ADVERTISEMENT

ಚಾಮರಾಜನಗರ | ಕುಲುಮೆ ರಸ್ತೆ: ‘ಕಾರಂಜಿ’ಗಳಾದ ಮ್ಯಾನ್‌ಹೋಲ್‌

ಬಾಲಚಂದ್ರ ಎಚ್.
Published 22 ಆಗಸ್ಟ್ 2025, 2:23 IST
Last Updated 22 ಆಗಸ್ಟ್ 2025, 2:23 IST
ಚಾಮರಾಜನಗರದ ಕುಲುಮೆ ರಸ್ತೆಯಲ್ಲಿ ಮ್ಯಾನ್‌ಹೋಲ್ ತುಂಬಿ ರಸ್ತೆಗೆ ಹರಿಯುತ್ತಿರುವುದು
ಚಾಮರಾಜನಗರದ ಕುಲುಮೆ ರಸ್ತೆಯಲ್ಲಿ ಮ್ಯಾನ್‌ಹೋಲ್ ತುಂಬಿ ರಸ್ತೆಗೆ ಹರಿಯುತ್ತಿರುವುದು   

ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅಶುಚಿತ್ವ ತಾಂಡವವಾಡುತ್ತಿದೆ. ಪ್ರತಿನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ ಹೊಲಸು ಮ್ಯಾನ್‌ಹೋಲ್‌ಗಳ ಮೂಲಕ ರಸ್ತೆಗೆ ಹರಿಯುತ್ತಿದ್ದು ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಲ–ಮೂತ್ರ ಸಹಿತ ಹೊಲಸು ಅಂತರ್ಜಲ ಸೇರುತ್ತಿದ್ದು ಸಾಂಕ್ರಮಿಕ ರೋಗಗಳ ಭೀತಿ ಎದುರಾಗಿದೆ.

31ನೇ ವಾರ್ಡ್‌ನ ರಾಮಸಮುದ್ರ ಬಡಾವಣೆಯ ವ್ಯಾಪ್ತಿಯ ಕುಲುಮೆ ರಸ್ತೆಯಲ್ಲಿ ಒಳಚರಂಡಿ ಹಾಳಾಗಿದ್ದು ಮ್ಯಾನ್‌ಹೋಲ್‌ಗಳಿಂದ ಹೊಲಸು ಕಾರಂಜಿಯಂತೆ ಉಕ್ಕಿ ಹರಿಯುತ್ತಿದೆ. ಸಹಿಸಲಾಸಧ್ಯ ದುರ್ವಾಸನೆ ಬೀರುತ್ತಿದ್ದು ಪ್ರಶಾಂತ್ ನಗರ, ಪ್ರಗತಿನಗರ ಸೇರಿದಂತೆ ಹಲವು ಬಡಾವಣೆಗಳ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಕುಲುಮೆ ರಸ್ತೆಯು ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಸೇಂಟ್‌ ಫ್ರಾನ್ಸಿಸ್‌, ಇಮ್ಯಾನ್ಯುವಲ್ ಪಬ್ಲಿಕ್ ಸ್ಕೂಲ್ ಹಾಗೂ ಸೇವಾ ಭಾರತಿ ವಿದ್ಯಾಸಂಸ್ಥೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು  ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ಜೊತೆಗೆ ಬಿಜೆಪಿ ಜಿಲ್ಲಾ ಕಚೇರಿ, ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ, ಚೆನ್ನಾಪುರದ ಮೊಳೆಯ ಹೂವಿನ ಸಗಟು ಮಾರುಕಟ್ಟೆಗೂ ರಸ್ತೆ ಸಂಪರ್ಕ ಕಲ್ಪಿಸುತ್ತದೆ.

ADVERTISEMENT

ವಾಹನ ದಟ್ಟಣೆ ಹಾಗೂ ಜನರ ಸಂಚಾರ ಹೆಚ್ಚಾಗಿರುವ ರಸ್ತೆಯಲ್ಲಿ ಇಮ್ಯಾನ್ಯುವೆಲ್ ಶಾಲೆಯ ಸಮೀಪದ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಿದ್ದು ಪರಿಸರ ದುರ್ವಾಸನೆ ಬೀರುತ್ತಿದೆ. ಈ ಭಾಗದ ಬಡಾವಣೆಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಮ್ಯಾನ್‌ಹೋಲ್‌ಗಳ ಮೂಲಕ ರಸ್ತೆಗೆ ಹರಿಯುತ್ತಿದ್ದು ಅಸಹನೀಯವಾಗಿದೆ. 

