ಚಾಮರಾಜನಗರ: ಬೈಕ್ನ ಎದುರು ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಮುದ್ದಾಡುತ್ತಾ ಬೈಕ್ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರನನ್ನು ನಗರ ಸಂಚಾರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ಸ್ವಾಮಿ.ಎಸ್.ಸಿ ಬಂಧಿತ ಆರೋಪಿ. ಬೈಕ್ ಅನ್ನೂ ವಶಕ್ಕೆ ಪಡೆಯಲಾಗಿದೆ.
ಚಾಮರಾಜನಗರ ಗುಂಡ್ಲುಪೇಟೆ ರಸ್ತೆಯಲ್ಲಿ ಯಡಬೆಟ್ಟದ ಬಳಿ ಆರೋಪಿಯು ಬೈಕ್ನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಹುಡುಗಿಯನ್ನು ಕೂರಿಸಿಕೊಂಡು ಅಪಾಯಕಾರಿಯಾಗಿ ಬೈಕ್ ಚಲಾಯಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಹುಡುಗಿಯು ಸವಾರನಿಗೆ ಎದುರಾಗಿ ಕುಳಿತು, ಸವಾರನನ್ನು ತಬ್ಬಿಕೊಂಡಿರುವ, ಇಬ್ಬರೂ ಚುಂಬಿಸುವ ದೃಶ್ಯಗಳ ತುಣುಕುಗಳು ವೈರಲ್ ಆಗಿತ್ತು.
ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಈ ಪ್ರಕರಣ ನಡೆದಿದೆ.ಬೈಕ್ನ ಹಿಂಭಾಗದಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದವರು ಈ ದೃಶ್ಯವನ್ನು ಚಿತ್ರೀಕರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಸಾರ್ವಜನಿಕರಿಂದ ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಬೈಕ್ನ ನೋಂದಣಿ ಸಂಖ್ಯೆಯನ್ನು ಆಧರಿಸಿ, ಅದರ ಮಾಲೀಕನನ್ನು ಪತ್ತೆ ಹಚ್ಚಿ, ಸವಾರನನ್ನು ಕಂಡು ಹಿಡಿದು ಬಂಧಿಸಿದ್ದಾರೆ.
ಆರೋಪಿ ಸ್ವಾಮಿ ಚಲಾಯಿಸುತ್ತಿದ್ದ ಪಲ್ಸರ್ ಬೈಕ್, ಆತನ ಸಂಬಂಧಿಕನದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣ ಠಾಣೆ ಇನ್ಸ್ಪೆಕ್ಟರ್ ತಿಮ್ಮರಾಜು, ಸಂಚಾರ ಠಾಣೆ ಸಬ್ ಇನ್ಸ್ಪೆಕ್ಟರ್ ನಂದೀಶ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಹೆಡ್ಕಾನ್ಸ್ಟೆಬಲ್ಗಳಾದ ಚಿಕ್ಕಣ್ಣ.ಸಿ, ಜಯರಾಮು. ಬಿ.ಕೆ., ಜಿ.ಬಿ.ಮಹದೇವಸ್ವಾಮಿ ಕಾನ್ಸ್ಟೆಬಲ್ಗಳಾದ ಜಗದೀಶಟಿ .ಕೆ. ಹಾಗೂ ನವೀನ್ ಕುಮಾರ್ ಪಿ. ಅವರು ತಂಡದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.