ADVERTISEMENT

ಶೆಟ್ಟಹಳ್ಳಿ ಪುನರ್ವಸತಿ ನೋಡಿ ಒಪ್ಪಿಕೊಂಡರು...

ಹುಣಸೂರು ತಾಲ್ಲೂಕಿಗೆ ಭೇಟಿ ನೀಡಿ ಯೋಜನೆ ಪರಿಶೀಲಿಸಿದ್ದ ಚಂಗಡಿ ಗ್ರಾಮಸ್ಥರು

ಬಿ.ಬಸವರಾಜು
Published 18 ಅಕ್ಟೋಬರ್ 2021, 16:06 IST
Last Updated 18 ಅಕ್ಟೋಬರ್ 2021, 16:06 IST
ಚಂಗಡಿ ಕರಿಯಪ್ಪ
ಚಂಗಡಿ ಕರಿಯಪ್ಪ   

ಹನೂರು: ಬೇರೆ ಕಡೆಗೆ ಸ್ಥಳಾಂತರಕ್ಕೆ ಮನಸ್ಸು ಮಾಡಿದ್ದರೂ, ಹೊಸ ಜಾಗದಲ್ಲಿ ಹೇಗೋ ಏನೋ ಎಂಬ ಅಳುಕು ಚಂಗಡಿ ಗ್ರಾಮಸ್ಥರಲ್ಲಿ ಇತ್ತು. ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿಗೆ ಹೋಗಿ ಅಲ್ಲಿ ಅನುಷ್ಠಾನಗೊಂಡಿದ್ದ ಪುನರ್ವಸತಿ ಯೋಜನೆಯನ್ನು ಕಂಡು ಗ್ರಾಮಸ್ಥರು ಸ್ಥಳಾಂತರಗೊಳ್ಳುವ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ನಾಗರಗೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿದ್ದ 140 ಕುಟುಂಬಗಳನ್ನು 2010ರಲ್ಲಿ ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಕುಟುಂಬಗಳಿಗೆ ಮನೆ ನಿರ್ಮಿಸಿ, ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಅರಣ್ಯದಿಂದ ಸ್ಥಳಾಂತರಗೊಂಡವರಿಗೆ ಮೂರು ಎಕರೆ ಜಮೀನು ಕೂಡ ನೀಡಲಾಗಿತ್ತು.

ಚಂಗಡಿ ಗ್ರಾಮಸ್ಥರಿಗೆ ಸ್ಥಳಾಂತರ ಯೋಜನೆಯ ಪರಿಕಲ್ಪನೆಯನ್ನು ವಿವರಿಸುವ ಉದ್ದೇಶದಿಂದಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು ಗ್ರಾಮಸ್ಥರ ನಿಯೋಗವನ್ನು ಶೆಟ್ಟಹಳ್ಳಿಗೆ ಕಳುಹಿಸಲು ನಿರ್ಧರಿಸಿದ್ದರು.

ADVERTISEMENT

2016ರಲ್ಲಿಕೌದಳ್ಳಿ ವಲಯ ಅರಣ್ಯಾಧಿಕಾರಿಯಾಗಿದ್ದ ಲೋಕೇಶ್ ಮೂರ್ತಿ ಅವರ ನೇತೃತ್ವದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಚಂಗಡಿ ಗ್ರಾಮದವರಾದ ರೈತ ಮುಖಂಡ ಕರಿಯಪ್ಪ ಸೇರಿದಂತೆ ಗ್ರಾಮದ 60 ಮಂದಿ ಶೆಟ್ಟಹಳ್ಳಿಗೆ ತೆರಳಿ ಅಲ್ಲಿನ ಪುನರ್ವಸತಿ ಕೇಂದ್ರವನ್ನೂ ನೋಡಿ ಬಂದಿದ್ದರು. ನಾಗರಹೊಳೆ ಅರಣ್ಯದಿಂದ ಸ್ಥಳಾಂತರಗೊಳ್ಳಲು ಒಪ್ಪಿದ್ದಪ್ರತಿ ಕುಟುಂಬಕ್ಕೂ ಒಂದು ಮನೆ, 3 ಎಕರೆ ಜಮೀನು ಹಾಗೂ ₹50 ಸಾವಿರ ನಗದು ಹಣ ಸೇರಿ ₹10 ಲಕ್ಷ ವೆಚ್ಚದ ಪ್ಯಾಕೇಜ್ ನೀಡಲಾಗಿತ್ತು.

‘ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯಗಳಿಂದ ವಂಚಿತಗೊಂಡು ಬದುಕುತ್ತಿದ್ದ ನಮಗೆ ಹುಣಸೂರಿನ ಶೆಟ್ಟಹಳ್ಳಿಯಲ್ಲಿ ಕಲ್ಪಿಸಲಾಗಿದ್ದ ಪುನರ್ವಸತಿ ಕಂಡು ಬಹಳ ಸಂತಸವಾಯಿತು. ಅಂದು ಹೋಗಿದ್ದ ಗ್ರಾಮಸ್ಥರೆಲ್ಲ, ‘ನಮಗೂ ಈ ರೀತಿ ಸೌಲಭ್ಯ ಕಲ್ಪಿಸಿಕೊಟ್ಟರೆ ನಾವು ಬೇರೆ ಕಡೆಗೆ ಹೋಗೋಣ’ ಎಂದು ತೀರ್ಮಾನ ಮಾಡಿದೆವು. ಪ್ರತಿ ಕುಟುಂಬಕ್ಕೂ ಒಂದು‌ ಮನೆ, ಮೂರು ಎಕರೆ ಜಮೀನು ಹಾಗೂ ಸ್ವಲ್ಪ ನಗದು ಹಣ ಸೇರಿ ಪ್ಯಾಕೇಜ್ ನೀಡಲಾಗಿದೆ. ಪ್ರಾರಂಭದಲ್ಲಿ ಎರಡು ವರ್ಷ ಅರಣ್ಯ ಇಲಾಖೆಯೇ ಇಡೀ ಕಾಲೊನಿಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿ ಬಳಿಕ ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ನಮಗೆ ನೀಡಿದ್ದರು’ ಎಂದು ಚಂಗಡಿ ಕರಿಯಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳ ಗುರುತಿಸುವ ಸವಾಲು

