ಚಾಮರಾಜನಗರ: ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಉಪ್ಪಾರ ಸಮುದಾಯದವರು ಜಾತಿ ಕಾಲಂನಲ್ಲಿ ‘ಉಪ್ಪಾರ’ ಎಂದು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು ಎಂದು ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ಹಾಗೂ ಶಾಸಕರೂ ಆದ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೋಮವಾರದಿಂದ ಆರಂಭವಾಗಿದ್ದು ಸಮರ್ಪಕ ಮಾಹಿತಿ ನೀಡಬೇಕು. ಉಪ್ಪಾರರಲ್ಲಿ ಉಪ್ಪಳಿಗ, ಉಪ್ಪಳಿಗ ಶೆಟ್ಟಿ, ಉಪ್ಪೇರ, ಉಪ್ಪಾರ ಗೌಂಡಿ, ಉಪ್ಪಾರ ಗೌಡ, ಉಪ್ಪಾರ ಶೆಟ್ಟಿ ಸೇರಿದಂತೆ ಹಲವು ಉಪ ಪಂಗಡಗಳಿವೆ. ಉಪ ಜಾತಿಗಳ ಗೊಂದಲಕ್ಕೆ ಒಳಗಾಗದೆ ಜಾತಿಯ ಹೆಸರನ್ನು ‘ಉಪ್ಪಾರ’ ಎಂದೇ ಬರೆಸಬೇಕು, ಉಪ ಜಾತಿಯ ಕಾಲಂನಲ್ಲಿ ಉಪ ಕಸುಬುಗಳನ್ನು ಬರೆಸಬಹುದು ಎಂದರು.
ಉಪ್ಪಾರ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಮೌಢ್ಯ, ಕಂದಾಚಾರ ಹೆಚ್ಚಾಗಿದ್ದು, ಬಾಲ್ಯವಿವಾಹಗಳು ನಡೆಯುತ್ತಿವೆ. ಸಮುದಾಯದ ಅಭಿವೃದ್ಧಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನೆರವಾಗಲಿದ್ದು ನಿಖರವಾದ ಮಾಹಿತಿ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್, ನಾಗಶೆಟ್ಟಿ, ಆರ್.ಚಿಕ್ಕಮಹದೇವ್, ಗೋವಿಂದಶೆಟ್ಟಿ, ನಾರಾಯಣ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.