ಯಳಂದೂರು: ಆಷಾಢ ಮಾಸದ ಮೂರನೇ ಶುಕ್ರವಾರ ಮತ್ತು ಶನಿವಾರದ ವಿಶೇಷ ಪೂಜೆ, ಚಾಮುಂಡೇಶ್ವರಿ ವರ್ಧಂತಿ ಉತ್ಸವದ ಅಂಗವಾಗಿ ಭಕ್ತರು ವಿವಿಧ ದೇಗುಲಗಳಿಗೆ ಭೇಟಿ ನೀಡಿ ಅಲಂಕೃತ ದೇವಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.
ಬಿಳಿಗಿರಿಬೆಟ್ಟದ ಅಮ್ಮನವರ ದೇವಳ ಮತ್ತು ರಂಗನಾಥಸ್ವಾಮಿ ದೇವಾಲಯ, ಪಟ್ಟಣದ ವೆಂಕಟೇಶ್ವರ ದೇಗುಲದ ಸಪ್ತಮಾತೃಕೆ, ಮಹಾಲಕ್ಷ್ಮಿ ಮತ್ತು ಅಂಬಳೆ ಚಾಮುಂಡೇಶ್ವರಿ ದೇವಳದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.
ಚಾಮುಂಡೇಶ್ವರಿ ದೇವಿಗೆ ಹೂವಿನ ಅಲಂಕಾರ ಮಾಡಿ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಮಹಾಲಕ್ಷ್ಮಿ ದೇವಿಗೆ ಕುಂಕುಮದ ಅಲಂಕಾರ, ವೆಂಕಟೇಶ್ವರನಿಗೆ ತುಳಸಿ ಮತ್ತು ಹೂವಿನ ಹಾರಗಳ ಸಿಂಗಾರ ಗಮನ ಸೆಳೆಯಿತು.
ಕೆಸ್ತೂರು ಗ್ರಾಮದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕಂಡಾಯ ಉತ್ಸವ ನಡೆಯಿತು. ಗ್ರಾಮಸ್ಥರು ಹೂ, ಹಣ್ಣು, ಹಾರ ಸಮರ್ಪಿಸಿದರು. ಸಂಜೆ ಮೆರವಣಿಗೆ ನಡೆಸಿ ತೀರ್ಥ ಪ್ರಸಾದ ವಿತರಿಸಲಾಯಿತು.
‘ಬೆಳಿಗ್ಗೆ ಮಹಾ ಮಂಗಳಾರತಿ ಮಾಡಿ, ಸಂಜೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಲಾಯಿತು. ನೂರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು’ ಎಂದು ಬಿಳಿಗಿರಿಬೆಟ್ಟದ ಅರ್ಚಕ ರವಿಕುಮಾರ್ ತಿಳಿಸಿದರು.
‘ಪ್ರತಿವರ್ಷ ಆಷಾಢ ಮಾಸದಲ್ಲಿ ದೇವಿಯ ದರ್ಶನ ಪಡೆಯುತ್ತೇವೆ, ದೇವರಿಗೆ ಧೂಪ, ದೀಪ ಬೆಳಗಿ ಹರಕೆ ತೀರಿಸುತ್ತೇವೆ. ಇದರಿಂದ ದೇವರು ಸನ್ಮಂಗಳ ಕರುಣಿಸುತ್ತಾನೆ’ ಎಂದು ಭಕ್ತ ಸಂಗಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.