ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ದೇವಾಲಯದಲ್ಲಿ ಶನಿವಾರ ಅಪಾರ ಮಹಿಳಾ ಭಕ್ತರ ದಟ್ಟಣೆ ಕಂಡುಬಂತು.
ಮೊಹರಂ ಕಡೇದಿನ, ಸರ್ವೇಷಮೇಕಾದಶಿ ಹಾಗೂ ವಾರದ ವಿಶೇಷ ದಿನವಾದ್ದರಿಂದ ದೇವರ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಶಾಲಾ-ಕಾಲೇಜು ರಜೆಯೂ ಇದ್ದುದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡಿತ್ತು.
ದೇವಳದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಪುನಸ್ಕಾರ ನೆರವೇರಿಸಲಾಗಿತ್ತು. ರಂಗನಾಥನ ಒಕ್ಕಲಿನವರು, ದಾಸರು ಮತ್ತು ಸ್ಥಳೀಯರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.
ಬಸ್ ನಿಲ್ದಾಣ ಮತ್ತು ದೇವಾಲಯ ಸಮೀಪ ಕಾರು ಮತ್ತು ದ್ವಿಚಕ್ರ ವಾಹನ ನಿಲ್ಲಿಸಲು ಸವಾರರು ಪರದಾಡಿದರು. ದಾಸೋಹ ಭವನದಲ್ಲೂ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಮಳೆ ಕಡಿಮೆಯಾಗಿ, ಬಿಸಿಲು ಕಾಣಿಸಿರುವುದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಬಿಳಿಗಿರಿಬೆಟ್ಟದ ಅಂಗಡಿ ನಾಗೇಂದ್ರ ಹೇಳಿದರು. ಪೊಲೀಸರು ಮತ್ತು ದೇವಾಲಯ ಸಿಬ್ಬಂದಿ ಭಕ್ತರನ್ನು ನಿಯಂತ್ರಿಸಲು ಪ್ರಯಾಸಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.