
ಪ್ರಜಾವಾಣಿ ವಾರ್ತೆ
ಹನೂರು: ಪಟ್ಟಣದ ಹೊರವಲಯದ ಪೊಲೀಸ್ ವಸತಿ ಗೃಹದ ಸಮೀಪದಲ್ಲಿರುವ ಅಶೋಕ ಆರಾಮ ಬುದ್ಧ ವಿಹಾರದಲ್ಲಿ ಭಾನುವಾರ ಕಠಿಣ ಚೀವರ ಧಾನ ಉತ್ಸವ ಮತ್ತು ಧ್ಯಾನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಪಟ್ಟಣದಿಂದ ಬುದ್ಧ ವಿಹಾರದ ತನಕ ಬುದ್ಧ ಪ್ರತಿಮೆಯನ್ನು ಮೆರವಣಿಗೆ ಮಾಡಲಾಯಿತು. ಬೌದ್ಧ ಬಿಕ್ಕು ಆನಂದ ತೆರೋ ಅವರು ಧ್ಯಾನ ಮಂದಿರದ ಶಿಲಾನ್ಯಾಸ ನೆರವೇರಿಸಿದರು. ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ಉಪಾಸಕ, ಉಪಾಸಕಿಯರು ಬಿಕ್ಕು ಸಂಘಕ್ಕೆ ಕಠಿಣ ಚೀವರ ಧಾನ ಮತ್ತು ಬಂತೇಜಿಗಳು ಬಳಸುವ ದಿನನಿತ್ಯ ವಸ್ತುಗಳನ್ನು ದಾನ ನೀಡಿದರು. ಶ್ರೀಲಂಕಾದಿಂದ ಬಂದಿದ್ದ ಸಂಘನಂದ ಬಂತೇಜಿ ಎಲ್ಲಾ ಉಪಾಸಕರುಗಳಿಗೆ ಪಂಚಶೀಲ ಬೋಧಿಸಿದರು.
ಬಳಿಕ ಮಾತನಾಡಿದ ಆನಂದ ಬಂತೇಜಿ, ಧ್ಯಾನ ಮಂದಿರದ ಅಭಿವೃದ್ಧಿ ಕೆಲಸ ಸುಗಮವಾಗಿ ನಡೆಯಲಿ. ದಮ್ಮ ತಿಸ್ಸ ಬಂತೇಜಿಗಳು ದಮ್ಮ ದಾನವನ್ನು ತಮಗೆಲ್ಲ ನೀಡುತ್ತಿದ್ದಾರೆ. ಇವತ್ತು ಈ ಸುಂದರವಾದ ಕಾರ್ಯಕ್ರಮಕ್ಕೆ ಆಗಮಿಸಿರುವ ತಮಗೆಲ್ಲರಿಗೂ ಭಗವಾನ್ ಬುದ್ಧರ ಕರುಣೆ ಮೈತ್ರಿ ಪ್ರೀತಿ ತಮ್ಮ ಜೀವನದಲ್ಲಿ ದೊರಕಲಿ, ಅಶೋಕ ಆರಾಮ ಬುದ್ಧ ವಿಹಾರ ನಿಮಗೆಲ್ಲ ಶಾಂತಿ ನೀಡುವ ಸ್ಥಳವಾಗಲಿ. ಸಾಮ್ರಾಟ್ ಅಶೋಕ ಮಹಾರಾಜರು ತಮ್ಮ ಜೊತೆಯಿದ್ದ ಬಿಕ್ಕುಗಳಾದ ಮಹಾದೇವ ತೇರಾ ರವರನ್ನು ಈ ಕಡೆ ಎಲ್ಲಾ ಕಳುಹಿಸಿ ಬೌದ್ಧ ಸ್ತೂಪಗಳನ್ನು ನಿರ್ಮಾಣ ಮಾಡಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಧ್ಯಯನ ಮಾಡಿ ಬೌದ್ಧ ಧರ್ಮವನ್ನು ಸ್ವೀಕರಿಸಿ ನಾವೆಲ್ಲ ಬೌದ್ಧ ದಮ್ಮವನ್ನು ಸೇರುವ ಹಾಗೆ ಮಾಡಿದ್ದಾರೆ ಎಂದರು.
ಚೆನ್ನಾಲಿಂಗನಹಳ್ಳಿ ಜೇತವನ ಬುದ್ಧ ವಿಹಾರದ ಮನೋರಕ್ಕಿತ ಬಂತೇಜಿ ಮಾತನಾಡಿ, ಧ್ಯಾನ ಮಾಡುವುದರಿಂದ ಶಾರೀರಿಕ ಆರೋಗ್ಯ ಲಾಭವಿದೆ. ಮೋಸ ವಂಚನೆ ಅನ್ಯಾಯ ಇಲ್ಲದ ಸಮಾನತೆಯನ್ನು ಸಾರುವ ಶ್ರೇಷ್ಠ ಧರ್ಮವೇ ಬೌದ್ಧ ಧರ್ಮ. ನಮ್ಮ ಮೇಲೆ ನಾವು ವಿಶ್ವಾಸ ಇಟ್ಟುಕೊಂಡು ಬೌದ್ಧ ದಮ್ಮದಲ್ಲಿ ಸಾಗೋಣ. ಮನೆಯಲ್ಲಿ ಮಹಿಳೆಯರು ಬದಲಾದರೆ ಇಡೀ ಕುಟುಂಬ ದಮ್ಮವನ್ನು ಪಾಲನೆ ಮಾಡಬಹುದು. ಲೋಭವಿಲ್ಲದೆ ಮೋಸವಿಲ್ಲದೆ ಸುಂದರವಾದ ಬದುಕು ನಡೆಸಲು ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಬೌದ್ಧ ದಮ್ಮ ಅತ್ಯಂತ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಲಂಕಾದ ಸಂಘ ನಂದ ಬಂತೇಜಿ, ಬೀದರ್ನ ಸಿಂದಗಿಯ ಸಂಘ ಪಾಲ ಬಂತೇಜಿ, ಬೋದಿದತ್ತ ಬಂತೇಜಿ, ದಮ್ಮಪಾಲ ಬಂತೇಜಿ, ಬೋದಿ ರತ್ನ ಬಂತೇಜಿ, ಬೋದಿ ಪ್ರಿಯ ಬಂತೇಜಿ, ಗೌತಮಿ ಮಾತ ಬಂತೇಜಿ, ನರಗ್ಯತನಹಳ್ಳಿಯ ಹಲವಾರು ಬಂತೇಜಿಗಳು, ಉಪಾಸಕ ಉಪಸಿಕರುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.