ಕೊಳ್ಳೇಗಾಲ: ಕೆಆರ್ಎಸ್ ಹಾಗೂ ಕಬಿನಿ ಜಲಾಶಯದಿಂದ 1.23 ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಟ್ಟಿರುವ ಪರಿಣಾಮ ತಾಲ್ಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಭತ್ತ, ಕಬ್ಬು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.
ಕೇರಳದ ವಯನಾಡು ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟಿರುವುದರಿಂದ ತಾಲ್ಲೂಕಿನ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಯಡಕುರಿಯ, ಸತ್ತೇಗಾಲ ಅಗ್ರಹಾರ ಭಾಗದ ಸುಮಾರು 700 ಎಕರೆಯಷ್ಟು ಜಮೀನು ಜಲಾವೃತವಾಗಿದೆ.
ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಗ್ರಾಮಳಿಗೆ ನೀರು ನುಗ್ಗಲಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ನದಿಪಾತ್ರದ 9 ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತವೆ. ನದಿ ನೀರು ಗ್ರಾಮಗಳಿಗೆ ನುಗ್ಗಿದರೆ ಗ್ರಾಮಸ್ಥರು ಊರುಗಳನ್ನು ತೊರೆದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಾರೆ.
ಕೃಷಿಭೂಮಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿ ಸಂಭವಿಸುತ್ತಿದೆ. ನದಿಪಾತ್ರದ ರೈತರು ಭತ್ತ ನಾಟಿ ಮಾಡಲು ಹಾಕಿದ್ದ ಸಸಿ ಮಡಿ ನಾಶವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಕಿದ್ದೇವು, ಪ್ರವಾಹದಿಂದ ಎಲ್ಲವೂ ನೀರು ಪಾಲಾಗಿದೆ. ತಾಲ್ಲೂಕು ಆಡಳಿತ ನಷ್ಟ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬೆಳೆದು ನಿಂತಿದ್ದ ಜೋಳ, ರಾಗಿ, ಸೊಪ್ಪು, ತರಕಾರಿಗಳು ನೆಲ ಕಚ್ಚಿವೆ. ತೆಂಗು, ಅಡಿಕೆ, ಕಬ್ಬಿಗೆ ನೀರುನುಗ್ಗಿ ಹಾನಿ ಸಂಭವಿಸಿದೆ. ಬಿಸಿಲು ಮಾರಮ್ಮ ರಸ್ತೆ, ಮುಳ್ಳೂರು ಗ್ರಾಮದ ನದಿ ತೀರದ ರಸ್ತೆ, ಅಣಗಳ್ಳಿ ಹರಳೆ ಗ್ರಾಮದ ರಸ್ತೆ ಜಲಾವೃತವಾಗಿದ್ದು ವಾಹನಗಳ ಹಾಗೂ ಸಾರ್ವಜನಿಕರ ಸಂಚಾರ ಬಂದ್ ಆಗಿದೆ.
ತಹಶೀಲ್ದಾರ್ ಭೇಟಿ:
ನದಿ ತೀರದ ಗ್ರಾಮಗಳಿಗೆ ತಹಶೀಲ್ದಾರ್ ಬಸವರಾಜು ಭೇಟಿನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿ ಎರಡೂ ಜಲಾಶಯಗಳಿಂದ ಹೆಚ್ಚುವರಿ ನೀರುಬಿಟ್ಟಿರುವ ಪರಿಣಾಮ ಸಮಸ್ಯೆಯಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಜಲಾಶಯದಿಂದ ಹರಿಯುವ ನೀರಿನ ಪ್ರಮಾಣ ತಗ್ಗಿದ್ದು 55 ಸಾವಿರ ಕ್ಯೂಸೆಕ್ಗೆ ಇಳಿಕೆಯಾಗಿದೆ. ನದಿ ತೀರದ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳಲ್ಲಿ ಟಾಂಟಾಂ ಹೊಡೆಸಲಾಗಿದೆ. ನದಿಗೆ ಇಳಿಯದಂತೆ, ಜಾನುವಾರುಗನ್ನು ನದಿಗೆ ಇಳಿಸದಂತೆ ಸೂಚನೆ ನೀಡಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತಗರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರು ತಾಲ್ಲೂಕು ಆಡಳಿತದ ಜೊತೆಗೆ ಸಹಕರಿಸಬೇಕು. ಸದ್ಯದ ಗ್ರಾಮ ತೊರೆಯುವ ಪರಿಸ್ಥಿತಿ ಉದ್ಭವಿಸಿಲ್ಲ ಎಂದರು.