ವಾರದಿಂದಲೂ ಒಳಚರಂಡಿಯಿಂದ ತ್ಯಾಜ್ಯ ಉಕ್ಕಿ ಹರಿಯುತ್ತಿದ್ದರೂ ನಗರಸಭೆ ಅಧಿಕಾರಿಗಳಾಗಲಿ, ವಾರ್ಡ್‌ನ ಸದಸ್ಯರಾಗಲಿ ಸಮಸ್ಯೆ ಬಗೆಹರಿಸಿಲ್ಲ. ರಸ್ತೆ ಹರಿಯುತ್ತಿದ್ದ ತ್ಯಾಜ್ಯವನ್ನು ರಸ್ತೆ ಬದಿಯ ನಿವೇಶನಕ್ಕೆ ಹರಿಯಬಿಡಲಾಗಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ದುರ್ವಾಸನೆಯಿಂದ ಬೇಸತ್ತಿದ್ದಾರೆ. 

ನಿತ್ಯ ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು, ವಾಯು ವಿಹಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ತ್ಯಾಜ್ಯದ ಮೇಲೆ ವಾಹನಗಳು ಸಂಚರಿಸುವಾಗ ಪಾದಚಾರಿಗಳು, ಶಾಲಾ ವಿದ್ಯಾರ್ಥಿಗಳ ಮೇಲೆ ಸಿಡಿಯುತ್ತಿದೆ ಎಂದು ದೂರುತ್ತಾರೆ ಬಡಾವಣೆಯ ಶ್ರೀನಿವಾಸ್‌.

ಕುಲುಮೆ ರಸ್ತೆ ಸಂಪೂರ್ಣವಾಗಿ ನಗರಸಭೆಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆಯ ಒಂದು ಬದಿ ಕಸವಿಲೇವಾರಿ ತಾಣವಾಗಿ ಮಾರ್ಪಾಡಾಗಿದ್ದು ಟನ್‌ಗಟ್ಟಲೆ ತ್ಯಾಜ್ಯ ಬಿದ್ದಿದೆ. ರಸ್ತೆಯ ಸುಮಾರು 50 ಮೀಟರ್‌ ದೂರ ದುರ್ವಾಸನೆ ತುಂಬಿಕೊಂಡಿದೆ. ಮಳೆಗಾಲದಲ್ಲಿ ತ್ಯಾಜ್ಯ ಕೊಳೆತು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗಿದ್ದು ಡೆಂಗಿ, ಮಲೇರಿಯಾ ಭೀತಿ ಎದುರಾಗಿದೆ. ನಗರಸಭೆ ಕೂಡಲೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಬಡಾವಣೆಯ ನಾಗರಿಕರಾದ ಮಲ್ಲೇಶ್‌. 

ರಸ್ತೆಯಲ್ಲಿ ಬೀದಿದೀಪಗಳು ಸರಿಯಾಗಿ ಉರಿಯುದಿಲ್ಲ, ರಸ್ತೆ ಬದಿ ಕಳೆಗಿಡಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ. ರಾತ್ರಿಯ ಹೊತ್ತು ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ ಎಂದು ದೂರುತ್ತಾರೆ ನಿವಾಸಿಗಳು.

‘ಶೀಘ್ರ ದುರಸ್ತಿ’
ಕುಲುಮೆ ರಸ್ತೆಯಲ್ಲಿ ಹಾದುಹೋಗಿರುವ ಮ್ಯಾನ್‌ಹೋಲ್‌ಗಳ ಒಳಗೆ ಪೈಪ್‌ ಕಟ್ಟಿಕೊಂಡಿರುವುದರಿಂದ ಸಮಸ್ಯೆಯಾಗಿದೆ. ಜೆಸಿಬಿ ಯಂತ್ರ ಬಳಕೆ ಮಾಡಿಕೊಂಡು ರಸ್ತೆ ಅಗೆದು ದುರಸ್ತಿ ಮಾಡಬೇಕಿದ್ದು ತಡವಾಗುತ್ತಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಸುರೇಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.