ADVERTISEMENT

ಚಾಮರಾಜನಗರ: ಪದವಿ ವಿದ್ಯಾರ್ಥಿಗಳಿಗೆ ಇತಿಹಾಸದ ಮೇಷ್ಟ್ರಾದ ಜಿಲ್ಲಾಧಿಕಾರಿ!

20 ವರ್ಷಗಳ ಹಿಂದೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಾ.ಎಂ.ಆರ್‌.ರವಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 13:05 IST
Last Updated 2 ಫೆಬ್ರುವರಿ 2021, 13:05 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಮಂಗಳವಾರ ಪಾಠ ಮಾಡಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಮಂಗಳವಾರ ಪಾಠ ಮಾಡಿದರು   

ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಮಂಗಳವಾರ ಬೆಳಿಗ್ಗೆ ಅಚ್ಚರಿ ಕಾದಿತ್ತು.

ಮೊದಲ ತರಗತಿಗೆ ತಮ್ಮ ಕಾಯಂ ಪ್ರಾಧ್ಯಾಪಕರೇ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿದ್ದರು. ಆದರೆ, ಪಾಠ ಹೇಳಲು ತರಗತಿಗೆ ಬಂದವರು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು.

ಕರ್ನಾಟಕ ಆಡಳಿತ ಸೇವೆಗೆ (ಕೆಎಎಸ್‌) ಸೇರುವುದಕ್ಕೂ ಮೊದಲು ಎಂ.ಆರ್‌.ರವಿ ಅವರು ಬೋಧನಾ ವೃತ್ತಿಯಲ್ಲಿದ್ದವರು. 1992ರಿಂದ 2001ರವರೆಗೂ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.

ADVERTISEMENT

ಮಂಗಳವಾರ ಬೆಳಿಗ್ಗೆ ಎಂ.ಆರ್.ರವಿ ಅವರು, ಜಿಲ್ಲಾಧಿಕಾರಿ ಕೆಲಸಕ್ಕೆ ಒಂದಷ್ಟು ಹೊತ್ತು ಬಿಡುವು ನೀಡಿ ಪ್ರಾಧ್ಯಾಪಕರಾದರು. 20 ವರ್ಷಗಳ ಬಳಿಕ ತಾವು ಬೋಧಿಸಿದ ಕಾಲೇಜಿನಲ್ಲೇ ಮತ್ತೆ ಮೇಷ್ಟ್ರಾದರು.

‘ನಾನು ಜಿಲ್ಲಾಧಿಕಾರಿ ಎಂಬುದನ್ನು ಮರೆತುಬಿಡಿ. ಮೇಷ್ಟ್ರಾಗಿ ಬಂದಿದ್ದೇನೆ. 20 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಪಾಠ ಮಾಡಿದ್ದೇನೆ’ ಎಂದು ಮಾತು ಆರಂಭಿಸಿದ ರವಿ ಅವರು, ಒಂದೂಕಾಲು ಗಂಟೆ ಮೈಸೂರು ಒಡೆಯರ ಸಂಸ್ಥಾನದ ಬಗ್ಗೆ, ಸಂಸ್ಥಾನ ಹಾಗೂ ಚಾಮರಾಜನಗರದ ನಡುವಿನ ಬಾಂಧವ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಲೇಜು ಪ್ರಾಂಶುಪಾಲರಾದ ಪ್ರೇಮಲತಾ ಅವರು, ‘ಜಿಲ್ಲಾಧಿಕಾರಿ ಅವರು ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು ನಮಗೆ ಖುಷಿ ತಂದಿದೆ. ಅಧ್ಯಾಪನಾ ವೃತ್ತಿಯ ಬಗ್ಗೆ ಅವರಿಗೆ ಅಭಿಮಾನವಿದ್ದು, ಬುಧವಾರವೂ ಅವರು ಪಾಠ ಮಾಡಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.