ಮೋಟಾರ್ಗಳು ನಾಶ:
ಕೃಷಿ ಭೂಮಿಯಲ್ಲಿದ್ದ 50ಕ್ಕೂ ಹೆಚ್ಚು ಪಂಪ್ಸೆಟ್ ಮನೆಗಳಿಗೆ ನೀರು ನುಗ್ಗಿದ್ದು ಮೋಟಾರ್ಗಳಿಗೆ ಹಾನಿಯಾಗಿರುವ ಸಾಧ್ಯತೆಗಳು ಹೆಚ್ಚಾಗಿದೆ. ಪ್ರತಿ ವರ್ಷ ಮೋಟಾರ್ ದುರಸ್ತಿ ಮಾಡಿಸುವುದೇ ಕೆಲಸವಾಗಿದೆ. ಪ್ರವಾಹ ಬಂದಾಗ ಮಾತ್ರ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಗ್ರಾಮಗಳು ನೆನಪಾಗುತ್ತವೆ, ಸಮಸ್ಯೆಗೆ ಶಾಶ್ವರ ಪರಿಹಾರ ನೀಡುವ ನಿಟ್ಟಿನಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಹಳೆ ಹಂಪಾಪುರ ಗ್ರಾಮದ ಬಸವಣ್ಣ, ನಿಂಗಣ್ಣ ಸಿದ್ದರಾಜು ದೂರಿದರು.
ಕಾವೇರಿ ನದಿ ಉಕ್ಕಿ ಹರಿದು ಗ್ರಾಮಗಳು ಜಲಾವೃತವಾಗಿದ್ದರೂ ಅಧಿಕಾರಿಗಳು ತಕ್ಷಣ ಭೇಟಿನೀಡಿ ಸಮಸ್ಯೆ ಆಲಿಲ್ಲ. ಮಧ್ಯಾಹ್ನದವರೆಗೂ ಯಾವ ಅಧಿಕಾರಿಗಳು ಗ್ರಾಮಕ್ಕೆ ಬರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಸುರಕ್ಷತಾ ಕ್ರಮಗಳಿಲ್ಲ’:
ದಾಸನಪುರ ಗ್ರಾಮದ ಕಾವೇರಿ ನದಿಯಲ್ಲಿ ಮಹಿಳೆಯರು ಮಕ್ಕಳು ಯುವಕರು ನದಿಗೆ ಇಳಿಯುತ್ತಿದ್ದು ಪ್ರಾಣಾಪಾಯವಾಗುವ ಆತಂಕ ಹೆಚ್ಚಾಗಿದೆ. ಜನ ಜಾನುವಾರುಗಳು ನೀರಿಗಿಳಿಯದಂತೆ ತಡೆಯಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿಲ್ಲ. ನದಿಗೆ ಇಳಿಯದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿಲ್ಲ ಮಹಿಳೆಯರು ತುಂಬಿ ಹರಿಯುತ್ತಿರುವ ನದಿಗೆ ಇಳಿದು ನೀರು ಕೊಂಡೊಯ್ಯುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿಲ್ಲ. ನಾಮಕಾವಸ್ತೆಗೆ ಬ್ಯಾರಿಕೇಡ್ ಹಾಕಿರುವುದು ಬಿಟ್ಟರೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.