ADVERTISEMENT

ಬಜೆಟ್: ಚಾಮರಾಜನಗರ ಪ್ರವಾಸೋದ್ಯಮಕ್ಕೆ ಸಿಗಲಿ ಮನ್ನಣೆ

ಸುಂದರ ಪ್ರಾಕೃತಿಕ ತಾಣ, ಶಿಲಾ ಸಮಾಧಿಗಳು, ಕಲೆ ಸಂಸ್ಕೃತಿ ಬೆಳಕಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:57 IST
Last Updated 28 ಜನವರಿ 2026, 7:57 IST
ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಇರುವ ಕೃಷ್ಣಯ್ಯನಕಟ್ಟೆ ನೈಸರ್ಗಿಕ ತಾಣ
ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತೆ ಇರುವ ಕೃಷ್ಣಯ್ಯನಕಟ್ಟೆ ನೈಸರ್ಗಿಕ ತಾಣ   

ಯಳಂದೂರು: ನೈಸರ್ಗಿಕ, ಚಾರಿತ್ರಿಕ ಹಾಗೂ ಐತಿಹಾಸಿಕ ತಾಣದ ತವರೂರಾದ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಕವಿ, ಕಲಾವಿದರು ನೆಲಸಿದ್ದ ಪ್ರದೇಶಗಳು ನಿರ್ಲಕ್ಷಕ್ಕೆ ಒಳಗಾಗಿವೆ. ಸುಂದರ ಪ್ರಾಕೃತಿಕ ನೆಲೆಯಲ್ಲಿ ಹರಿಯುವ ಹೊಳೆ, ಜಲಾಶಯಗಳನ್ನು ನಿಶ್ಚಿತ ಗುರಿಯೊಂದಿಗೆ ತಲುಪುವ ಪ್ರಯತ್ನಗಳು ನಡೆಯದೆ ಪ್ರವಾಸೋದ್ಯಮ ಬೆಳವಣಿಗೆ ಸ್ಥಗಿತವಾಗಿದೆ.

ತಾಲ್ಲೂಕಿನ ಅಗರ, ಅಂಬಳೆ, ಮಾಂಬಳ್ಳಿ ಸುತ್ತಮುತ್ತ ಚೋಳರ ವಾಸ್ತು ಕಲಾ ಶೈಲಿಯ ದೇವಾಲಯಗಳು ಕಣ್ಮನ ಸೆಳೆಯುತ್ತವೆ. ಪಟ್ಟಣದ ಸುತ್ತಮುತ್ತ ಹೊಯ್ಸಳ, ಗಂಗ, ಪಾಳೆಗಾರರು ಹಾಗೂ ಮುದ್ದುರಾಜನ ಕಾಲದ ಶಿಲಾ ರಚನೆಗಳು ರಾರಾಜಿಸುತ್ತವೆ. ಕನ್ನಡ ಮತ್ತು ತಮಿಳು ಶಾಸನಗಳು ಅಧ್ಯಯನ ಮತ್ತು ಸಂಶೋಧನೆ ನಡೆದಿಲ್ಲ. ಇಲ್ಲಿನ ಸ್ಮಾರಕಗಳು, ಶಿಲ್ಪಕಲೆಗಳನ್ನು ಪ್ರವಾಸಿಗರು ಮತ್ತು ಆಸಕ್ತರು ವೀಕ್ಷಿಸಲು ಅನುವಾಗುವಂತೆ ವ್ಯವಸ್ಥಿತವಾದ ಯೋಜನೆ ರೂಪಿಸಲು ಈ ಬಾರಿಯ ಬಜೆಟ್‌ನಲ್ಲಿ ನೆರವು ಸಿಗಬೇಕಿದೆ.

ಪ್ರತಿ ಗ್ರಾಮ, ಹೊಳೆ ದಂಡೆ, ದೇವಾಲಯ, ಪಟ್ಟಣದ ಸುತ್ತಮುತ್ತ ನೂರಾರು ಐತಿಹಾಸಿಕ ಕುರುಹುಗಳಿವೆ. ಕವಿಗಳ ಗದ್ದುಗೆಗಳಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಬಂಗಲೆಗಳು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತಿದೆ. ಹಳೇ ಶಿಲಾಯುಗದ ಕಾಲದ ಶಿಲಾ ಸಮಾಧಿಗಳು ಬೆಟ್ಟದ ಸುತ್ತಮುತ್ತ ಕಂಡುಬಂದರೆ, ರಂಗನಾಥಸ್ವಾಮಿಗೆ ದಾನದತ್ತಿ ಬಿಟ್ಟ ವಿಚಾರಗಳನ್ನು ಒಳಗೊಂಡ ಶಾಸನಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಬೇಕು. ಇದರಿಂದ ಪ್ರವಾಸಿಗರು ಪ್ರತಿದಿನ ವೀಕ್ಷಿಸಲು ಬರುವುದರಿಂದ ಸ್ಥಳೀಯರಿಗೆ ಉದ್ಯೋಗ ಲಭಿಸುತ್ತದೆ. ಸುಂದರ ತಾಣಗಳನ್ನು ರಕ್ಷಿಸಬಹುದು ಎಂದು ಚಿಂತಕ ಹಾಗೂ ಕವಿ ಯಳಂದೂರು ನಾಗೇಂದ್ರ ಹೇಳುತ್ತಾರೆ.