ಹುಣಸೂರು ಭೇಟಿಯ ಬಳಿಕ ಅರಣ್ಯ ಅಧಿಕಾರಿಗಳು ಮಹದೇಶ್ವರ ಬೆಟ್ಟದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಶೆಟ್ಟಹಳ್ಳಿಯ ಮಾದರಿಯಲ್ಲಿ ಪುನರ್ವಸತಿ ಕಲ್ಪಿಸುವುದಾದರೆ ಗ್ರಾಮ ತೊರೆಯಲು ಸಿದ್ಧ ಎಂಬ ಸ್ಪಷ್ಟ ನಿರ್ಧಾರವನ್ನು ಚಂಗಡಿ ನಿವಾಸಿಗಳು ಅಧಿಕಾರಿಗಳ ಮುಂದೆ ಇಟ್ಟರು.

ಪುನರ್ವಸತಿಗಾಗಿ ಜಾಗ ಗುರುತಿಸುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತು. ಗ್ರಾಮ ಸ್ಥಳಾಂತರಕ್ಕೆ ಅರಣ್ಯ ಇಲಾಖೆಯ ಜಾಗವನ್ನು ಬಳಸಬೇಕಾದರೆ ಅದಕ್ಕೆ ಪರಿಸರ ಮತ್ತು ಅರಣ್ಯ ಸಚಿವವಾಲಯದ ಅನುಮತಿ ಕಡ್ಡಾಯವಾಗಿ ಬೇಕು. ಅನುಮತಿ ಪಡೆಯುವ ಪ್ರಕ್ರಿಯೆಗೆ ದೀರ್ಘ ಸಮಯ ಹಿಡಿಯುವುದರಿಂದ, ಜಿಲ್ಲಾಡಳಿತದ ಸಹಕಾರದೊಂದಿಗೆ ಕಂದಾಯ ಭೂಮಿಯನ್ನೇ ಗುರುತಿಸುವ ಯೋಜನೆಯನ್ನು ಅರಣ್ಯ ಅಧಿಕಾರಿಗಳು ಹಾಕಿಕೊಂಡರು.

ಸತ್ತೇಗಾಲ, ಶಾಗ್ಯ ಹಾಗೂ ಚಿಕ್ಕಲ್ಲೂರು ಬಳಿ ಇರುವ ಕಂದಾಯ ಭೂಮಿಯ ಪ‍ರಿಶೀಲನೆ ನಡೆಸಿದರು. ಆದರೆ ಜಾಗದ ಒತ್ತುವರಿ, ಸಾಕಷ್ಟು ಜಮೀನಿನ ಕೊರತೆಯಿಂದ ಕಂದಾಯ ಭೂಮಿಯನ್ನು ಬಿಟ್ಟು ಎಲ್ಲೆಮಾಳದ ಬಳಿಯಿರುವ ಗುಡ್ಡದ ಆಂಜನೇಯ ದೇವಾಲಯದ ಮುಂಭಾಗದ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಲಾಯಿತು.

ಆ ಪ್ರದೇಶಕ್ಕೆ ಅರಣ್ಯಕ್ಕೆ ಹತ್ತಿರ ಇರುವುದರಿಂದ ನಿವಾಸಿಗಳಿಗೆ ಜೀವನ ನಿರ್ವಹಣೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಅದನ್ನೂ ಕೈ‌ಬಿಡಲಾಯಿತು. ಇದಾದ ಬಳಿಕ ಎರಡು ವರ್ಷಗಳವರೆಗೆ ಪುನರ್ವಸತಿ ಯೋಜನೆ ನನೆಗುದಿಗೆ ಬಿತ್ತು.

--

ಶೆಟ್ಟಹಳ್ಳಿ ಪುನರ್ವಸತಿ ಗ್ರಾಮಸ್ಥರಿಗೆಲ್ಲ ಖುಷಿ ತಂದಿತ್ತು. ಮೂಲಸೌಕರ್ಯಗಳಿಲ್ಲದೇ ಬದುಕುವ ಬದಲು, ಸೌಕರ್ಯ ಇರುವ ಹೊಸ ಊರಿಗೆ ಹೋಗಲು ಸಮ್ಮತಿಸಿದೆವು
ಚಂಗಡಿ ಕರಿಯಪ್ಪ, ಗ್ರಾಮದ ಮುಖಂಡ

------

ನಮಗೆ ಪುನರ್ವಸತಿ ಕಲ್ಪಿಸುವುದಾಗಿ ನಾಲ್ಕೈದು ಸ್ಥಳಗಳನ್ನು ಅರಣ್ಯ ಇಲಾಖೆ ಗುರುತಿಸಿತ್ತು. ಆದರೆ, ಅದ್ಯಾವುದೂ ಹೊಂದಿಕೆಯಾಗಿರಲಿಲ್ಲ. ಈಗ ಅಂತಿಮವಾಗಿದೆ
ಬಸವರಾಜು. ಚಂಗಡಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.