
ಯಳಂದೂರು (ಚಾಮರಾಜನಗರ ಜಿಲ್ಲೆ): ‘ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿರುವ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ 3 ದಿನಗಳಿಂದ ಮುಂಜಾನೆಯ ಮೊದಲ ಪೂಜೆಗೆ ಕಲ್ಯಾಣಿ ತೀರ್ಥ ಬಳಸುತ್ತಿಲ್ಲ’ ಎಂದು ಭಕ್ತರು ಆರೋಪಿಸಿದ್ದಾರೆ.
ಪ್ರತಿನಿತ್ಯ ಕಲ್ಯಾಣಿಯಿಂದ ತೀರ್ಥ ಸಂಗ್ರಹಿಸಿ ದೇವಾಲಯದ ಬಾಗಿಲು ತೆಗೆಯುವುದು ವಾಡಿಕೆ. ಸಂಪ್ರದಾಯದ ಪ್ರಕಾರ, ಗ್ರಾಮದಲ್ಲಿ ಯಾರಾದರೂ ಮೃತರಾದರೆ ದೇಗುಲವನ್ನು ಕೆಲ ಸಮಯದವರೆಗೆ ಮುಚ್ಚಲಾಗುತ್ತದೆ. ಅಂತ್ಯಸಂಸ್ಕಾರ ಮುಗಿದ ನಂತರ ಕಲ್ಯಾಣಿಗೆ ತೆರಳಿ ಶುದ್ಧಿ ಕಾರ್ಯ ನಡೆಸಿದ ನಂತರ ತೀರ್ಥದೊಂದಿಗೆ ದೇವಾಲಯದ ಬಾಗಿಲು ತೆಗೆಯಲಾಗುತ್ತದೆ.
‘ಆದರೆ ಈಗ ಮುಂಜಾನೆಯ ಮೊದಲ ಪೂಜೆಗೆ ಕಲ್ಯಾಣಿ ತೀರ್ಥದ ಬದಲು, ಆಗಮಿಕರು ಅಡುಗೆಮನೆಯ ನೀರನ್ನೇ ಪೂಜೆಗೆ ಬಳಸುತ್ತಿದ್ದು, ಸಂಪ್ರದಾಯಕ್ಕೆ ಪೆಟ್ಟುನೀಡಿದ್ದಾರೆ’ ಎಂದು ಭಕ್ತರು ಆರೋಪಿಸಿದ್ದಾರೆ.
‘ಅ.26 ರಂದು ಮೃತಪಟ್ಟ ಬೆಟ್ಟದ ಗ್ರಾಮಸ್ಥರೊಬ್ಬರ ಅಂತ್ಯಸಂಸ್ಕಾರವು ಮಾರನೇ ದಿನ ಕಲ್ಯಾಣಿ ಸಮೀಪ, ಸುಮಾರು 100 ಮೀಟರ್ ದೂರದಲ್ಲಿ ನಡೆದಿತ್ತು. ಕಲ್ಯಾಣಿ ಸಮೀಪವೇ ಅಂತ್ಯಕ್ರಿಯೆ ನಡೆದಿರುವುದರಿಂದ ತೀರ್ಥ ಅಪವಿತ್ರವಾಗಿದೆ ಎಂದಿರುವ ಆಗಮಿಕರು ಪೂಜೆಗೆ ಬಳಸುತ್ತಿಲ್ಲ. ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಉತ್ಸವ ಸೇರಿದಂತೆ ಧಾರ್ಮಿಕ ಕೆಲಸಗಳಿಗೆ ತೀರ್ಥ ತರುವುದಿಲ್ಲ ಎಂದು ಮುಜರಾಯಿ ಇಲಾಖೆಯ ಸಂಪ್ರದಾಯಕ್ಕೆ ಧಕ್ಕೆ ತಂದಿದ್ದಾರೆ’ ಎಂಬುದು ಭಕ್ತರ ದೂರು.
ಈ ಕುರಿತು ದೇವಾಲಯದ ಇಒ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ, ‘ಸದ್ಯ ಮಧ್ಯರಂಗ ದೇವಾಲಯದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿದ್ದು, ಕಾರ್ಯದೊತ್ತಡ ಮುಗಿದ ಬಳಿಕ ವಿವಾದದ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು’ ಎಂದರು.
‘ಕ್ರಮ ಕೈಗೊಳ್ಳಿ’
‘ಕಲ್ಯಾಣಿಯ ಕೊಳದಿಂದ ದೇವರ ಮಜ್ಜನಕ್ಕೆ ತೀರ್ಥ ತರುವ ಪದ್ಧತಿ ನಿರಂತರವಾಗಿತ್ತು. ಕಲ್ಯಾಣಿ ಸಮೀಪ ಅಂತ್ಯ ಸಂಸ್ಕಾರ ಮಾಡಿರುವುದರಿಂದ ಮೊದಲ ತೀರ್ಥ ತರುವ ಕಾಯಕವನ್ನು ಸ್ಥಗಿತಗೊಳಿಸಿರುವ ಬಗ್ಗೆ ಆಗಮಿಕರು ಮಾಹಿತಿ ನೀಡಿದ್ದಾರೆ. ಈ ಕುರಿತು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.