ADVERTISEMENT

ಪಟ್ಟಣದ ಸುವರ್ಣವತಿ ನದಿ ತಟದಲ್ಲಿ ಜೈನ ಮುನಿಗಳು ತಪಸ್ಸು ಮಾಡಿದ ಜಪದ ಕಟ್ಟೆಗಳನ್ನು ಅಭಿವೃದ್ಧಿ ಪಡಿಸಬೇಕು. ಚೋಳರ ಮತ್ತು ಹೊಯ್ಸಳರ ಕಾಲದ ಸ್ಮಾರಕ ವೀಕ್ಷಿಸಲು ರಸ್ತೆ ಸಂಪರ್ಕ ವಿಸ್ತರಿಸಬೇಕು, ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದ ಹಾದಿಯ ಕೃಷ್ಣಯ್ಯನ ಕಟ್ಟೆ ಹಾಗೂ ಆಮೆಕೆರೆ ಪರಿಸರವನ್ನು ವೀಕ್ಷಿಸಲು ಸಾರಿಗೆ ಸಂಪರ್ಕ ಸುಧಾರಿಸಬೇಕು, ಪಾರ್ಕಿಂಗ್ ಹಾಗೂ ಪ್ರವಾಸಿ ತಾಣಗಳ ದಿಕ್ಕು ತೋರುವ ಫಲಕಗಳನ್ನು ಅಳವಡಿಸಬೇಕು. ಆದರೆ, ಕೆಲವು ಪ್ರದೇಶಗಳಿಗೆ ತೆರಳಲು ಮೂಲ ಸೌಲಭ್ಯಗಳು ಇಲ್ಲದ ಕಾರಣ ಪ್ರವಾಸಿಗರು ಪರದಾಡುವಂತೆ ಆಗಿದೆ ಎನ್ನುತ್ತಾರೆ ಅಂಬಳೆ ನಾಗೇಶ್,

ಜನಪದರ ತೊಟ್ಟಿಲು

ಹತ್ತಾರು ಹಳ್ಳಿಗಳಲ್ಲಿ ನೂರಾರು ಜನಪದ ಕಲಾವಿದರು ಇದ್ದಾರೆ. ಸೋಬಾನೆ ಪದ, ಮಾದಪ್ಪ ಹಾಗೂ ರಂಗನಾಥನ ನೂರಾರು ಕೀರ್ತನೆಗಳನ್ನು ಕಥೆ, ಹಾಡು, ಕುಣಿತಗಳ ಮೂಲಕ ಕಟ್ಟಿಕೊಡುವ ಪರಂಪರೆ ಇಲ್ಲಿದೆ. ಯಳಂದೂರು ಷಡಕ್ಷರದೇವ, ಮುಪ್ಪಿನ ಷಡಕ್ಷರದೇವ, ಸಂಸ ಮೊದಲಾದವರ ಕವಿತೆ ಮತ್ತು ಬರಹಗಳನ್ನು ಉಳಿಸಬೇಕು. ಮೈಸೂರು-ಟಿಪ್ಪು ನಂಟಿನ ಕಥೆ ಸಾರುವ ಬಂಗಲೆಗಳನ್ನು ಉಳಿಸಬೇಕು. ಇದಕ್ಕಾಗಿ ಬಜೆಟ್‌ನಲ್ಲಿ ಯೋಜನೆ ರೂಪಿಸಿ ಹಣಕಾಸು ಒದಗಿಸಲು ಸರ್ಕಾರ ಚಿತ್ತ ಹರಿಸಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಸೆ.

ಬಿಳಿಗಿರಿಬೆಟ್ಟ ಆಕರ್ಷಣೆ ಹೆಚ್ಚಿಸಿ:

ಬಿಳಿಗಿರಿಬೆಟ್ಟ ಜಗತ್ತಿನ ಜನರನ್ನು ಆಕರ್ಷಿಸುವ ಸುಂದರ ನೈಸರ್ಗಿಕ ತಾಣ. ಆಸ್ತಿಕರ ದೈವ ರಂಗನಾಥಸ್ವಾಮಿ ದೇವಳ ಗಿರಿಶಿಖರದ ತುತ್ತ ತುದಿಯಲ್ಲಿ ಇದೆ. ಹುಲಿ, ಚಿರತೆ, ಆನೆಗಳ ನೈಸರ್ಗಿಕ ನೆಲೆಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೆ.ಗುಡಿ ಕೇಂದ್ರವಾಗಿಸಿ ಸುಸಜ್ಜಿತ ಬಸ್ ನಿಲ್ದಾಣ, ಶೌಚಾಲಯ, ಆಸ್ಪತ್ರೆಗಳ ಸೇವೆ ಒದಗಿಸಬೇಕಿದೆ. ಕಡಿಮೆ ದರದಲ್ಲಿ ವಸತಿ ಸೇವೆಗಳನ್ನು ಕಲ್ಪಿಸಬೇಕು. ಇಲ್ಲಿನ ವನಸಿರಿ ಮತ್ತು ಜೀವ ವೈವಿಧ್ಯವನ್ನು ಪರಿಚಯಿಸುವ ಕೆಲಸ ಮಾಡಬೇಕು. ಮೂಲ ನಿವಾಸಿಗಳ ಆಹಾರ ಪದ್ಧತಿ, ಸಂಸ್ಕೃತಿ, ಪ್ರದರ್ಶನ ಕಲೆಗಳನ್ನು ಉಳಿಸಬೇಕಿದೆ ಎನ್ನುತ್ತಾರೆ ಏಟ್ರೀ ಸಂಶೋಧಕ ಮಾದೇಗೌಡ.

ಗಣಿಗನೂರು ಬಳಿ ಸುವರ್ಣವತಿ ನದಿ ನೀರಿನಿಂದ ಕಂಗೊಳಿಸುವ ಹಸಿರು ಪ್ರದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.