
ಚಾಮರಾಜನಗರ: ವಾತಾವರಣದಲ್ಲಿ ಚಳಿ ಕಡಿಮೆಯಾಗಿ ಬೇಸಗೆಯ ದಗೆ ಹೆಚ್ಚಾಗುತ್ತಿದ್ದಂತೆ ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣುಗಳು ಲಗ್ಗೆ ಇಟ್ಟಿವೆ. ಬಿಸಿಲಿನ ತಾಪ ತಣಿಸಿಕೊಂಡು, ದಾಹ ನೀಗಿಸಿಕೊಳ್ಳಲು ಮುಂದಾಗಿರುವ ಗ್ರಾಹಕರು ಕಲ್ಲಂಗಡಿ ಖರೀದಿಯತ್ತ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ತಹಶೀಲ್ದಾರ್ ಕಚೇರಿ ಬಳಿ, ಜೆಎಸ್ಎಸ್ ಆಸ್ಪತ್ರೆ ಎದುರು, ಜಿಲ್ಲಾ ಡಿವೈಎಸ್ಪಿ ಕಚೇರಿ ವೃತ್ತ, ಜಿಲ್ಲಾಧಿಕಾರಿ ಕಚೇರಿ ಬಳಿ, ಜಿಲ್ಲಾ ಆಸ್ಪತ್ರೆ, ಗುಂಡ್ಲುಪೇಟೆ ಸರ್ಕಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಬಳಿ, ಸತ್ತಿ ರಸ್ತೆಯ ಅಲಲ್ಲಿ ಹೀಗೆ ನಗರ ಪ್ರಮುಖ ರಸ್ತೆಗಳ ಬದಿಯಲ್ಲಿ ಕಲ್ಲಂಗಡಿಗಳ ಮಾರಾಟ ನಡೆಯುತ್ತಿದೆ.
ಸ್ಥಳೀಯವಾಗಿ ಬೆಳೆಯುವ 1 ರಿಂದ 3 ಕೆ.ಜಿ ತೂಗುವ ಕಡು ಹಸಿರು ಬಣ್ಣದ ಕಲ್ಲಂಗಡಿ ಹಾಗೂ ಕನಿಷ್ಠ ಮೂರು ಕೆ.ಜಿಯಿಂದ 10ಕೆ.ಜಿವರೆಗೂ ತೂಗುವ ನಾಮದ ತಿಳಿ ಹಸಿರು ಕಲ್ಲಂಗಡಿಗಳು ಹೆಚ್ಚು ಮಾರಾಟವಾಗುತ್ತಿವೆ. ಈ ಬಾರಿ ಹಳದಿ ಬಣ್ಣದ ಕಲ್ಲಂಗಡಿಗಳೂ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ.
ಗಾಡ ಹಸಿರು ಬಣ್ಣದ ಸಣ್ಣ ಕಲ್ಲಂಗಡಿಗಳು ಕೆ.ಜಿಗೆ ₹ 15 ರಿಂದ ₹ 20 ಇದ್ದರೆ, ತಿಳಿ ಹಸಿರು ಬಣ್ಣದ ದೊಡ್ಡ ಕಲ್ಲಂಗಡಿಗಳು ಕೆ.ಜಿಗೆ ₹ 25 ರಿಂದ ₹ 30ರವರೆಗೆ ದರ ಇದೆ. ತಿಳಿ ಹಸಿರು ಕಲ್ಲಂಗಡಿಗಳು ಬಹುತೇಕ ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಬರುತ್ತಿವೆ. ಹಾಗಾಗಿ, ಸಾಗಾಟ ವೆಚ್ಚ, ಕಾರ್ಮಿಕರ ಕೂಲಿ ಹೆಚ್ಚುವರಿ ಹೊರೆಯಾಗಿರುವುದರಿಂದ ದರ ಸ್ವಲ್ಪ ದುಬಾರಿಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
‘ಚಳಿ ಕಡಿಮೆಯಾಗಿ ಬಿಸಿಲು ಹೆಚ್ಚಾಗುತ್ತಿರುವುದರಿಂದ ಕಲ್ಲಂಗಡಿ ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ. ಈಗಷ್ಟೆ ಬೇಸಗೆ ಆರಂಭವಾಗಿದ್ದು ಮೇ ಅಂತ್ಯದವರೆಗೂ ಕಲ್ಲಂಗಡಿ ಮಾರಾಟ ಬಿರುಸಿನಿಂದ ಸಾಗಲಿದೆ’ ಎನ್ನುತ್ತಾರೆ ವ್ಯಾಪಾರಿ ರಾಜೇಂದ್ರ.
ಬಿಸಿಲ ದಗೆ ಹೆಚ್ಚಾಗುತ್ತಿದ್ದಂತೆ ತರಕಾರಿಗಳ ದರವೂ ಹೆಚ್ಚಾಗಿದೆ. ಬೀನ್ಸ್ ಶತಕದ ಗಡಿ ಮುಟ್ಟಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ನಗರದ ತರಕಾರಿ ಮಾರುಕಟ್ಟೆಯಲ್ಲಿ ಕೆ.ಜಿ ಬೀನ್ಸ್ ₹ 80 ರಿಂದ ₹ 100ರವರೆಗೆ ಮಾರಾಟವಾಗುತ್ತಿದೆ. ನೀರಿನ ಕೊರತೆ, ಬಿಸಿಲಿನ ತಾಪ ಏರಿಕೆ, ಇಳುವರಿ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ತರಕಾರಿ ದರ ಏರುಮುಖವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಮಾರುಕಟ್ಟೆಗೆ ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವುದು ಹಾಗೂ ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳು ನಡೆಯುತ್ತಿರುವುದು ಕೂಡ ಬೀನ್ಸ್ ದರ ಏರಿಕೆಯಾಗಲು ಕಾರಣ. ಈರೇಕಾಯಿ 60, ಗೆಡ್ಡೆಕೋಸು 60, ಕ್ಯಾಪ್ಸಿಕಂ 70, ನುಗ್ಗೆಕಾಯಿ 120 ಸೇರಿದಂತೆ ಹಲವು ತರಕಾರಿಗಳು ಏರುಮುಖವಾಗಿವೆ ಎನ್ನುತ್ತಾರೆ ವ್ಯಾಪಾರಿ ಕೃಷ್ಣಮೂರ್ತಿ.
ತಿಂಗಳ ಹಿಂದೆ ಕುಸಿತ ಕಂಡಿದ್ದ ಏಲಕ್ಕಿ ಬಾಳೆಹಣ್ಣು ಹೆಚ್ಚಾಗಿದ್ದು ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹ 80 ರಿಂದ ₹ 100ವರೆಗೆ ದರ ಇದೆ. ಪಚ್ಚಬಾಳೆ ಕೆ.ಜಿಗೆ 40 ಇದೆ. ಸೇಬು 200ರ ಗಡಿ ದಾಟಿದ್ದು ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸೀಸನ್ನಲ್ಲಿ ಕೆ.ಜಿಗೆ 100ಕ್ಕೆ ಸಿಗುತ್ತಿದ್ದ ಸೇಬಿನ ಬೆಲೆ ದ್ವಿಗುಣವಾಗಿದೆ. ಮಾರುಕಟ್ಟೆಗೆ ಹಸಿರು ದ್ರಾಕ್ಷಿ ಲಗ್ಗೆಯಿಟ್ಟಿದ್ದು ಕೆ.ಜಿಗೆ ₹ 200 ತಲುಪಿದ್ದು ದುಬಾರಿಯಾಗಿದೆ. ಕಿತ್ತಳೆಯೂ 80 ರಿಂದ 100 ಮುಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.