
ಕೊಳ್ಳೇಗಾಲ: ‘ಬಿಜೆಪಿಯಲ್ಲಿ ಬಂಡಾಯ ಇಲ್ಲ, ಎಲ್ಲ ನಾಯಕರು ಒಗ್ಗಟ್ಟಿನಿಂದ ಸರ್ಕಾರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವರಿಷ್ಠರನ್ನು ಭೇಟಿಯಾಗಲು ಯಾರು ಬೇಕಾದರೂ ದೆಹಲಿಗೆ ಹೋಗಬಹುದು. ಹಾಗೆಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಕೆಲವು ಶಾಸಕರು ದೆಹಲಿಗೆ ಹೋಗಿ ಬಂದಿದ್ದಾರೆ. ಇದರಲ್ಲಿ ಬಂಡಾಯ ಇಲ್ಲ’ ಎಂದರು.
‘ಪಕ್ಷದಲ್ಲಿರುವ ಸಣ್ಣ ಗೊಂದಲಗಳನ್ನು ನಾಯಕರು ಬಗೆಹರಿಸಿಕೊಳ್ಳಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಯಾರಾಗಬೇಕು ಎಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಸದ್ಯ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ. ಮುಡಾ, ವಾಲ್ಮೀಕಿ ಹಗರಣಗಳ ವಿರುದ್ಧ ಹೋರಾಟ ಮಾಡಿ ಸಚಿವರು, ಶಾಸಕರನ್ನು ಜೈಲಿಗೆ ಕಳುಹಿಸಿದ್ದೇವೆ’ ಎಂದರು.
ಕಾಂಗ್ರೆಸ್ನಲ್ಲಿ ಒಗ್ಗಟ್ಟು ಇಲ್ಲ: ‘ಎರಡೂವರೆ ವರ್ಷ ಒಗ್ಗಟ್ಟು ಪ್ರದರ್ಶಿಸದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗ ಒಗ್ಗಟ್ಟಿನ ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಹಾಗೂ ಸುಡುವ ಮನೆಯಾಗಿದೆ. ಕಾಂಗ್ರೆಸ್ ಎಂಬ ಒಡೆದುಹೋದ ಕನ್ನಡಿ ಮರು ಜೋಡಿಸಲು ಸಾಧ್ಯವಿಲ್ಲ’ ಎಂದರು.
‘ಕಾಂಗ್ರೆಸ್ಲ್ಲಿ ಹೈಕಮಾಂಡ್ ಸತ್ತು ಹೋಗಿದೆ. ರಾಹುಲ್ ಗಾಂಧಿ ಮೆದುಳಿಗೂ ನಾಲಗೆಗೂ ಸಂಬಂಧ ಇಲ್ಲದಂತೆ ಮಾತನಾಡುತ್ತಾರೆ. ಹಿಂದೂಗಳನ್ನು ಹಿಂಸೆ ಎನ್ನುತ್ತಾರೆ, ರಾಹುಲ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು’ ಎಂದು ಟೀಕಿಸಿದರು.
‘ಡಿ.ಕೆ.ಶಿವಕುಮಾರ್ ಒಂದೇ ಪಕ್ಷದಲ್ಲಿದ್ದು, ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಆದರೆ, ಪಕ್ಷಾಂತರ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಸಿದ್ಧಾಂತಗಳಿಗೆ ಬದ್ಧರಾಗಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್ ಕುಮಾರ್, ಮಾಜಿ ಶಾಸಕ ಎಸ್.ಬಾಲರಾಜು, ಪ್ರೊ.ಮಲ್ಲಿಕಾರ್ಜುನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.