಾಗೂ ಸಫಾರಿ ನಡೆಯುವ ಜಾಗಕ್ಕೂ ಸುಮಾರು 60 ಕಿ.ಮೀ. ಅಂತರವಿದೆ. ಆ ಘಟನೆಗೂ ಸಫಾರಿಗೂ ಯಾವುದೇ ಸಂಬಂಧವಿಲ್ಲ. ನಾವೆಲ್ಲರು ರೈತರ ಮಕ್ಕಳೇ ಆಗಿದ್ದು, ವ್ಯವಸಾಯದ ಜೊತೆಗೆ ಪ್ರವಾಸೋಧ್ಯಮಕ್ಕೂ ಅವಲಂಬಿತರಾಗಿದ್ದೇವೆ. ಆದ್ದರಿಂದ ಸ್ಥಳೀಯರ ಜೀವನ ಹಾಗು ಪ್ರವಾಸೋದ್ಯಮದ ದೃಷ್ಟಿಯಿಂದ ಸಫಾರಿ ಪುನರಾರಂಭಿಸಲು ನಿರ್ಧಾರ ಕೈಗೊಳಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ತಹಶೀಲ್ದಾರ್ಗೂ ಮನವಿ ಸ್ಥಳೀಯರು ವಾಹನ ಚಾಲಕರು ಹೋಟೆಲ್ ಮತ್ತು ರೆಸಾರ್ಟ್ ಸಿಬ್ಬಂದಿ ಹಾಗು ಸಣ್ಣ ವ್ಯಾಪಾರಸ್ಥರು ತಹಶೀಲ್ದಾರ್ ತನ್ಮಯ್ ಅವರಿಗೂ ಮನವಿ ಸಲ್ಲಿಸಿ ಕೂಡಲೇ ಸಫಾರಿ ಪುನರ್ ಆರಂಭಕ್ಕೆ ಸರ್ಕಾರದ ಮೂಲಕ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.