
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಸುತ್ತ ಭಾನುವಾರ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಾಗಿದೆ. ಪೋಡುಗಳ ಸುತ್ತಲಿನ ತೋಟಗಳಲ್ಲಿ ಮಳೆ ಹನಿಗೆ ಕಾಫಿ ಗಿಡದಲ್ಲಿ ಹೂವು ಅರಳಿ ಕಂಪು ಬೀರುತ್ತಿವೆ.
ಶನಿವಾರ ಸಂಜೆಯಿಂದಲೇ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಬಿಸಿಲು, ಚಳಿ ಹಾಗೂ ಶೀತಗಾಳಿ ಬೀಸಿದ್ದು, ತಂಪು ಹವೆ ಮುಂದುವರಿದಿದೆ, ಜನ ಮತ್ತು ಜಾನುವಾರು ಸಾಕಣೆದಾರರು ಬೆಚ್ಚನೆ ಉಡುಪುಗಳನ್ನು ತೊಟ್ಟು ಪಶುಸಂಗೋಪನ ಕಾರ್ಯಕ್ಕೆ ತೆರಳಿದರು.
ಜ.25 ರಿಂದ ಎರಡು ದಿನ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ರಾತ್ರಿ ಅಥವಾ ನಸುಕಿನ ವೇಳೆ ಅಲ್ಲಲ್ಲಿ ತುಂತುರು ಮಳೆ ಸುರಿಯುವ ಮುನ್ಸೂಚನೆ ಇದೆ. ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ತಮಿಳುನಾಡು ಮೂಲಕ ದಕ್ಷಿಣ ಕರ್ನಾಟಕ ಒಳನಾಡಿಗೆ ತೇವಾಂಶಯುಕ್ತ ಗಾಳಿ ಪ್ರವೇಶಿಸುವ ಸಾಧ್ಯತೆ ಇದೆ. ಹಾಗಾಗಿ, ಒಂದೆರಡು ಕಡೆ ತುಂತುರು ಮಳೆಯಿಂದ ಹಗುರವಾದ ಮಳೆ ಬೀಳಲಿದೆ.
‘ಸಾಮಾನ್ಯವಾಗಿ ಜನವರಿಯಲ್ಲಿ ಮಳೆ ಸುರಿಯುವುದಿಲ್ಲ. ಫೆಬ್ರುವರಿ ನಂತರ ವರ್ಷಧಾರೆಯಾದಲ್ಲಿ ಕಾಫಿ ಇಳುವರಿ ಹೆಚ್ಚಾಗಲಿದೆ’ಬೊಮ್ಮಯ್ಯ ಕೃಷಿಕ
‘ರೈತರು ಕಟಾವಿಗೆ ಸಿದ್ಧವಾಗಿರುವ ಭತ್ತ ಜೋಳ ಮುಸುಕಿನಜೋಳ ಮತ್ತಿತರ ಬೆಳೆಗಳ ರಕ್ಷಣೆಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು’ಎ. ವೆಂಕಟರಂಗಶೆಟ್ಟಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