ADVERTISEMENT

ಕಂಟೈನ್‌ಮೆಂಟ್‌ ಪ್ರದೇಶಗಳಿಗೆ ಡಿ.ಸಿ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 16:11 IST
Last Updated 4 ಜುಲೈ 2020, 16:11 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಚಾಮರಾಜನಗರದ ವಿವಿಧ ಕಂಟೈನ್‌ಮೆಂಟ್‌ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಚಾಮರಾಜನಗರದ ವಿವಿಧ ಕಂಟೈನ್‌ಮೆಂಟ್‌ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಾಮರಾಜನಗರ: ಕೋವಿಡ್–19 ದೃಢಪಟ್ಟಿರುವ ನಗರದ ವಿವಿಧ ಕಂಟೈನ್‌ಮೆಂಟ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಶನಿವಾರ ಭೇಟಿ ನೀಡಿ ಅಲ್ಲಿ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ನಗರದ ಪೊಲೀಸ್ ವಸತಿಗೃಹ, ಭ್ರಮರಾಂಬ ಬಡಾವಣೆ, ರೈಲ್ವೆ ಬಡಾವಣೆ, ಭಗೀರಥ ನಗರ, ಬಳೆಗಾರರ ಬೀದಿ, ಗಾಣಿಗರ ಬೀದಿ, ಸೇರಿದಂತೆ ವಿವಿಧ ಕಂಟೈನ್‌ಮೆಂಟ್ ವಲಯಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

‘ಕಂಟೈನ್‌ಮೆಂಟ್ ವಲಯದಲ್ಲಿ ಬರುವ ಬಡವಾಣೆಗಳು, ಮನೆಗಳಿಗೆ ಮೂಲಸೌಕರ್ಯ ಕೊರತೆಯಾಗಬಾರದು. ಕುಡಿಯುವ ನೀರು, ಹಾಲು, ಔಷಧ, ದಿನಸಿ ಪದಾರ್ಥಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪಡಿತರ ಚೀಟಿದಾರರಿಗೆ ಪಡಿತರ ಪದಾರ್ಥಗಳು ಅಧಿಕಾರಿಗಳೇ ತಲುಪಿಸಬೇಕು. ಇದಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಯವರು ನಿಯೋಜನೆಗೊಳಿಸಿ, ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಡಾ.ಎಂ.ಆರ್.ರವಿ ಅವರು ಸೂಚಿಸಿದರು.

ADVERTISEMENT

‘ಪ್ರತಿ ಮನೆಯ ದೂರವಾಣಿ ಸಂಖ್ಯೆ ಪಡೆದುಕೊಳ್ಳಬೇಕು. ಪ್ರತಿದಿನ ಕನಿಷ್ಠ ಮೂರು ಬಾರಿ ದೂರವಾಣಿ ಕರೆ ಮಾಡಿ ನಾಗರಿಕರಿಗೆ ಯಾವ ನೆರವು ಬೇಕಿದೆ, ಯಾವ ಅವಶ್ಯಕ ವಸ್ತುಗಳು ತಲುಪಿಸಬೇಕಿದೆ ಎಂಬ ಬಗ್ಗೆ ಕೇಳಬೇಕು. ಯಾವ ವಸ್ತುಗಳನ್ನು ಪೂರೈಸಲಾಗಿದೆ ಎಂಬ ಬಗ್ಗೆ ನಮೂದು ಮಾಡಿಕೊಳ್ಳಬೇಕು. ದಿನಸಿ, ಹಣ್ಣು ತರಕಾರಿ ಸೇರಿದಂತೆ ದಿನಬಳಕೆಯ ಅವಶ್ಯಕ ಸಾಮಗ್ರಿಗಳನ್ನು ವಿಳಂಬ ಮಾಡದೇ ತಲುಪಿಸಬೇಕು’ ಎಂದರು.

‘ಕಂಟೈನ್‌ಮೆಂಟ್ ಪ್ರದೇಶದಲ್ಲಿ ಬರುವ ಸೋಂಕಿತರ ಸಂಪರ್ಕಕ್ಕೆ ಒಳಗಾದವರು, ಆರೋಗ್ಯ ಕಾಳಜಿಗಾಗಿ ಗುರುತಿಸಲಾಗಿರುವ ವಿಶೇಷ ವರ್ಗದವರು, ಇತರೆ ಎಲ್ಲರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ವಿವರಗಳನ್ನು ಕಲೆ ಹಾಕಿ ವಿಶೇಷ ನಿಗಾ ವಹಿಸಬೇಕು’ ಎಂದು ಅವರು ಹೇಳಿದರು.

ತಹಶೀಲ್ದಾರ್ ಚಿದಾನಂದ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ನಗರಸಭೆ ಆಯುಕ್ತ ಎಂ.ರಾಜಣ್ಣ, ಹಿರಿಯ ಆರೋಗ್ಯ ನಿರೀಕ್ಷಕ ಶರವಣ, ಕಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಬ್ರಮಣಿ, ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.